ಮಂಗಳೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಅವಿರತ ಸೇವೆಯಿಂದ ಸರಕಾರದ ಯೋಜನೆಗಳು ಜನರಿಗೆ ತಲುಪುತ್ತಿದೆ. ನಿಮ್ಮ ಕೆಲಸವನ್ನು ಅಭಿನಂದಿಸುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಸೋಮವಾರ ಮಂಗಳೂರಿನ ಪುರಭವನದಲ್ಲಿ ನಡೆದ ಐ.ಸಿ.ಡಿ.ಎಸ್. 50ರ ಸುವರ್ಣ ಸಂಭ್ರಮ ಮತ್ತು ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಸ್ಥ ಸಮಾಜ, ಬಲಿಷ್ಠ ದೇಶ ಕಟ್ಟುವಲ್ಲಿ ಅಂಗವಾಡಿಗಳು ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಇಂದು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಕಾಣದೇ ಇರಲು ಅಂಗನವಾಡಿ ಸಿಬ್ಬಂದಿಗಳು ಕಾರಣ. ಆರೋಗ್ಯವಂತ ತಾಯಿ, ಮಗು ನಿಮ್ಮ ಗುರಿಯಾಗಿದ್ದು, ಅಂಗನವಾಡಿಯವರು ಊರಿನ ಮನೆಗಳ ಸಹೋದರಿಯರಂತೆ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸೇವೆಯಿಂದ ಕ್ರಾಂತಿಕಾರಿ ಬದಲಾವಣೆ ಆಗಿದೆ. ನೀವು ನಿರ್ವಹಿಸುವ ಕೆಲಸವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ ಎಂದರು.

ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮ

ಇಂದಿನ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಬರಬೇಕಿತ್ತು. ಅನಿವಾರ್ಯ ಕಾರಣದಿಂದ ಅವರು ಬಂದಿಲ್ಲ. ಅಂಗನವಾಡಿ ಸಿಬ್ಬಂದಿಗಳ ಸಮಸ್ಯೆಗಳನ್ನು ಕೂತು ಚರ್ಚಿಸುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ನಿಮ್ಮನ್ನೆಲ್ಲ ಸೇರಿಸಿಕೊಂಡು ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಬಗ್ಗೆಯೂ ನನ್ನಲ್ಲಿ ತಿಳಿಸಿದ್ದಾರೆ ಎಂದು ಖಾದರ್ ಪ್ರಸ್ತಾಪಿಸಿದರು.


ನಿಮ್ಮ ಬೇಡಿಕೆಗೆ ನನ್ನ ಸಹಕಾರ

ಅಂಗನವಾಡಿ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವಂತೆ, 2023ರ ಮೊದಲು ನಿವೃತ್ತಿಯಾದ ಕಾರ್ಯಕರ್ತೆ ಮತ್ತು ಸಹಾಯಕಿರಿಗೆ ಗ್ರಾಚುಟಿ ಒದಗಿಸುವಂತೆ ಸಂಘದ ವತಿಯಿಂದ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು. ನಿಮ್ಮೆಲ್ಲ ಬೇಡಿಕೆಗಳಿಗ ನನ್ನ ಸಹಕಾರ ಇದೆ ಎಂದು ಯು,ಟಿ,ಖಾದರ್ ತಿಳಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷೆ ತಾರಾ ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ., ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆರಯರ ಹಾಗೂ ಸಹಾಯಕಿಯರ ಸ್ವತಂತ್ರ ಸಂಘದ ರಾಜ್ಯಾಧ್ಯಕ್ಷೆ ಪ್ರೇಮಾ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮಾಮಣಿ, ಮಂಗಳೂರು ಗ್ರಾಮಾಂತರ ಸಿಡಿಪಿಒ ಶೈಲಾ ಕಾರಗಿ, ಸುಳ್ಯ ಸಿಡಿಪಿಒ ಶೈಲಜಾ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಆಶಾಲತಾ ಸ್ವಾಗತಿಸಿದರು. ದೇವಿಕಾ, ಶರ್ಮಿಳಾ, ಅರುಣಾ ಪುತ್ತೂರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಘದಲ್ಲಿ ಕೆಲಸ ಮಾಡಿದವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು.