ಕಾಳಿ ನದಿ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ವಿಡಿಯೋ : ಸುರಕ್ಷಿತ ಎಂದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

| Published : Aug 17 2024, 10:24 AM IST

Karwar bridge collapse

ಸಾರಾಂಶ

ಕಾರವಾರದಲ್ಲಿ ನೂತನವಾಗಿ ನಿರ್ಮಿಸಿರುವ ಕಾಳಿ ನದಿ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು,   ಆದರೆ ಕಾಳಿ ಸೇತುವೆ ಸುರಕ್ಷಿತವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಾರವಾರ :  ಕಾರವಾರದಲ್ಲಿ ನೂತನವಾಗಿ ನಿರ್ಮಿಸಿರುವ ಕಾಳಿ ನದಿ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ವಿಡಿಯೋ ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಆತಂಕ ಮೂಡಿಸಿದೆ. ಆದರೆ ಕಾಳಿ ಸೇತುವೆ ಸುರಕ್ಷಿತವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ವಿಷಯದ ಕುರಿತು ಜಿಲ್ಲಾಡಳಿತ ಕೂಡಲೇ ತನಿಖೆ ನಡೆಸಿ ವಿವರವಾದ ವರದಿ ನೀಡುವಂತೆ ಐಆರ್‌ಬಿಗೆ ಸೂಚಿಸಿದ್ದು, ಸಂಪೂರ್ಣ ಪರಿಶೀಲನೆಯ ಆನಂತರ ವೀಡಿಯೊದಲ್ಲಿ ತೋರಿಸಿರುವ ಪ್ರದೇಶ ನಿರ್ಮಾಣ ಹಂತದಲ್ಲಿ ಕಾಂಕ್ರೀಟ್ ಸ್ಲರಿಯ ಅತಿಕ್ರಮಿಸುವಿಕೆಯಿಂದ ಆಗಿರುವುದು ಎಂದು ಐಆರ್‌ಬಿ ದೃಢಪಡಿಸಿದೆ. ಸೇತುವೆಗೆ ಸಂಬಂಧಿಸಿದಂತೆ ಯಾವುದೇ ರಚನಾತ್ಮಕ ಹಾನಿ ಇರುವ ಸಂಭವವಿರುವುದಿಲ್ಲ ಎಂದು ಐಆರ್‌ಬಿ ವರದಿ ನೀಡಿದೆ.

ಸಾರ್ವಜನಿಕರಲ್ಲಿ ಅನಗತ್ಯ ಭಯವನ್ನು ಉಂಟುಮಾಡುವ ಯಾವುದೇ ವೀಡಿಯೊಗಳು ಅಥವಾ ಮಾಹಿತಿಯನ್ನು ಹಂಚಿಕೊಳ್ಳದಂತೆ ಅಥವಾ ಪ್ರಸಾರ ಮಾಡದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಸೂಚಿಸಿದೆ. ಇಂತಹ ತಪ್ಪು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ, ಈ ವಿಡಿಯೊವನ್ನು ವೈರಲ್ ಮಾಡಲು ಕಾರಣರಾದವರನ್ನು ಜಿಲ್ಲಾಡಳಿತ ಸಕ್ರಿಯವಾಗಿ ಗುರುತಿಸುತ್ತಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.