ಸಾರಾಂಶ
ಸಿಡಿ ಕಂಬಕ್ಕೆ ಸಿಡಿ ಆಡುವರನ್ನು ಹಗ್ಗದಿಂದ ಬೆನ್ನಿಗೆ ಕಟ್ಟಿ ದೇವಿಯ ಘೋಷಣೆಯೊಂದಿಗೆ ಕಂಬವನ್ನು ಮೂರ್ನಾಲ್ಕು ಸುತ್ತು ತಿರುಗಿಸಲಾಯಿತು. ಹೀಗೆಯೇ ಒಬ್ಬರಾದ ಮೇಲೆ ಒಬ್ಬರಂತೆ ನಾಲ್ಕು ಮಂದಿಯಿಂದ ಸಿಡಿ ಆಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಗ್ರಾಮ ದೇವತೆ ಶ್ರೀ ಉಡುಸಲಮ್ಮನವರ ಆಶ್ಚರ್ಯ ಸಿಡಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖ ಶನಿವಾರ ಸಂಜೆ ನೆರವೇರಿತು.ಪಟ್ಟಣ ಸೇರಿದಂತೆ ಆಸುಪಾಸಿನ ಸುಮಾರು 12ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಶ್ರದ್ಧಾ- ಭಕ್ತಿಯಿಂದ ದೇವಿಯನ್ನು ಆರಾಧಿಸುವರು. ಆಶ್ಚರ್ಯ ಸಿಡಿ ಕಂಬಕ್ಕೇರುವ ಅಗ್ನಿವಂಶದ ಸಿ.ಎನ್. ಕುಮಾರ್, ಲೋಕೇಶ್, ಮಲ್ಲಿಕಾರ್ಜುನಯ್ಯ, ಮುರುಳೀಧರ್ ರವರು ಶನಿವಾರದ ಮುಂಜಾನೆಯಿಂದಲೇ ಉಪವಾಸ ವ್ರತ ಕೈಗೊಂಡು ಸಿಡಿ ಆಡುವ ಮೂಲಕ ತಮ್ಮ ಹರಕೆ ತೀರಿಸಿದರು.
ಇದಕ್ಕೂ ಮುನ್ನ ಶ್ರೀ ಬೇಟೆ ರಾಯಸ್ವಾಮಿ ದೇವಾಲಯದ ಪ್ರಾಂಗಣಕ್ಕೆ ಕೊಂಬು ಕಹಳೆ, ಅರೆ ವಾದ್ಯದೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕೆಂಪು ಮತ್ತು ಕರಿ ಸೋಮಗಳೊಂದಿಗೆ ಕರೆ ತರಲಾಗುವುದು. ಕರಿ ಸೋಮಗಳು ಸಿಡಿಯವರ ಬೀದಿಗೆ ತೆರಳಿ ಅಲ್ಲಿರುವ ಸಿಡಿ ಆಡುವವರನ್ನು ವಾದ್ಯಗಳ ನಾದದೊಂದಿಗೆ ಬೇಟೆ ರಾಯಸ್ವಾಮಿ ದೇವಾಲಯಕ್ಕೆ ಕರೆ ತರಲಾಯಿತು. ನಂತರ ಉಡುಸಲಮ್ಮ ದೇವಾಲಯದ ಬಳಿ ಉತ್ಸವ ಮೂರ್ತಿ, ಸಿಡಿಯವರು ಮತ್ತು ಸೋಮಗಳು ತೆರಳಿದವು. ದೇವಾಲಯದ ಎದುರಿನ ಮಂಟಪದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಉಯ್ಯಾಲೋತ್ಸವ ನಡೆಸಲಾಯಿತು.ಸಿಡಿ ಕಂಬಕ್ಕೆ ಸಿಡಿ ಆಡುವರನ್ನು ಹಗ್ಗದಿಂದ ಬೆನ್ನಿಗೆ ಕಟ್ಟಿ ದೇವಿಯ ಘೋಷಣೆಯೊಂದಿಗೆ ಕಂಬವನ್ನು ಮೂರ್ನಾಲ್ಕು ಸುತ್ತು ತಿರುಗಿಸಲಾಯಿತು. ಹೀಗೆಯೇ ಒಬ್ಬರಾದ ಮೇಲೆ ಒಬ್ಬರಂತೆ ನಾಲ್ಕು ಮಂದಿಯಿಂದ ಸಿಡಿ ಆಡಿದರು.
ಉತ್ಸವದಲ್ಲಿ ಆಕರ್ಷಕ ಪಟಾಕಿಯ ಚಮತ್ಕಾರ ನಡೆಯಿತು. ರಾಷ್ಟ್ರೀಯ ಹೆದ್ದಾರಿ ರಸ್ತೆ ತನಕವೂ ಸಹಸ್ರಾರು ಭಕ್ತಾದಿಗಳು ಜಮಾಯಿಸಿ ಆಶ್ಚರ್ಯ ಸಿಡಿಯನ್ನುಕಣ್ತುಂಬಿಸಿಕೊಂಡರು.
ಆಶ್ಚರ್ಯ ಸಿಡಿ ಕಾರ್ಯಕ್ರಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು ಸೇರಿದಂತೆಅನೇಕ ಮುಖಂಡರು ಪಾಲ್ಗೊಂಡಿದ್ದರು.
ಕನ್ವಿನರ್ ಟಿ.ಕೆ. ಶ್ರೀನಿವಾಸ್, ದೇವಸ್ಥಾನದ ಅರ್ಚಕರು ಹಾಗೂ ಕಮಿಟಿ ಸದಸ್ಯರು ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು. ಪಟ್ಟಣದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು ಶಾಂತಿಯುತವಾಗಿ ಉತ್ಸವ ನೆರವೇರಿತು. ಸೋಮವಾರ ಬೆಳಗ್ಗೆ ದೇವಿಯ ರಥೋತ್ಸವವು ನೆರವೇರಲಿದೆ.