ಉಡುಪಿ: ಪೇಜಾವರ ಮಠದ ಅಧೀನದ ಇಲ್ಲಿನ ನೀಲಾವರ ಗೋಶಾಲೆಯಲ್ಲಿ ಶನಿವಾರ ಗೋಪ್ರೇಮಿಗಳಿಂದ ಗಮನ ಸೆಳೆಯುವ ವಿಶೇಷ ಕಾರ್ಯಕ್ರಮವೊಂದು ನಡೆಯಿತು.‌ ಬೆಂಗಳೂರಿನಲ್ಲಿ ಬಹುತೇಕ ಐಟಿ ಹಾಗೂ ಇತರೆ ಉದ್ಯೋಗಗಳನ್ನು ನಡೆಸುತ್ತಿರುವ ಸಮಾನ ಮನಸ್ಕ ಗೋಪ್ರೇಮಿ ಯುವಕರ ಬಳಗದ ವತಿಯಿಂದ ಗೋವುಗಳಿಗೆ ಯುಗಾದಿ ಕೌ ಪಾರ್ಟಿ ಆಚರಿಸಿ, 1800 ಕ್ಕೂ ಅಧಿಕ ಗೋವುಗಳಿಗೆ ಹಬ್ಬ ನಡೆಸಿದರು. ಈ ಯುವಕರು ಸುಮಾರು 4 ಟನ್‌ನಷ್ಟು ತಾಜಾ ಬಚ್ಚಂಗಾಯಿ (ಕಲ್ಲಂಗಡಿ) ಹಣ್ಣುಗಳನ್ನು ತಮ್ಮ ಸ್ವಂತ ಖರ್ಚಿನಿಂದ ತಂದು ಗೋವುಗಳಿಗೆ ತಿನ್ನಿಸಿ ಅವುಗಳ‍ ಸಂಭ್ರಮವನ್ನು ಕಂಡು ತಾವೂ ಸಂಭ್ರಮಿಸಿದರು. ಕಳೆದ 9 ವರ್ಷಗಳಿಂದ ಈ ಯುವಕರು ಈ ಯುಗಾದಿ ಗೋಹಬ್ಬವನ್ನು ಆಚರಿಸುತಿದ್ದಾರೆ, ಅದಕ್ಕವರು ಯುಗಾದಿ ಕೌ ಪಾರ್ಟಿ ಎಂದು ಹೆಸರಿಟ್ಟಿದ್ದಾರೆ.ಪ್ರಸ್ತುತ ಕೃಷಿ ಮತ್ತು ಗೋ ಆಧಾರಿತ ಜೀವನದಿಂದಲೇ ಯುವಜನತೆ ದೂರವಾಗುತ್ತಿರೋ ಹೊತ್ತಲ್ಲಿ ಮತ್ತೆ ಪುನಃ ಗೋವಿನೊಂದಿಗಿನ ನಂಟನ್ನು ದೃಢಪಡಿಸುವ ಈ ಯುವಕರ ಹಂಬಲ ಅಭಿನಂದನೀಯ. ಇತ್ತೀಚಿನ ದಿನಗಳಲ್ಲಿ ಈ ಗೋಶಾಲೆಯಲ್ಲಿ ಕೆಲವು ಗೋಭಕ್ತರ ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಅರವತ್ತರ ಜನ್ಮವರ್ಧಂತಿ, ಗೃಹ ಪ್ರವೇಶ ಇತ್ಯಾದಿ ಸಂಭ್ರಮಗಳನ್ನು ಗೋವುಗಳಿಗೆ ನವಧಾನ್ಯ ಮಿಶ್ರಿತ ಪಾಯಸ ದ್ರವ್ಯವನ್ನು ಗೋಶಾಲೆಯಲ್ಲಿಯೇ ತಯಾರಿಸಿ ಗೋವುಗಳಿಗೆ ತಿನ್ನಿಸಿ ಆಚರಿಸುವ ಕಾರ್ಯಕ್ರಮಗಳೂ ನಿರಂತರ ನಡೆಯುತ್ತಿದ್ದು, ಮತ್ತೇ ಸಮಾಜದಲ್ಲಿ ಗೋಪ್ರೇಮ ಜಾಗೃತಿಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.