ನೂತನ ಬಡಾವಣೆ ಅವೈಜ್ಞಾನಿಕ ನಿರ್ಮಾಣ: ತಗ್ಗು ಪ್ರದೇಶ ಮಂದಿಗೆ ಆತಂಕ

| Published : May 23 2024, 01:05 AM IST

ನೂತನ ಬಡಾವಣೆ ಅವೈಜ್ಞಾನಿಕ ನಿರ್ಮಾಣ: ತಗ್ಗು ಪ್ರದೇಶ ಮಂದಿಗೆ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಪಟ್ಟಣದಲ್ಲಿ ಹೊಸದಾದ ಲೇಔಟ್ ಆಗುತ್ತಿದ್ದು, ಕಳೆದ ಕೆಲದಿನಗಳ ಮಳೆಗೆ ಅಲ್ಲಿಂದ ಪಕ್ಕದ ಬಿಎಸ್‌ಎನ್‌ಎಲ್ ಕಚೇರಿಯ ಮುಂಭಾಗದಿಂದ ಹರಿದು ಸುಂಟಿಕೊಪ್ಪ ಎರಡನೇ ವಿಭಾಗದ ಹತ್ತಾರು ಮನೆಗಳಿಗೆ ನೀರು ನುಗ್ಗಿದಲ್ಲದೆ ಅದೇ ವೇಗದಲ್ಲಿ ಮಸೀದಿ ಒಳಗೆ ನೀರು ನುಗ್ಗಿದೆ. ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು. ಸಮಸ್ಯೆ ಪರಿಹಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಫಿ ತೋಟಗಳು ಕಣ್ಮರೆಯಾಗಿ ಬಡಾವಣೆಗಳು ರೂಪುಗೊಳ್ಳುತ್ತಿದ್ದು ಅವೈಜ್ಞಾನಿಕವಾಗಿ ಬಡಾವಣೆಯ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದ ಹಿನ್ನಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ಮನೆ ನಿರ್ಮಿಸಿರುವವರಿಗೆ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಅತಂಕ ಕಾಡಿದೆ. ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದರೊಂದಿಗೆ ಕೊಳಚೆ, ಕಲುಷಿತ ನೀರು ನುಗ್ಗುವ ಸಂಕಷ್ಟ ಎದುರಾಗಲಿದೆ.

ಸುಂಟಿಕೊಪ್ಪ ಪಟ್ಟಣದಲ್ಲಿ ಹೊಸದಾದ ಲೇಔಟ್ ಆಗುತ್ತಿದ್ದು, ಕಳೆದ ಕೆಲದಿನಗಳ ಮಳೆಗೆ ಅಲ್ಲಿಂದ ಪಕ್ಕದ ಬಿಎಸ್‌ಎನ್‌ಎಲ್ ಕಚೇರಿಯ ಮುಂಭಾಗದಿಂದ ಹರಿದು ಸುಂಟಿಕೊಪ್ಪ ಎರಡನೇ ವಿಭಾಗದ ಹತ್ತಾರು ಮನೆಗಳಿಗೆ ನೀರು ನುಗ್ಗಿದಲ್ಲದೆ ಅದೇ ವೇಗದಲ್ಲಿ ಮಸೀದಿ ಒಳಗೆ ನೀರು ನುಗ್ಗಿದೆ. ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.

ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಪಿ.ಎಫ್. ಲತೀಫ್ ಇಲ್ಲಿನ ನಿವಾಸಿಗಳ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.

ಅಭಿವೃದ್ಧಿ ಮತ್ತು ಪಟ್ಟಣ ಬೆಳೆಯುವುದರ ಜೋತೆಗೆ ಉದ್ಯೋಗ ನಿರ್ಮಾಣದ ಹಿನ್ನಲೆಯಲ್ಲಿ ಪರಿವರ್ತನೆಗೊಂಡ ಹಾಗೂ ಪರಿವರ್ತನೆಗೊಳ್ಳದ ಕೃಷಿಭೂಮಿಯಲ್ಲಿ ಮತ್ತು ಕಾಫಿ ತೋಟಗಳಲ್ಲಿ ಬಡಾವಣೆ ಸೇರಿದಂತೆ ಇತರ ವಾಣಿಜ್ಯ ಕಟ್ಟಡಗಳು ತಲೆಎತ್ತುತ್ತಿವೆ. ಅನುಮತಿ ನೀಡುವಾಗ ಸ್ಥಳ ಪರಿಶೀಲನೆ ಮಾಡಿ ತಗ್ಗು ಪ್ರದೇಶ, ಜೌಗುಪ್ರದೇಶ, ರಾಜಕಾಲುವೆ, ಚರಂಡಿ ಮತ್ತು ಇತರೆ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ನೀರಾಕ್ಷೇಪಣಾ ಪತ್ರ ನೀಡಬೇಕಾಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಜನಪ್ರತಿನಿಧಿಗಳು ಅಧಿಕಾರಿ ವರ್ಗ ಯಾವುದೋ ಆಮಿಷ ಮತ್ತು ಒತ್ತಡಗಳಿಗೆ ಬಲಿಯಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಅವೈಜ್ಞಾನಿಕ ಕಟ್ಟಡ ಮತ್ತು ಬಡಾವಣೆಗಳ ನಿರ್ಮಾಣಕ್ಕೆ ಕಾರಣಿಭೂತರಾಗುತ್ತಿದ್ದಾರೆ ಎಂದು ಲತೀಫ್‌ ದೂರಿದ್ದಾರೆ.

ಈಗಾಗಲೇ ಜಿಲ್ಲೆಯ ಆನೇಕ ಕಡೆಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಕಾನೂನಿನ ಚೌಕಟ್ಟನ್ನು ಮೀರಿ ಬೆಟ್ಟಗುಡ್ಡ ಏರು ತಗ್ಗು ಪ್ರದೇಶವೆಂದು ಕಟ್ಟಡ ಮತ್ತು ಬಡಾವಣೆಗಳ ನಿರ್ಮಾಣ ತೆರದಿದ್ದು, ಅನಾಹುತದ ಬಳಿಕ ಎಚ್ಚೆತ್ತು ಪ್ರಯೋಜನವಿಲ್ಲ. ಈ ಪರಿಸರದಲ್ಲೂ 2018 ರ ಮಹಾಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣಗಳು ತಿಳಿದಿದ್ದರೂ ಕೂಡ ಹೆಚ್ಚಿನ ಸಂದರ್ಭದಲ್ಲಿ ವೈಜ್ಞಾನಿಕ ಮತ್ತು ಕಾನೂನುಬದ್ಧ ಅನುಮತಿಗೆ ಬದಲಾಗಿ ಹೇಗೆ ಬೇಕಾದರೂ ಯಾರು ಬೇಕಾದರೂ ಏನು ಬೇಕಾದರೂ ಮಾಡಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ಕಣ್ಣು ಎದುರು ಇರುವ ಸತ್ಯವಾಗಿದೆ ಎಂದು ಅವರು ವಿಷಾದಿಸಿದ್ದಾರೆ.

ತಗ್ಗು ಪ್ರದೇಶದವರಿಗೆ ಆತಂಕ:

ಇದೀಗ ಜಿಲ್ಲೆಯಾದ್ಯಂತ ನಿತ್ಯ ಮಳೆ ಸುರಿಯುತ್ತಿದೆ. ಕಳೆದ 3 ದಿನಗಳಿಂದ ಬಾರೀ ಮಳೆಗೆ ತತ್ತರಿಸಿ ಹೋಗಿರುವ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಹೆಚ್ಚಿನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಈ ಭಾಗದ ಬಡ ಕಾರ್ಮಿಕ ವರ್ಗ ಮನೆ ಕಟ್ಟಿಕೊಂಡಿದ್ದು, ಮಳೆಗಾಲ ಪ್ರಾರಂಭವಾದಂತೆ ಹೊಸದಾಗಿ ಪ್ರಾರಂಭವಾಗಿರುವ ಲೇಔಟ್ ನಿಂದ ನಿರಂತರವಾಗಿ ಕಲುಷಿತ ನೀರು ಹರಿದು ಬರುತ್ತಿದ್ದು ಮನೆ ಒಳಗಿನ ಸಾಮಗ್ರಿಗಳು ಹಾನಿಯಾಗುತ್ತಿದೆ ಎಂದು ಈ ಭಾಗದ ನಿವಾಸಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಲತೀಫ್ ಒತ್ತಾಯಿಸಿದ್ದಾರೆ.

ಅವೈಜ್ಞಾನಿಕವಾದ ಚರಂಡಿಗಳನ್ನು ನಿರ್ಮಿಸಿದ್ದು ಇದರಿಂದ ತಗ್ಗು ಪ್ರದೇಶ ಜನವಸತಿಗೆ ಅತ್ಯಂತ ರಭಸವಾಗಿ ಮಳೆ ನೀರು ಬರುವ ಹಿನ್ನಲೆಯಲ್ಲಿ ಮನೆಗಳಿಗೆ ಆಗುವ ಹಾನಿಯ ಪ್ರಮಾಣ ಹೆಚ್ಚು ಎನ್ನುವುದು ಮೇಲ್ನೋಟಕ್ಕೆ ಇಲ್ಲಿ ಕಂಡುಬರುತ್ತಿದೆ..........

ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಬರುತ್ತಿದ್ದು ಇದರಿಂದ ಮುಂದೆ ಅಪಾಯದ ಮೂನ್ಸೂಚನೆ ದೊರೆತ ಹಿನ್ನಲೆಯಲ್ಲಿ ಪಂಚಾಯಿತಿ ವತಿಯಿಂದ ಬಡಾವಣೆಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆ ಬಡಾವಣೆಗಳ ನಿರ್ಮಾಣಕ್ಕೂ ಮುಂಚಿತವಾಗಿ ಮಳೆಯ ನೀರು ಈ ಹಿಂದೆ ಮಾದರಿಯಲ್ಲಿ ಹರಿಯುತ್ತಿತ್ತೋ ಅದೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪಂಚಾಯಿತಿಯಿಂದ ನೋಟಿಸ್ ನೀಡಲಾಗಿದೆ.-ವಿ.ಜಿ.ಲೋಕೇಶ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.