ಘೋಷಿತ ತುರ್ತು ಪರಿಸ್ಥಿತಿಗಿಂತ ಅಘೋಷಿತ ತುರ್ತು ಪರಿಸ್ಥಿತಿ ಅಪಾಯ

| Published : May 25 2025, 01:11 AM IST / Updated: May 25 2025, 01:12 AM IST

ಸಾರಾಂಶ

ಚಾಮರಾಜನಗರದ ರೋಟರಿ ಭವನದಲ್ಲಿ ಪಿಯುಸಿಎಲ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ಶನಿವಾರ ಪತ್ರಕರ್ತ ಎ.ಡಿ.ಸಿಲ್ವಾ ಅವರ ತುರ್ತು ಪರಿಸ್ಥಿತಿ ಸೆರೆವಾಸದ ಆ ದಿನಗಳು ಕೃತಿ ಲೋಕಾರ್ಪಣೆಗೊಂಡಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಘೋಷಿತ ತುರ್ತು ಪರಿಸ್ಥಿತಿಗಿಂತ ಅಘೋಷಿತ ತುರ್ತು ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದ್ದು, ಪ್ರತಿಯೊಬ್ಬರು ಎಚ್ಚರವಹಿಸಬೇಕು ಎಂದು ಪಿಯುಸಿಎಲ್ ರಾಜ್ಯಾಧ್ಯಕ್ಷ ಅರವಿಂದ ನಾರಾಯಣ ಹೇಳಿದರು.

ನಗರದ ರೋಟರಿ ಭವನದಲ್ಲಿ ಪಿಯುಸಿಎಲ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ಶನಿವಾರ ಸಂಜೆ ನಡೆದ ಹಿರಿಯ ಪತ್ರಕರ್ತ ಎ.ಡಿ.ಸಿಲ್ವಾ ಅವರ ತುರ್ತು ಪರಿಸ್ಥಿತಿ ಸೆರೆವಾಸದ ಆ ದಿನಗಳು ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಘೋಷಿತ ತುರ್ತು ಸ್ಥಿತಿಯಿಂದ ಅಘೋಷಿತ ತುರ್ತು ಸ್ಥಿತಿಯವರೆಗೆ- ವರ್ತಮಾನದ ಸವಾಲುಗಳು ಕುರಿತು ಉಪನ್ಯಾಸ ನೀಡಿ ಮಾತನಾಡಿದರು.೧೯೭೫ರಿಂದ ೭೭ರವರಗೆ ದೇಶಾದ್ಯಂತ ಭಾರತ ಸರ್ಕಾರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರ ಮಾಡಿದ್ದೆ ಕಾನೂನಾಗಿತ್ತು. ಸರ್ಕಾರದ ವಿರುದ್ಧ ಪ್ರಶ್ನಿಸುವವರನ್ನು ಜೈಲಿಗೆ ಕಳುಹಿಸಲಾಗುತ್ತಿತ್ತು. ಮಾಧ್ಯಮಗಳ ಮೇಲೂ ನಿರ್ಬಂಧ ಹೇರಲಾಗಿತ್ತು. ದೇಶದಲ್ಲಿ ಒಂದು ರೀತಿಯ ಅಘೋಷಿತ ತುಘಲಕ್ ದರ್ಬಾರ್ ಆಡಳಿತವಿತ್ತು ಎಂದರು.ಇಂದು ನಾವು ತಿನ್ನುವ ಆಹಾರ, ಸಂಸ್ಕೃತಿ ವಿಚಾರದಲ್ಲೂ ಭಯಪಡಬೇಕಾಗಿದೆ, ಇಂದು ಯಾವುದೇ ಹೋರಾಟ ನಡೆಸಬೇಕಾದರೆ ಸಂವಿಧಾನ ಅವಲಂಬಿಸಿದ್ದೇವೆ, ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆ ಹೋಗಲಾಡಿಸಬೇಕಾದರೆ ಸಂವಿಧಾನದಿಂದ ಮಾತ್ರ ಸಾಧ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪಿಯುಸಿಎಲ್ ಉಪಾಧ್ಯಕ್ಷ ಕೆ.ವೆಂಕಟರಾಜು, ಮಾನವಹಕ್ಕುಗಳನ್ನು ಉಳಿಸುವ ಸಲುವಾಗಿಯೇ ಜಯಪ್ರಕಾಶ್ ನಾರಾಯಣ ಅವರು, ೭೦ ವರ್ಷಗಳ ಹಿಂದೆಯೇ ಪಿಯುಸಿಎಲ್ ಸ್ಧಾಪನೆ ಮಾಡಿದರು.

ಅಂಗನವಾಡಿ ಕೇಂದ್ರವೊಂದರಲ್ಲಿ ಹುಳಹುಪ್ಪಟೆ ಮಿಶ್ರಿತ ಆಹಾರ ಕೊಡುತ್ತಿದ್ದ ಪ್ರಕರಣವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಐತಿಹಾಸಿಕ ತೀರ್ಪು ಪಡೆದಿರುವುದು, ಮಲೆಮಹದೇಶ್ವರಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆ ಧ್ವಂಸ ಪ್ರಕರಣ, ಗುಂಡ್ಲುಪೇಟೆಯ ಗುಮ್ಮಕಲ್ಲು ಗುಡ್ಡ ಕುಸಿದು ಕಾರ್ಮಿಕರು ಸಾವಿಗೀಡಾದ ಪ್ರಕರಣಗಳನ್ನು ಸತ್ಯಶೋಧನೆ ನಡೆಸಿ ಸರ್ಕಾರದ ಮುಂದಿಡುತ್ತಾ ಬಂದಿದೆ. ಪಿಯುಸಿಎಲ್, ಸಂಸ್ಥೆಗೆ ಯಾರಾದರೂ ಸದಸ್ಯರಾಗಬಹುದು ವೈಯಕ್ತಿಕವಾಗಿ ದೇಣಿಗೆ ನೀಡಬಹುದು ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ ರಾಜ್ ಮೇಹು ಮಾತನಾಡಿದರು. ಇದೆ ವೇಳೆ ಹಿರಿಯ ಪತ್ರಕರ್ತ ಅಬ್ರಹಾಂ ಡಿ.ಸಿಲ್ವ ಅವರ ಮೊಮ್ಮಗಳು ಕುಮಾರಿ ಇಂಪನಾ ತುರ್ತು ಪರಿಸ್ಥಿತಿಯ ಸೆರೆವಾಸದ ಆ ದಿನಗಳು ಕೃತಿಯನ್ನು ಲೋಕಾರ್ಪಣೆ ಮಾಡಿದಳು. ಪಿಯುಸಿಎಲ್ ಜಿಲ್ಲಾಧ್ಯಕ್ಷ ಪುಣಜನೂರು ದೊರೆಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಲೇಖಕರು ನಂಜನಗೂಡು ಕೆ.ಜಿ.ಅಲಮೇಲು, ರೋಟರಿ ಅಧ್ಯಕ್ಷ ನಾಗರಾಜು, ಸಾಹಿತಿ ಹೊರೆಯಾಲ ದೊರೆಸ್ವಾಮಿ, ಅಪೂರ್ವ ಡಿ.ಸಿಲ್ವ ಪುನರ್ಚಿತ್ ಸಂಸ್ಥೆಯ ವೀರಭದ್ರನಾಯಕ. ಸೆರೆವಾಸ ಅನುಭವಿಸಿದ್ದ ಅಬ್ರಹಾಂ ಡಿ.ಸಿಲ್ವ. ಕೋಣನೂರುನಾಗರಾಜು, ಕುಮಾರ್ ಆರಾಧ್ಯ ನಗರದ ವಿವಿಧ ಪ್ರಗತಿಪರಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.