ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಪ್ರತಿಯೊಂದು ಮಗುವೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯುತ್ತದೆ. ಬೆಳೆಯುವ ವೇಳೆ ನೀಡುವ ಉತ್ತಮ ಸಂಸ್ಕಾರವು ಮಗುವನ್ನು ಪ್ರಕಾಶಿಸುವಂತೆ ಮಾಡುತ್ತದೆ. ಈ ಕಾರಣಕ್ಕೆ ಮಗುವಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಉತ್ತಮ ಸಂಸ್ಕಾರ ಲಭಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರದ್ದಾಗಿದೆ ಎಂದು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ತಿಳಿಸಿದರು. ಅವರು ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದಲ್ಲಿ ಮಂಗಳವಾರ ನಡೆದ ಪ್ರಾರಂಭೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಗುವಿಗಾಗಿ ಹೆತ್ತವರು ಪಡುವ ಕಷ್ಟ ಸಂಕಷ್ಟಗಳು ಫಲಪ್ರದವಾಗಬೇಕಾದರೆ ಆ ಮಗು ಹೃದಯವಂತನಾಗಿ ಬೆಳೆದು ನಾಡಿಗೆ ಸಂಪತ್ತಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಯೋರ್ವ ಹೆತ್ತವರು ಕಾಳಜಿ ವಹಿಸಬೇಕು ಎಂದು ವಿನಂತಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಮಾಧವ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ಮಾತನಾಡಿ, ಉತ್ತಮ ವಿಚಾರಗಳಿಂದ ಪ್ರಭಾವಿತರಾದ ಮಕ್ಕಳು ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಶಿಶು ಮಂದಿರದ ಕಲಿಕಾ ಶೈಲಿಯು ಮಗುವಿನ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದೆ ಎಂದರು. ಸಭೆಯಲ್ಲಿ ಶಿಶು ಮಂದಿರದ ಉಪಾಧ್ಯಕ್ಷೆ ಸುಜಾತಕೃಷ್ಣ ಆಚಾರ್ಯ, ಜೊತೆ ಕಾರ್ಯದರ್ಶಿ ಹರಿರಾಮಚಂದ್ರ, ಹಾಗೂ ಕಂಗ್ವೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು. ವೇದಮೂರ್ತಿ ಶ್ರೀಕಾಂತ್ ಭಟ್ ಅವರ ಪೌರೋಹಿತ್ಯದಲ್ಲಿ ಗಣಹೋಮಾದಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಕಾರ್ಯಕ್ರಮದಲ್ಲಿ ಸಂತೋಷ್ ಶೆಟ್ಟಿ ಅಡೆಕ್ಕಲ್, ಉದಯ ಕುಮಾರ್ ಮತ್ತಿತರರು ಭಾಗವಹಿಸಿದ್ದರು. ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ, ಕಾಂತಿಮಣಿ, ಚಂದ್ರಾವತಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.