ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡಿಬೆಟ್ಟದಲ್ಲಿ ಪ್ರಸಾದ್ ಯೋಜನೆಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಮೈಸೂರು ಕನ್ನಡ ವೇದಿಕೆಯವರು ಚಾಮುಂಡಿಬೆಟ್ಟದ ದೇವಸ್ಥಾನದ ಬಳಿ ಮಂಗಳವಾರ ಪ್ರತಿಭಟಿಸಿದರು.

ಚಾಮುಂಡಿಬೆಟ್ಟ ಸೂಕ್ಷ್ಮ ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿ ಯಾವುದೇ ಕಾಮಗಾರಿ ಮಾಡುವ ಮುನ್ನ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಆದರೆ, ಚಾಮುಂಡಿಬೆಟ್ಟ ಪ್ರಾಧಿಕಾರವು ಪರಿಸರ ಹಾಳು ಮಾಡುತ್ತಿದೆ. ಇಷ್ಟೆಲ್ಲಾ ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿರುವುದು ಎಷ್ಟು ಸಮಂಜಸ? ಪ್ರಾಧಿಕಾರದ ಕಾರ್ಯದರ್ಶಿ ತೀರ್ಮಾನವೇ ಅಂತಿಮವಾದರೆ ಜನಪ್ರತಿನಿಧಿಗಳ ಕೆಲಸವಾದರೂ ಏನು ಎಂದು ಅವರು ಪ್ರಶ್ನಿಸಿದರು.

ಈಗಾಗಲೇ ಚಾಮುಂಡಿಬೆಟ್ಟ ಸುತ್ತಮುತ್ತ ಭೂ ಕಬಳಿಕೆ ಮಾಡಿ ಮನೆ ನಿರ್ಮಾಣ ಮಾಡಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ. ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ರಿಯಲ್ ಎಸ್ಟೇಟ್ ಕಚೇರಿಯಾಗಿದೆ. ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಈಗಾಗಲೇ ಕಾಡು ಪ್ರಾಣಿಗಳು, ಹೆಚ್ಚಾಗಿದ್ದು ಬೆಟ್ಟದಿಂದ ಬಂದು ನಗರ ಪ್ರದೇಶಗಳಲ್ಲಿ ಅಲೆದಾಡುತ್ತಿದೆ ಎಂದು ಆರೋಪಿಸಿದರು.

ಬೆಟ್ಟದ ರಸ್ತೆಗಳು ಅಲ್ಲಲ್ಲಿ ಕುಸಿಯುತ್ತಿದೆ. ವಾಸ್ತವಾಂಶವನ್ನು ಸರ್ಕಾರದ ಗಮನಕ್ಕೆ ತಾರದೆ ಅವೈಜ್ಞಾನಿಕ ಕಾಮಗಾರಿಗೆ ಕೈಗೊಳ್ಳಲಾಗಿದೆ. ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಕೂಡಲೇ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಸಿದ್ದೇಗೌಡ, ಗುರುಬಸಪ್ಪ, ಸಾಯಿ ಚಾಮರಾಜು, ಬಾಬು, ಹರೀಶ್, ಚಿನ್ನಪ್ಪ, ಶಿವುಗೌಡ, ಮಾದಪ್ಪ, ಸುನಿಲ್, ಗೋಪಿ, ಸ್ವಾಮಿ, ಚೆಲುವರಾಯಸ್ವಾಮಿ, ಸಿದ್ದಪ್ಪ, ಗೋವಿಂದರಾಜು, ರಮೇಶ್, ಮನೋಹರ್, ನಟರಾಜು, ಅರುಣ್ ಕುಮಾರ್, ಉಮಾಪತಿ ಮೊದಲಾದವರು ಇದ್ದರು.