ಸಾರಾಂಶ
ಯುಪಿಎಸ್ಸಿ ಪರೀಕ್ಷೆಯಲ್ಲಿ 372 ನೇ ರ್ಯಾಂಕ್ ಪಡೆದು ಸಾಧನೆ ತೋರಿದ ಉಡುಪಿ ಚರ್ಚಿನ ಶ್ರೇಯಾಂಸ್ ಗೋಮ್ಸ್ ಅವರನ್ನು ಧರ್ಮಪ್ರಾಂತ್ಯದ ಪರವಾಗಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ತಮ್ಮ ನಿವಾಸದಲ್ಲಿ ಶುಕ್ರವಾರ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕ್ರೈಸ್ತ ಸಮುದಾಯದ ಮಕ್ಕಳು ಹೆಚ್ಚೆಚ್ಚು ಸರ್ಕಾರಿ ಹುದ್ದೆಗಳನ್ನು ಪಡೆಯುವತ್ತ ಗಮನ ಹರಿಸಿದಾಗ ಸಮುದಾಯದ ಜೊತೆಗೆ ಜಿಲ್ಲೆಗೆ ಕೂಡ ಗೌರವ ತಂದು ಕೊಟ್ಟಂತೆ ಆಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.ಶುಕ್ರವಾರ ತಮ್ಮ ನಿವಾಸದ ಕಚೇರಿಯಲ್ಲಿ, ಯುಪಿಎಸ್ಸಿ ಪರೀಕ್ಷೆಯಲ್ಲಿ 372 ನೇ ರ್ಯಾಂಕ್ ಪಡೆದು ಸಾಧನೆ ತೋರಿದ ಉಡುಪಿ ಚರ್ಚಿನ ಶ್ರೇಯಾಂಸ್ ಗೋಮ್ಸ್ ಅವರನ್ನು ಧರ್ಮಪ್ರಾಂತ್ಯದ ಪರವಾಗಿ ಗೌರವಿಸಿ ಅವರು ಮಾತನಾಡಿದರು.
ಧರ್ಮಪ್ರಾಂತ್ಯದಲ್ಲಿ ಕನಿಷ್ಠ 25 ಮಂದಿ ಮಕ್ಕಳು ಸರ್ಕಾರದ ಅತ್ಯುನ್ನತ ಹುದ್ದೆಗಳನ್ನು ಪಡೆಯಬೇಕು ಎಂಬ ಗುರಿ ಹೊಂದಲಾಗಿತ್ತು. ಅದರಲ್ಲಿ ಪೂರ್ಣ ಪ್ರಮಾಣದ ಯಶಸ್ಸು ದೊರೆಯದೇ ಹೋದರೂ ಸ್ವಲ್ಪ ಪ್ರಮಾಣದಲ್ಲಿ ಸಮುದಾಯದ ಮಕ್ಕಳು ಸಾಧನೆ ಮಾಡಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದರು.ಯುಪಿಎಸ್ಸಿ ಪರೀಕ್ಷೆಗೆ ಮೌನವಾಗಿ ತಯಾರಿ ನಡೆಸಿಕೊಂಡು ಉತ್ತಮ ಸಾಧನೆ ತೋರಿರುವ ಶ್ರೇಯಾಂಸ್ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಅವರು ಮುಂದೆ ಓರ್ವ ಅಧಿಕಾರಿಯಾಗಿ ಹುದ್ದೆಯನ್ನು ಸ್ವೀಕರಿಸಿದಾಗ ಅವರ ಹೆತ್ತವರೊಂದಿಗೆ ಸಮುದಾಯ ಹಾಗೂ ಜಿಲ್ಲೆಗೆ ಕೂಡ ಹೆಮ್ಮೆ ಎಂದರು.ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಮಾತನಾಡಿ, ಹೆಚ್ಚಿನವರಿಗೆ ಯುಪಿಎಸ್ಸಿಯಂತಹ ಉನ್ನತ ಪರೀಕ್ಷೆಗಳನ್ನು ಬರೆದು ಸರ್ಕಾರಿ ಸೇವೆಯಲ್ಲಿ ಮುಂದುವರಿಯುವ ಕನಸು ಇರುತ್ತದೆ. ಅದರೆ ಇದರಲ್ಲಿ ಉತ್ತೀರ್ಣರಾಗುವುದು ಸುಲಭದ ವಿಚಾರವಲ್ಲ. ಇದಕ್ಕೆ ಕಠಿಣ ಪರಿಶ್ರಮ ಮತ್ತು ಅವಿರತವಾದ ತಯಾರಿ ಅಗತ್ಯವಾಗಿದೆ ಎಂದರು.
ಶ್ರೇಯಾಂಶ್ ಹೆತ್ತವರಾದ ಎಸ್. ಜೆ. ಗೋಮ್ಸ್ ಮತ್ತು ಮೇಬಲ್ ಶಾಂತಿ, ಧರ್ಮಪ್ರಾಂತ್ಯದ ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ಆಲ್ವಿನ್ ಸ್ವಿಕ್ವೇರಾ, ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ಇದ್ದರು.ಶ್ರೇಯಾಂಶ್ ತಂದೆ ಕೊಂಕಣ ರೈಲ್ವೆ ಅಧಿಕಾರಿ:
ಶ್ರೇಯಾಂಶ್ ಅವರ ತಂದೆ ಎಸ್. ಜೆ. ಗೋಮ್ಸ್ ಮೂಲತಃ ಭಟ್ಕಳದ ತೆರ್ನಮಕ್ಕಿಯವರು. ಪ್ರಸ್ತುತ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸ್ಟೇಶನ್ ಮಾಸ್ಟರ್ ಆಗಿದ್ದಾರೆ, ತಾಯಿ ಮೇಬಲ್ ಶಾಂತಿ ಗೃಹಿಣಿ. ಬೆಂಗಳೂರಿನ ಆರ್. ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ ಯುಪಿಎಸ್ಸಿ ಪರೀಕ್ಷೆಯಲ್ಲಿ 372 ನೇ ರ್ಯಾಂಕ್ ಶ್ರೇಯಾಂಶ್ ಪಡೆದಿರುತ್ತಾರೆ. ಅವರ ಕಿರಿಯ ಸಹೋದರ ಶ್ರೇಯಾತಿ ಗೋಮ್ಸ್ ಮಣಿಪಾಲದಲ್ಲಿ ಎಂಜಿನಿಯರಿಂಗ್ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸ್ತುತ ಈ ಕುಟುಂಬ ಶೋಕಮಾತಾ ಚರ್ಚ್ ವ್ಯಾಪ್ತಿಯಲ್ಲಿ ವಾಸವಾಗಿದೆ.