ಸಾರಾಂಶ
ಚಿತ್ರದುರ್ಗ: ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ ಘೋಷಿಸಿರುವ 5300 ಕೋಟಿ ರು. ಅನುದಾನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ರೈತರು ನಡೆಸಿದ ಧರಣಿ ಸ್ಥಳಕ್ಕೆ ಆಗಮಿಸಿ ಚರ್ಚಿಸಿದ ಅವರು ಕೇಂದ್ರದ ಅನುದಾನ ಬರುವ ವಿಚಾರದಲ್ಲಿ ಯಾವುದೇ ಅನುಮಾನಗಳು ಬೇಡ. ರಾಜ್ಯ ಸರ್ಕಾರ ಪ್ರತ್ಯೇಕ ಖಾತೆ ತೆರೆದರೆ ಕೇಂದ್ರ ನೆರವು ನೀಡುತ್ತದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಗಡ ಮಾತನಾಡಿರುವುದಾಗಿ ಹೇಳಿದರು.ಭದ್ರಾ ಮೇಲ್ದಂಡೆ ವಿಷಯದಲ್ಲಿ ಬದ್ಧತೆ ಮೆರೆದಿದ್ದೇನೆ. ಈ ಭಾಗದ ರೈತರ ನೋವುಗಳ ಅರಿವಿದೆ. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ಸಂಬಂಧ ಕಡತಗಳ ಬಗಲಲ್ಲಿ ಇಟ್ಟುಕೊಂಡು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಅಡ್ಡಾಡಿದ್ದೇನೆ. ಎಲ್ಲವೂ ಕ್ಲಿಯರ್ ಮಾಡಿಸಿ ಕೇಂದ್ರ ಸಂಪುಟದ ಮುಂದೆ ಇಡಿಸಿದ್ದೆ. ಕಳೆದ 15 ವರ್ಷಗಳಲ್ಲಿ ಹೊಸದಾಗಿ ಯಾವನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸದ ಕಾರಣ ಕೇಂದ್ರ ನಿರಾಕರಿಸಿತು. ಬದಲಾಗಿ ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆಯಡಿ ನೀಡುತ್ತಿದೆ. ಡ್ರಿಪ್ ಇರಿಗೇಷನ್ಗೆ ಈ ಅನುದಾನ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿಗಳೇ ಚಿತ್ರದುರ್ಗಕ್ಕೆ ಆಗಮಿಸಿ ರಾಷ್ಟ್ರೀಯ ಯೋಜನೆ ಘೋಷಣೆ ಮಾಡಿ ಹೋಗಿದ್ದರು. ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಅನುದಾನ ಬಿಡುಗಡೆಗೆ ಗಂಭೀರ ಪ್ರಯತ್ನ ಹಾಕುವೆ. ನೀವು ರೈತರು ಬಂದರೆ ಕೇಂದ್ರ ಜಲಶಕ್ತಿ ಸಚಿವ ಹಾಗೂ ಪ್ರಧಾನಿಗಳ ಬಳಿಗೂ ಕರೆದೊಯ್ಯುವೆ. ಭದ್ರಾ ಮೇಲ್ದಂಡೆ ವಿಚಾರದಲ್ಲಿ ಪ್ರಧಾನಿ ಭೇಟಿಯಾಗಲು ಸಮಯ ಕೇಳಿರುವೆ. ರೈತರು ಬಿಸಲಲ್ಲಿ ಧರಣಿ ಮಾಡುವುದು ಬೇಡ. ವಾಪಸ್ ಪಡೆಯುವಂತೆ ನಾರಾಯಣಸ್ವಾಮಿ ವಿನಂತಿಸಿದರು.ದಿನವಿಡಿ ಪ್ರತಿಭಟನೆ: ಕೇಂದ್ರ ಸಚಿವ ನಾರಾಯಣಸ್ವಾಮಿ ದಿಶಾ ಮೀಟಿಂಗ್ ನಡೆಸುತ್ತಾರೆ ಎಂಬ ಹಿನ್ನಲೆಯಲ್ಲಿ ಬೆಳಗ್ಗೆಯೇ ಟ್ರ್ಯಾಕ್ಟರ್ ಸಮೇತ ಜಿಲ್ಲಾ ಪಂಚಾಯಿತಿ ಕಚೇರಿಗೆ ಧಾವಿಸಿದ್ದ ರೈತರು ಯಾರೂ ಒಳ ಹೋಗದಂತೆ ಬಾಗಿಲಿಗೆ ಅಡ್ಡಲಾಗಿ ನಿಲ್ಲಿಸಿದ್ದರು. ಈ ವೇಳೆ ಪ್ರತಿಭಟನಾಕಾರರು, ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ಕಚೇರಿ ಒಳಗೆ ಯಾರೂ ಹೋಗದಂತೆ ಅಡ್ಡಿ ಪಡಿಸುವುದು ಸರಿಯಲ್ಲ. ಸಚಿವರ ಮುಂದೆ ನಿಮ್ಮ ಸಮಸ್ಯೆ ಹೇಳಿಕೊಳ್ಳಿ ಎಂದು ಪೊಲೀಸರು ವಿನಂತಿಸಿದರು. ಆದರೆ ಪ್ರತಿಭಟನಾ ನಿರತ ರೈತರು ಏನನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅಂತಿಮವಾಗೆ ಜಿಪಂ ದ್ವಾರ ಬಾಗಿಲಿಗೆ ಅಡ್ಡಲಾಗಿ ನಿಲ್ಲಿಸಿದ್ದ ಟ್ರಾಕ್ಟರ್ ಗಳನ್ನು ಪೊಲೀಸರೇ ಡ್ರೈವಿಂಗ್ ಮಾಡಿಕೊಂಡು ದೂರ ಬಿಟ್ಟರು. ಈ ವೇಳೆ ಕೆಲ ರೈತರು ಟ್ರಾಕ್ಟರ್ ಗೆ ಅಡ್ಡ ಮಲಗಲು ಮಂದಾದರಾದರೂ ಪೊಲೀಸರು ಅವಕಾಶ ಕೊಡಲಿಲ್ಲ. ಅಂತಿಮವಾಗಿ ಗೇಟ್ ಬಳಿ ಧರಣಿ ಕುಳಿತರು. ಜಿಲ್ಲಾ ಆಸ್ಪತ್ರೆಯ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಧರಣಿ ನಿರತರ ಬಳಿ ಧಾವಿಸಿದ ಸಚಿವ ನಾರಾಯಣಸ್ವಾಮಿ ಅಹವಾಲು ಆಲಿಸಿದರು.
ರೈತ ಸಂಘದ ರಾಜ್ಯ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ದವೀರಪ್ಪ, ದೊಡ್ಡಸಿದ್ದವ್ವನಹಳ್ಳಿ ಮಲ್ಲಿಕಾರ್ಜುನ, ಕೆ.ಟಿ.ತಿಪ್ಪೇಸ್ವಾಮಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.