ಸಾರಾಂಶ
ರಾಣಿಬೆನ್ನೂರು: ಹೋಳಿ ಭಕ್ತಿ ಭಾವದ ಹಬ್ಬವೆ ಹೊರತು ವಿಕಾರವಾಗಿ ಮಾಡುವ ಹಬ್ಬವಲ್ಲ ಎಂದು ಹೆಚ್ಚುವರಿ ಎಸ್ಪಿ ಎಲ್.ಐ. ಶಿರಕೋಳ ತಿಳಿಸಿದರು.ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ಹೋಳಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆ ನಡೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರದ್ಧೆ, ಭಕ್ತಿಯಿಂದ ಹಬ್ಬ ಆಚರಿಸಬೇಕು. ಗಲಾಟೆಗಳು ಸಂಭವಿಸಿದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು, ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ಇರಲಿ. ಸುರಕ್ಷಿತ ಪುಡಿ ಬಣ್ಣ ಬಳಸಿ ಹಬ್ಬದ ಆಚರಣೆ ಮಾಡಿ. ಬಲವಂತವಾಗಿ ಯಾರಿಗೂ ಬಣ್ಣ ಹಾಕಬೇಡಿ ಎಂದರು. ನಗರಸಭೆ ಪೌರಾಯುಕ್ತ ಎಫ್.ಐ. ಇಂಗಳಗಿ ಮಾತನಾಡಿ, ಜನರ ಭಾವನೆಗೆ ಧಕ್ಕೆ ಬಾರದಂತೆ ಶಾಂತಿ- ಸೌಹಾರ್ದದತೆಯಿಂದ ಹಬ್ಬ ಆಚರಿಸಬೇಕು. ಎಲ್ಲರೂ ಒಗ್ಗೂಡಿ ಶಾಂತಿಯಿಂದ ಹಬ್ಬ ಆಚರಣೆ ಮಾಡಬೇಕು. ಹೋಳಿ ಹಬ್ಬದಲ್ಲಿ ರಾಸಾಯನಿಕ ಮುಕ್ತ ಬಣ್ಣಗಳನ್ನು ಬಳಸಬೇಕು, ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು. ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣವರ ಮಾತನಾಡಿ, ಹೋಳಿ ಹಾಗೂ ರಂಜಾನ ಹಬ್ಬದ ವೇಳೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಜನರ ಕರ್ತವ್ಯವಾಗಿದೆ. ಮುಖಂಡರು, ನಾಯಕರು ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ. ಎಲ್ಲ ಧರ್ಮದವರು ಅವರ ಸಾಂಪ್ರದಾಯಿಕ ಪದ್ಧತಿಯಿಂದ ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದೇವೆ. ಸಾಮಾಜಿಕ ಜಾಣತಾಣದಿಂದ ಪೊಲೀಸರಿಗೆ ಒತ್ತಡ ಜಾಸ್ತಿಯಾಗಿದೆ. ಎರಡು ಹಬ್ಬ ಆಚರಣೆಗೆ ಸೂಕ್ತ ಬಂದೋಬಸ್ತ್ ನೀಡಲಾಗುವುದು ಎಂದರು.ವೆಂಕಟೇಶ ಏಕಬೋಟೆ ಮಾತನಾಡಿ, ದುರ್ಗಾ ಸರ್ಕಲ್ನಲ್ಲಿ ಗುರುವಾರ ಕಾಮ ರತಿ ಪ್ರತಿಷ್ಠಾಪನೆ ಮಾಡಲಾಗುವುದು. ಶಾಂತಿ ಸೌಹಾರ್ದದತೆಯಿಂದ ಹಬ್ಬವನ್ನು ಆಚರಣೆ ಮಾಡಬೇಕು ಎಂದರು. ಮಲ್ಲಿಕಾರ್ಜುನ ಪೂಜಾರ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಸಿಪಿಐ ಡಾ. ಶಂಕರ ಎಸ್.ಕೆ., ಪಿಎಸ್ ಐ ಗಡೆಪ್ಪ ಗುಂಜಟಗಿ ವೇದಿಕೆಯಲ್ಲಿದ್ದರು.ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಶೇಖಪ್ಪ ಹೊಸಗೌಡ್ರ, ಪುಟ್ಟಪ್ಪ ಮರಿಯಮ್ಮನವರ ಮಾತನಾಡಿದರು. ಮೈಲಪ್ಪ ದಾಸಪ್ಪನವರ, ನಿತ್ಯಾನಂದ ಕುಂದಪುರ, ಮಂಜುನಾಥ ದುಗ್ಗತ್ತಿ, ಸಂಜೀವರೆಡ್ಡಿ ಮದಗಣಿಕಿ, ವಿನಯಕುಮಾರ ಬಾಳನಗೌಡ, ಕುಮಾರ ಶ್ಯಾವಿ ಮತ್ತಿತರರಿದ್ದರು.ಕೆರೆಯ ಪೂರಕ ಕಾಲುವೆ ಕಾಮಗಾರಿಗೆ ಚಾಲನೆ
ಹಿರೇಕೆರೂರು: ಸಣ್ಣ ನೀರಾವರಿ ಇಲಾಖೆಯಿಂದ ದುರ್ಗಾದೇವಿ ಕೆರೆಯ ಪೂರಕ ಕಾಲುವೆಯಾದ ರಾಮನಕಟ್ಟಿ ಕೆರೆ ಕೋಡಿಯಿಂದ ಭೂತಪ್ಪನ ಕಟ್ಟಿವರೆಗೆ ಎರಡು ಬದಿ ಲೈನಿಂಗ್ ಕಾಮಗಾರಿಗೆ ಚಾಲನೆ ನಿಡಲಾಗುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕೆರೆಗಳ ಅಧುನಿಕರಣ ಪ್ರಧಾನ ಕಾಮಗಾರಿಗಳ ಯೋಜನೆಯಡಿ ಮಂಜೂರಾದ ₹1 ಕೋಟಿ ವೆಚ್ಚದಲ್ಲಿ ದುರ್ಗಾದೇವಿ ಕೆರೆಗೆ ಪೂರಕ ಕಾಲುವೆ ನಿರ್ಮಾಣ ಕಾಮಗಾರಿಗೆ ಭೂಮಿಪುಜೆ ನೆರವೇರಿಸಿ ಮಾತನಾಡಿ, ಈ ಕಾಮಗಾರಿ ನಿರ್ವಹಣೆಯಿಂದ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಹಾಗೂ ನೀರಿನ ಒತ್ತಡ ಹೆಚ್ಚಾದಾಗ ಕಾಲುವೆಗಳ ಎರಡೂ ಬದಿ ಒಡೆಯದಂತೆ ರಕ್ಷಣೆ ನೀಡಿ ನೀರು ಹರಿದು ಹೋಗಲು ಅನುಕೂಲವಾಗಲಿದೆ ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಧಾ ಚಿಂದಿ, ಸದಸ್ಯರಾದ ಕವಿತಾ ಹಾರ್ನಳ್ಳಿ, ರಜಿಯಾ ಅಸದಿ, ಪ್ರಭು ಮಾಳವಳ್ಳಿ, ರವಿ ಸಿದ್ದಪ್ಪಗೌಡ್ರ, ರವಿ ಚಿಂದಿ, ಜಿ.ಎಸ್. ಮತ್ತೂರು, ಪಿ.ಎಚ್. ಪಾಟೀಲ್, ಷಡಕ್ಷರಿ ಬಣಕಾರ, ಶಂಭು ಹಂಸಭಾವಿ, ಮನೋಹರ್ ಹಾದಿಮನಿ ಇತರರು ಇದ್ದರು.