80 ಸಾವಿರ ರು. ವೆಚ್ಚದಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕ, ಕೈತೊಳೆಯುವ ಸ್ಟೀಲ್ ಬೇಸಿನ್, ನ್ಯಾಪ್ಕಿನ್ ಬರ್ನರ್ ಘಟಕವನ್ನು ೪೭ ವರ್ಷಗಳ ಹಿಂದೆ ಉಪ್ಪಿನಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಾಗಿದ್ದವರು ಇತ್ತೀಚೆಗೆ ಹಸ್ತಾಂತರಿಸಿದ್ದಾರೆ.
ಉಪ್ಪಿನಂಗಡಿ: 47 ವರ್ಷಗಳ ಹಿಂದೆ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಮತ್ತೆ ಒಗ್ಗೂಡಿ ಕಲಿತ ವಿದ್ಯಾ ಸಂಸ್ಥೆಯ ಪ್ರಸಕ್ತ ಅಗತ್ಯತೆ ಪೂರೈಸಿ ಸಮಾಜಕ್ಕೆ ಪ್ರೇರಣಾದಾಯಿ ನಡೆ ತೋರಿಸಿಕೊಟ್ಟಿದ್ದಾರೆ. 80 ಸಾವಿರ ರು. ವೆಚ್ಚದಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕ, ಕೈತೊಳೆಯುವ ಸ್ಟೀಲ್ ಬೇಸಿನ್, ನ್ಯಾಪ್ಕಿನ್ ಬರ್ನರ್ ಘಟಕ ಹಸ್ತಾಂತರಿಸಿದರು.
ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮತ್ತವರ ಸ್ನೇಹಿತರು 1978 ರಲ್ಲಿ ಉಪ್ಪಿನಂಗಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಬದುಕು ಕಂಡುಕೊಂಡಿದ್ದಾರೆ. ಅವರಲ್ಲಿ ಹಲವರು ಪರಸ್ಪರ ಸಂಪರ್ಕದಲ್ಲಿದ್ದು, ಕಳೆದ ಅ. 17 ರಂದು ವಿದ್ಯಾ ಸಂಸ್ಥೆಯಲ್ಲಿ ಪುನರ್ಮಿಲನ ಕಾರ್ಯಕ್ರಮ ಹಮ್ಮಿಕೊಂಡು ಪರಸ್ಪರರ ಜೀವನಗಾಥೆ ಹಂಚಿಕೊಂಡರು. ಈ ಸಂದರ್ಭ ವಿದ್ಯಾ ಸಂಸ್ಥೆಗೆ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕ, ಕೈತೊಳೆಯುವ ಸ್ಟೀಲ್ ಬೇಸಿನ್, ನ್ಯಾಪ್ಕಿನ್ ಬರ್ನರ್ ಘಟಕದ ಅವಶ್ಯಕತೆ ತಂಡ ಮುಂದಿತ್ತು. ಸ್ಪಂದಿಸಿದ ಹಿರಿಯ ವಿದ್ಯಾರ್ಥಿಗಳು 80 ಸಾವಿರ ರು. ವೆಚ್ಚದಲ್ಲಿ ಮೂರು ಘಟಕಗಳನ್ನು ಮಂಗಳವಾರ ಶಾಲೆಗೆ ಹಸ್ತಾಂತರಿಸಿದೆ.ಘಟಕಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಡಾ. ಗೋವಿಂದಪ್ರಸಾದ್ ಕಜೆ, ಜಲೀಲ್ ಮುಕ್ರಿ, ಎಂ ಕೆ ರಜಾಕ್, ಸುಬ್ರಾಯ, ವಿಶ್ವನಾಥ, ಜಯಕುಮಾರ್, ವಿಲ್ಫ್ರೆಡ್ ಡಿಸೋಜಾ, ಸುಬ್ರಹ್ಮಣ್ಯ, ಗಣೇಶ್ ನಾಯಕ್ ಕರಾಯ, ರುಕ್ಮಿಣಿ, ಮರಿಯಮ್ಮ, ಜೆಸಿಂತಾ, ಪ್ರೌಢ ಶಾಲಾ ಉಪ ಪ್ರಾಂಶುಪಾಲೆ ದೇವಕಿ ಡಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಗುಣವತಿ, ಸದಸ್ಯರಾದ ಫಾರೂಕ್ ಜಿಂದಗಿ, ಮಲ್ಲೇಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.