ಆಸಕ್ತಿ ಮೂಡಿಸಿ ಯಕ್ಷಗಾನ ಕಲೆ ಬೆಳೆಸಲು ಸಾಧ್ಯ: ಡಾ.ಎಚ್‌.ಎಸ್‌.ಬಲ್ಲಾಳ್‌

| Published : Jan 31 2024, 02:20 AM IST

ಆಸಕ್ತಿ ಮೂಡಿಸಿ ಯಕ್ಷಗಾನ ಕಲೆ ಬೆಳೆಸಲು ಸಾಧ್ಯ: ಡಾ.ಎಚ್‌.ಎಸ್‌.ಬಲ್ಲಾಳ್‌
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷಗಾನ ಕೇಂದ್ರ ಇಂದ್ರಾಳಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಕಾರದೊಂದಿಗೆ ನಡೆದ ೫೧ನೇ ವಾರ್ಷಿಕೋತ್ಸವ ಹಾಗೂ ದಿ. ಎಂ.ಎಂ ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪಾರಂಪರಿಕ ಯಕ್ಷಗಾನ ಕಲೆ ಪ್ರೋತ್ಸಾಹಿಸಿ ಬೆಳೆಸುವ ಹಾಗೂ ಯುವಕರಿಗೆ ಯಕ್ಷಶಿಕ್ಷಣ ನೀಡುವ ಉದ್ದೇಶದಿಂದ ಡಾ. ಕೆ. ಶಿವರಾಮ ಕಾರಂತ ಹಾಗೂ ಕು.ಶಿ ಹರಿದಾಸ ಭಟ್ಟರು ಆಸಕ್ತಿಯಿಂದ ಹುಟ್ಟಿಕೊಂಡ ಯಕ್ಷಗಾನ ಕೇಂದ್ರ ಇಂದು ಮಾಹೆಯ ಸರ್ವರೀತಿಯ ಪ್ರೋತ್ಸಾಹದಿಂದ ಬೆಳೆಯುತ್ತಿದೆ. ಅಲ್ಲದೆ ಯುವ ಜನತೆಗೆ ಯಕ್ಷಗಾನದಲ್ಲಿ ಆಸಕ್ತಿ ಮೂಡಿಸುವ ಮೂಲಕ ಯಕ್ಷಗಾನ ಕಲೆ ಬೆಳೆಸಲು ಸಾಧ್ಯವಿದೆ ಎಂದು ಮಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದ್ದಾರೆ.

ಯಕ್ಷಗಾನ ಕೇಂದ್ರ ಇಂದ್ರಾಳಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಕಾರದೊಂದಿಗೆ ನಡೆದ ೫೧ನೇ ವಾರ್ಷಿಕೋತ್ಸವ ಹಾಗೂ ದಿ. ಎಂ.ಎಂ ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನದಲ್ಲಿ ಯುವಜನತೆ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಯಕ್ಷಗಾನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಗುರುಕುಲ ಪದ್ಧತಿಯಂತೆ ಶಿಕ್ಷಣದ ಜೊತೆಗೆ ಯಕ್ಷಗಾನ ಕಲಿಸಲಾಗುತ್ತಿದೆ ಎಂದರು.

ಯಕ್ಷಗಾನ ಮೇಳಗಳ ಯಜಮಾನ, ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೋಡಾಟದ ಪ್ರಕ್ರಿಯೆಗಳು ನಿಂತು ಹೋಗಿ ಕೂಡಾಟ ಆರಂಭವಾಗಿದೆ. ಜೋಡಾಟದ ಆಯೋಜನೆಯಲ್ಲ ಎಂ.ಎಂ. ಹೆಗ್ಡೆಯವರದ್ದು ಮೇರು ವ್ಯಕ್ತಿತ್ವವಾಗಿತ್ತು ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ರಾಧಾ ಡೆವಲಪರ್ಸ್ ಆಡಳಿತ ನಿರ್ದೇದಶಕ ಮನೋಹರ ಶೆಟ್ಟಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ ತಲ್ಲೂರು ಶಿವರಾಮ ಶೆಟ್ಟಿ ಶುಭಸಂಶನೆಗೈದರು. ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಶೆಣೈ, ಭುವನ ಪ್ರಸಾದ್ ಹೆಗ್ಡೆ, ಮಂಜುನಾಥ ಮಯ್ಯ, ಪೂರ್ಣಿಮಾ ಸುರೇಶ್ ಇದ್ದರು.

ಕೇಂದ್ರದ ಭಾಗವತ ಉಮೇಶ್ ಸುವರ್ಣ ಅವರಿಗೆ ದಿ. ಎಂ.ಎಂ ಹೆಗ್ಡೆ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ.ಎಂ. ಹೆಗ್ಡೆ ಟ್ರಸ್ಟ್ ವತಿಯಿಂದ ಹಿರಿಯ ಕಲಾವಿದ ಆನಂದ ರಾವ್ ಉಪ್ಪಿನಕುದ್ರು ಅವರಿಗೆ ಸಹಾಯಧನ ವಿತರಿಸಲಾಯಿತು.

ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿ, ವಂದಿಸಿದರು.

ಆರಂಭದಲ್ಲಿ ಕೇಂದ್ರದಲ್ಲಿ ತರಬೇತಿಗೊಂಡ ವಿವಿಧ ಹಂತಗಳ ಯಕ್ಷಗಾನದ ವಿದ್ಯಾರ್ಥಿಗಳಿಂದ ಚಂಡೆ, ಮದ್ದಳೆ, ಭಾಗವತಿಕೆ, ಪೀಠಿಕಾ ಭಾಗದ ನೃತ್ಯಗಳು ಪ್ರದರ್ಶನಗೊಂಡವು. ನಂತರ ಕೇಂದ್ರದ ವಿದ್ಯಾರ್ಥಿಗಳಿಂದ ವಿದ್ಯುನ್ಮತಿ ಕಲ್ಯಾಣ ಹಾಗೂ ಹವ್ಯಾಸಿ ಕಲಾವಿದರಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ನಡೆಯಿತು.