ಉಡುಪಿ: ಶ್ರೀರಾಮ ಬಾಲ ಭಜನಾ ಮಂಡಳಿಗೆ ಚಾಲನೆ

| Published : Oct 08 2024, 01:07 AM IST

ಸಾರಾಂಶ

ಉಡುಪಿ ವಿಭುದಪ್ರಿಯ ನಗರದ ನಾಗಬನದಲ್ಲಿ ವಿಶೇಷವಾಗಿ ಮಕ್ಕಳಿಗಾಗಿಯೇ ಶ್ರೀರಾಮ ಬಾಲ ಭಜನಾ ಸಂಘವನ್ನು ಭಾನುವಾರ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ವಿಭುದಪ್ರಿಯ ನಗರದ ನಾಗಬನದಲ್ಲಿ ವಿಶೇಷವಾಗಿ ಮಕ್ಕಳಿಗಾಗಿಯೇ ಶ್ರೀರಾಮ ಬಾಲ ಭಜನಾ ಸಂಘವನ್ನು ಭಾನುವಾರ ಉದ್ಘಾಟಿಸಲಾಯಿತು.

ನಾಗಬನದ ಪ್ರಧಾನ ಅರ್ಚಕ ನಂದನ್ ಭಟ್ ಸಂಘವನ್ನು ಉದ್ಘಾಟಿಸಿ, ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಿಳಿಸುವುದು ಪೋಷಕರಾದ ನಮ್ಮ ಕರ್ತವ್ಯ ಎಂದರು.

ಅಲ್ಲದೇ ವಿಭುದಪ್ರಿಯ ನಾಗಬನದಲ್ಲಿ ಇಂತಹ ಅದೆಷ್ಟೋ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಈ ದಿನ ಮಕ್ಕಳಿಗಾಗಿ ವಿಶೇಷ ಭಜನಾ ಸಂಘ ಉದ್ಘಾಟನೆಗೊಂಡಿರುವುದು ನಮಗೆಲ್ಲ ಸಂತಸದ ವಿಷಯ. ಈ ಭಜನಾ ಸಂಘವು ಮುಖ್ಯವಾಗಿ ಮಕ್ಕಳಲ್ಲಿ ಧಾರ್ಮಿಕ ಮನೋಭಾವವನ್ನು ಬೆಳೆಸಲಿ ಎಂದು ಶುಭ ಹಾರೈಸಿದರು.ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಭಜನಾ ಮಂದಿರಗಳಲ್ಲಿ ಮಕ್ಕಳಿಗಾಗಿಯೇ ಒಂದು ಪ್ರತ್ಯೇಕವಾದ ವಿಶೇಷ ತಂಡವನ್ನು ರಚಿಸಬೇಕು ಎಂದವರು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಸ್ಥಳೀಯ ಗಣ್ಯರಾದ ನಾರಾಯಣ ಉಪಾಧ್ಯಾಯ, ಊರಿನ ಹಿರಿಯರು, ಮಕ್ಕಳು ನಾಗಬನದ ಸಮನ್ವಯಕಾರರಾದ ಬಾಬು ಮಣಿಪಾಲ ಉಪಸ್ಥಿತರಿದ್ದರು.