ಸಾರಾಂಶ
ಮಳೆಗಾಲ ಪ್ರಾರಂಭ ಆಗುತ್ತಿದ್ದಂತೆಯೇ, ಈಗಾಗಲೇ ಹಲವು ಬಾರಿ ಇಲ್ಲಿ ಈ ಸಮಸ್ಯೆ ತಲೆದೋರುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿಗೆ, ಕಂದಾಯ ಇಲಾಖೆಯ ಅಧಿಕಾರಿಗಳಿಗೂ ದೂರು ನೀಡಿದ್ದೇವೆ. ಆದರೆ ಯಾರೂ ಈ ಬಗ್ಗೆ ಸ್ಪಂದಿಸಲಿಲ್ಲ ಎಂದು ಸ್ಥಳೀಯ ನಿವಾಸಿ ನೌಫಲ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಇಲ್ಲಿನ ಮಠ ಎಂಬಲ್ಲಿಂದ ಕೊಪ್ಪಳ ಸಂಪರ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗಿನ ರಸ್ತೆಯಲ್ಲಿ ಮಳೆ ನೀರು ನಿಂತು ರಸ್ತೆ ತೋಡು ಆಗಿ ಪರಿವರ್ತನೆಗೊಂದಿಗೆ ನಡೆದಾಡುವುದಕ್ಕೂ ಸಾಧ್ಯವಿಲ್ಲದ ರೀತಿಯಲ್ಲಿ ಮಳೆ ನೀರು ನಿಂತಿದೆ. ರಸ್ತೆಯ ಬದಿಯ ನಿವಾಸಿಗಳು ಮನೆಯಿಂದ ಹೊರಗೆ ಇಳಿಯಲಾಗದೆ ಕಂಗಾಲಾಗಿದ್ದಾರೆ.
ಮಠದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಕವಲೊಡೆದು ಕೊಪ್ಪಳಕ್ಕೆ ಹೋಗುವ ರಸ್ತೆಯಲ್ಲಿ ೩ ಕಡೆಯಲ್ಲಿ ಈ ರೀತಿಯಾಗಿ ನೀರು ನಿಲುಗಡೆಗೊಳ್ಳುತ್ತಿದ್ದು, ಗ್ರಾಮ ಪಂಚಾಯಿತಿ ರಸ್ತೆ ಕಾಂಕ್ರಿಟೀಕರಣ ಮಾಡಲು ಮುಂದಾಗಿದೆ. ಆದರೆ ಇಲ್ಲಿ ಚರಂಡಿ ನಿರ್ಮಾಣ ಮಾಡದ ಕಾರಣ, ಮಳೆ ನೀರು ಹರಿದು ಸಮೀಪದಲ್ಲೇ ಇರುವ ತೋಡಿಗೆ ಸೇರಬೇಕಾಗಿದ್ದು, ಆದರೆ ಮಳೆ ನೀರು ಸರಾಗವಾಗಿ ಹರಿಯಲಾರದೆ ಈ ರೀತಿಯಾಗಿ ರಸ್ತೆಯಲ್ಲೇ ನಿಲುಗಡೆಗೊಂಡು ಪರಿಸರದ ಮಂದಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.ಮಳೆಗಾಲ ಪ್ರಾರಂಭ ಆಗುತ್ತಿದ್ದಂತೆಯೇ, ಈಗಾಗಲೇ ಹಲವು ಬಾರಿ ಇಲ್ಲಿ ಈ ಸಮಸ್ಯೆ ತಲೆದೋರುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿಗೆ, ಕಂದಾಯ ಇಲಾಖೆಯ ಅಧಿಕಾರಿಗಳಿಗೂ ದೂರು ನೀಡಿದ್ದೇವೆ. ಆದರೆ ಯಾರೂ ಈ ಬಗ್ಗೆ ಸ್ಪಂದಿಸಲಿಲ್ಲ ಎಂದು ಸ್ಥಳೀಯ ನಿವಾಸಿ ನೌಫಲ್ ಆರೋಪಿಸಿದ್ದಾರೆ. ಈ ರಸ್ತೆಯ ಚರಂಡಿ ನಿರ್ಮಿಸಬೇಕಾದ ಭೂಮಿ ಒತ್ತುವರಿ ಮಾಡಿಕೊಂಡು ವ್ಯಕ್ತಿಯೋರ್ವರು ಕಂಪೌಂಡ್ ನಿರ್ಮಿಸಿದ್ದು, ಆ ಸಂದರ್ಭದಲ್ಲಿ ಚರಂಡಿ ನಿರ್ಮಾಣಕ್ಕೆ ಜಾಗ ಬಿಡುವಂತೆ ಪಂಚಾಯಿತಿಯಿಂದ ನೋಟೀಸು ನೀಡಲಾಗಿತ್ತು. ಆದರೆ ಆ ವ್ಯಕ್ತಿ ಇದು ನಮ್ಮ ವರ್ಗ ಜಾಗ ಎಂದು ಚರಂಡಿ ನಿರ್ಮಿಸುವಾಗ ಅಡ್ಡಿಪಡಿಸಿದರು. ರಸ್ತೆ ಕಾಂಕ್ರಿಟೀಕರಣಕ್ಕೆ ೧೦ ಲಕ್ಷ ರು. ಅನುದಾನ ಮಂಜೂರು ಆಗಿದ್ದು, ಈ ಕಾಮಗಾರಿ ಪ್ರಾರಂಭಿಸುವಾಗ ಇನ್ನೊಬ್ಬರು ರಸ್ತೆ ಹಾದು ಹೋಗುವಲ್ಲಿ ನಮ್ಮ ಜಾಗ ಇದೆ ಎಂದು ಆಕ್ಷೇಪ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಉಪ್ಪಿನಂಗಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ತಿಳಿಸಿದ್ದಾರೆ.