ಕೊಪ್ಪಳ: ಕರ್ನಾಟಕದ ಬೇರಾವ ಜಿಲ್ಲೆಗಳಲ್ಲೂ ಇಲ್ಲದ ಕಂದಾಚಾರ, ಮಡಿವಂತಿಕೆ, ಮೂಢನಂಬಿಕೆ, ಅಸ್ಪೃಶ್ಯತೆ ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಇರುವುದು ನೋವಿನ ಸಂಗತಿ ಎಂದು ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ವಿಷಾದ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿಯ ಕೃಷಿ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕ್ರಿಯಾ ಮಾಧ್ಯಮ, ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಪತ್ರಕರ್ತ ಗುರುರಾಜ್ ದೇಸಾಯಿ ಅವರ ಸಂಬಳಿಗೋಲು ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ದೀನ-ದಲಿತರ ಮೇಲೆ ಆಗಾಗ ಹಲ್ಲೆ, ದಬ್ಬಾಳಿಕೆ, ಸಾಮಾಜಿಕ ಬಹಿಷ್ಕಾರ ನಡೆಯುತ್ತಿವೆ. ಅನೇಕ ಪ್ರಕರಣಗಳು ಸಾಕ್ಷಿನಾಶದಿಂದ ಅಪರಾಧಿಗಳು ನಿರಪರಾಧಿಗಳಾಗಿ ಹೊರ ಬರುತ್ತಿದ್ದಾರೆ. ಇದಕ್ಕೆ ಮರಕುಂಬಿ ಗ್ರಾಮದ ಪ್ರಕರಣವೇ ಸಾಕ್ಷಿ ಎಂದು ಹೇಳಿದರು.

ಸಾಮ್ರಾಟ ಅಶೋಕ ಹಾಗೂ ಗೌತಮ ಬುದ್ಧನ ಶಕ್ತಿಯ ಸ್ಥಳ ಎನಿಸಿದರೂ ಈ ಪ್ರದೇಶ ಇನ್ನೂ ಸುಧಾರಣೆಯಾಗಿಲ್ಲ. ಗ್ರಾಮೀಣ ಭಾಗದ ದಲಿತರ ಸ್ಥಿತಿ-ಗತಿ ಕುರಿತು ಚಾರಿತ್ರಿಕ ಮಾಹಿತಿಯನ್ನು ಲೇಖಕ ಗುರುರಾಜ್ ದೇಸಾಯಿ ಅವರು ಕೃತಿ ಮೂಲಕ ಅನಾವರಣಗೊಳಿಸಿರುವುದು ಉತ್ತಮ ಕೆಲಸ ಎಂದರು. ಲೇಖಕರು ಸಾಮಾಜಿಕ ಬದುಕು ಹಸನುಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಸೋಮರೆಡ್ಡಿ ಅಳವಂಡಿ ಪುಸ್ತಕ ಕುರಿತು ಮಾತನಾಡಿ, ಸಂಬಳಿ ಗೋಲು ಕೃತಿ ಉತ್ತಮವಾಗಿದೆ ಸಿನಿಮಾ ಮಾಡಲು ಯೋಗ್ಯವಾದ ಕತೆ ಹೊಂದಿದೆ. ಗುರುರಾಜ್ ದೇಸಾಯಿ ವಿದ್ಯಾರ್ಥಿ ದೆಸೆಯಿಂದ ಕೃತಿ ರಚನೆ ಮೂಲಕ ಸಾಹಿತಿಯಾಗಿ ಹೊರಹೊಮ್ಮಿರುವುದು ಖುಷಿಯ ಸಂಗತಿ ಎಂದು ಬಣ್ಣಿಸಿದರು. ಗ್ರಾಮೀಣ ಪ್ರದೇಶದಲ್ಲಿನ ಭೂಮಾಲೀಕರ ದಬ್ಬಾಳಿಕೆ, ದಲಿತರ ಮೇಲೆ ನಡೆಯುವ ಶೋಷಣೆಯನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಈ ಶೋಷಣೆಯ ವಿರುದ್ಧ ಹೋರಾಟ ರೂಪಗೊಳಿಸುವುದನ್ನು, ಹೋರಾಟ ಕಟ್ಟುವುದನ್ನು ಈ ಕೃತಿ ಬಿಚ್ಚಿಟ್ಟಿದೆ. ಕೊಪ್ಪಳ ಜಿಲ್ಲೆಯ ಹುಡುಗನೊಬ್ಬ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.


ಕ್ರಿಯಾ ಮಾಧ್ಯಮದ ನಿರ್ದೇಶಕ ಜಿ. ಚಂದ್ರಶೇಖರ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ, ಸಾಹಿತಿ ಪುಷ್ಪಲತಾ ಏಳುಬಾವಿ, ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜಮದಾರ, ರಮ್ಯಕೃಷ್ಣ, ನಾರಾಯಣರಾವ್ ದೇಸಾಯಿ, ಪತ್ರಕರ್ತ ಗುರುರಾಜ ದೇಸಾಯಿ ಭಾಗವಹಿಸಿದ್ದರು.

ನಾಗರಾಜ್ ಬೆಣಕಲ್, ರವಿ ಆಗೋಲಿ, ಶ್ರೀನಿವಾಸ ದೇಸಾಯಿ, ಹನುಮಂತ ಭಜಂತ್ರಿ ಅನಿಸಿಕೆ ಹಂಚಿಕೊಂಡರು. ಬಸವರಾಜ್ ಪೂಜಾರ್ ಸ್ವಾಗತಿಸಿದರು. ಡಾ. ಮಹಾಂತೇಶ್ ನೆಲಾಗಣಿ ಕಾರ್ಯಕ್ರಮ ನಿರೂಪಿಸಿದರು. ಆನಂತರ 15ಕ್ಕೂ ಅಧಿಕ ಕವಿಗಳು ಕವಿತೆ ವಾಚಿಸಿದರು.