ಮೊಬೈಲ್ ಶಿಕ್ಷಣಕ್ಕೆ ಪೂರಕವಾಗಿ ಬಳಸಿ

| Published : May 14 2025, 01:45 AM IST

ಸಾರಾಂಶ

ಶಿಕಾರಿಪುರ: ಪದವಿ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ನಿರ್ಣಯಿಸುವ ಪ್ರಮುಖ ಕಾಲಘಟ್ಟವಾಗಿದ್ದು, ಮೊಬೈಲ್, ಟಿವಿ ನೋಡಿ ಕಾಲಹರಣ ಮಾಡದೆ ಮೊಬೈಲ್ ಕೇವಲ ಶಿಕ್ಷಣಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.

ಶಿಕಾರಿಪುರ: ಪದವಿ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ನಿರ್ಣಯಿಸುವ ಪ್ರಮುಖ ಕಾಲಘಟ್ಟವಾಗಿದ್ದು, ಮೊಬೈಲ್, ಟಿವಿ ನೋಡಿ ಕಾಲಹರಣ ಮಾಡದೆ ಮೊಬೈಲ್ ಕೇವಲ ಶಿಕ್ಷಣಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.ಮಂಗಳವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ (ಐಕ್ಯುಎಸಿ) ವತಿಯಿಂದ ನಡೆದ 2024-2025 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಎನ್.ಸಿ.ಸಿ, ರೋವರ್ಸ್‌ ಮತ್ತು ರೇಂಜರ್ಸ್‌, ಯುವ ರೆಡ್ ಕ್ರಾಸ್ ಘಟಕ ಹಾಗೂ ರೆಡ್ ರಿಬ್ಬನ್ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆ ವಿಪರೀತವಾಗಿದ್ದು, ವಿಭಿನ್ನ ರೀತಿ ಸಾಧನೆ ಮೂಲಕ ಭವಿಷ್ಯ ನಿರ್ಧರಿಸಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಹ ಹೆಚ್ಚಿನ ಅವಕಾಶವಿದೆ ಎಂದು ತಿಳಿಸಿದರು.

ರಾಜಕಾರಣಿಗಳಿಗೆ ಕೇವಲ ಮುಂದಿನ ಚುನಾವಣೆಯ ಬಗ್ಗೆ ಮಾತ್ರ ಚಿಂತನೆ ಆದರೆ ರಾಜಕೀಯ ಪ್ರಜ್ಞಾವಂತರಿಗೆ ಮುಂದಿನ ಪೀಳಿಗೆ ಬಗ್ಗೆ ಚಿಂತನೆ ಈ ದಿಸೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೊರೆತ ಕಾಲಾವಕಾಶದಲ್ಲಿ ತಾಲೂಕು ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕಾಲೇಜಿನ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮೂಲಕ ಗುರುತಿಸಿಕೊಂಡಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತಿಭೆ, ಸೃಜನಶೀಲತೆ ಗುರುತಿಸಿ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ತಾಲೂಕು ಜಿಲ್ಲೆ, ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಾಧನೆ ಇಲ್ಲದೆ ಮರಣ ಹೊಂದಿದಲ್ಲಿ ಸಾವಿಗೆ ಅಪಮಾನ. ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅಪಮಾನ ಈ ದಿಸೆಯಲ್ಲಿ ಕಾಲೇಜಿನ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ರ್‍ಯಾಂಕ್‌ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮೂಲಕ ಗುರುತಿಸಿಕೊಂಡಿದ್ದು, ಪ್ರತಿಯೊಬ್ಬರನ್ನು ಅಭಿನಂದಿಸುವುದಾಗಿ ತಿಳಿಸಿದರು.ಕಾಲೇಜಿನ ಪ್ರಾಚಾರ್ಯ ಡಾ.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ವೇಳೆ ಶಾಸಕರ ಸಹಿತ ಕಾಲೇಜು ಮೇಲುಸ್ತುವಾರಿ ಸಮಿತಿ ನೂತನ ಸದಸ್ಯರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಅರವಳಿಕೆ ತಜ್ಞ ವೈದ್ಯ, ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಎನ್ ಗುರುದತ್, ಪುರಸಭಾ ಸದಸ್ಯ ಪಾಲಾಕ್ಷಪ್ಪ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಸಿ.ವೇಣುಗೋಪಾಲ್, ಮೇಲುಸ್ತುವಾರಿ ಸಮಿತಿಯ ಸುನೀತ ಗಂಗೊಳ್ಳಿ ಅರವಿಂದ್, ಮಧು, ಕೃಷ್ಣೋಜಿರಾವ್, ಸಂದೀಪ, ಅತಾವುಲ್ಲಾ, ಜಿಲ್ಲಾ ಕೆಡಿಪಿ ಸದಸ್ಯ ಉಮೇಶ್ ಮಾರವಳ್ಳಿ, ಉಪನ್ಯಾಸಕ ಸುಧೀರ್, ಹರೀಶ್ ರೆಡ್ಡಿ, ನಾರಾಯಣ, ಸೋಮಶೇಖರ್ ಶಿಮೊಗ್ಗಿ ಮತ್ತಿತರರಿದ್ದರು.

ಸಹನಾ ಖಾನಂ ಪ್ರಾರ್ಥಿಸಿದರು. ರೇಷ್ಮಾ ಸ್ವಾಗತಿಸಿದರು. ಸುನೀಲ್ ನಿರೂಪಿಸಿ ವಂದಿಸಿದರು.