ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಡಿಜಿಟಲ್ ಯುಗವಾಗಿರುವುದರಿಂದ ನಮ್ಮ ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಡಿಸಿಟಲ್ ಡಿವೈಸ್ಗಳನ್ನು ಬಳಸುವುದು ಅವಶ್ಯವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಹೇಳಿದರು.ಜಿಲ್ಲಾ ಪಂಚಾಯತ್ ಹಳೆಯ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಸಹಕಾರ, ಡೆಲ್ಲ್ ಸಂಸ್ಥೆ ಹಾಗೂ ಶಿಕ್ಷಣ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡ ಜಿಲ್ಲೆಯ ಆಯ್ದ 66 ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಪರಿಕರಗಳ ವಿತರಣೆ ಹಾಗೂ 20 ಗ್ರಂಥಾಲಯ ಮೇಲ್ವಿಚಾರಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು .
ದೇಶದ ಪ್ರತಿ ಗ್ರಾಮದಲ್ಲೂ ಇಂದು ಡಿಜಿಟಲ್ ಕ್ರಾಂತಿ ಆಗಿದ್ದು, ಈ ಕ್ರಾಂತಿ ಗ್ರಾಮಗಳ ವಿಕಾಸಕ್ಕೆ ಸಹಕಾರಿಯಾಗಿದೆ. ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಇಂದು ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ನೀಡಲಾಗುತ್ತಿರುವ ಡಿಜಿಟಲ್ ಪರಿಕರಗಳೆಲ್ಲವೂ ಸಮರ್ಪಕವಾಗಿ ಸದ್ಬಳಕೆಯಾಗಬೇಕು ಎಂದು ತಿಳಿಸಿದರು.ಗ್ರಂಥಾಲಯಗಳಲ್ಲಿ ಡಿಜಿಟಲ್ ಡಿವೈಸ್ಗಳಗಳನ್ನು ಬಳಸುವುದರಿಂದ ವಿದ್ಯಾರ್ಥಿಗಳು, ಯುವ ಜನತೆ, ಸಾರ್ವಜನಿಕರು ಶಿಕ್ಷಣ ಪೀಡಿಯಾ ಅಪ್ಲೀಕೇಶನ್ ಬಳಕೆ ಮಾಡಿಕೊಂಡು 8ನೇ ತರಗತಿಯಿಂದ 12ನೇ ತರಗತಿ ಪಠ್ಯಗಳ ವಿಡಿಯೋ ಪಾಠಗಳನ್ನು ಡಿಜಿಟಲ್ ಕೌಶಲ್ಯ, ಬೇಸಿಕ್ ಕಂಪ್ಯೂಟರ್ ವೃತ್ತಿ ಮಾರ್ಗದರ್ಶನ ಹಾಗೂ ಇನ್ನಿತರ ವಿಷಯಗಳ ತರಬೇತಿ ಪಡೆಯಬಹುದಾಗಿದೆ. ಆದ್ದರಿಂದ ಇಂದು ನೀಡಿರುವ ಡಿಜಿಟಲ್ ಪರಿಕರಗಳು ಇಂದಿನಿಂದಲೇ ಬಳಕೆಯಾದಲ್ಲಿ ಡಿಜಿಟಲ್ ಯುಗ ಎನ್ನುವುದಕ್ಕೆ ಅರ್ಥ ತಂದು ಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಬಾಗಲಕೋಟೆ ಜಿಲ್ಲೆ ಗ್ರಾಮ ಡಿಜಿ ವಿಕಸನ ಜಿಲ್ಲಾ ಸಂಯೋಜಕರು ಸೇರಿದಂತೆ ಇತರರು ಇದ್ದರು.