ಸಾರಾಂಶ
ದೊಡ್ಡಬಳ್ಳಾಪುರ: ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡಬೇಕು, ಅವುಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ, ಆದ್ದರಿಂದ ನಿಯಮಿತವಾಗಿ ಲಸಿಕೆ ನೀಡುತ್ತಿರಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಹನುಮಂತರಾಯ ಹೇಳಿದರು. ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರಿನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್, ಇಂಟಾಸ್ ಅನಿಮಲ್ ಹೆಲ್ತ್ ಮತ್ತು ಕೊಟ್ಟಿಗೆಮಾಚೇನಹಳ್ಳಿ ಡೈರಿ ಸಹಯೋಗದಲ್ಲಿ ದತ್ತು ಗ್ರಾಮವಾದ ಕೊಟ್ಟಿಗೆಮಾಚೇನಹಳ್ಳಿಯಲ್ಲಿ ಜಾನುವಾರುಗಳ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಿ.ಜೆ. ರೇಣುಕಾರಾಧ್ಯ ಮಾತನಾಡಿ, ರಾಸುಗಳಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಬಂಜೆತನ ಸಮಸ್ಯೆಯು ಅಧಿಕವಾಗುತ್ತಿದೆ, ಆದ್ದರಿಂದ ಉತ್ಕೃಷ್ಠ ಮೇವಿನ ಬೆಳೆಗಳಾದ ಸಿ-ಓ- 5, ಕುದುರೆ ಮಸಾಲೆ, ಹುರುಳಿ, ಅಲಸಂದೆ ಮುಂತಾದ ಹಸಿ ಮೇವುಗಳನ್ನು 20 ಕೆಜಿ ಹಾಗೂ 5 ಕೆಜಿ ಒಣಹುಲ್ಲು ಅನುಪಾತದಲ್ಲಿ ಪ್ರತಿದಿನ ನೀಡುವುದರ ಜೊತೆಗೆ ಲವಣ ಮಿಶ್ರಣ ನೀಡಲು ಸೂಚಿಸಿದರು. ಕರುಗಳಲ್ಲಿ ಜಂತು ನಾಶಕ ಔಷಧಿಗಳ ಮಹತ್ವವನ್ನು ತಿಳಿಸಿದರು.ಈ ತಪಾಸಣೆಗೆ ಬಂದ ಸುಮಾರು 60ಕ್ಕೂ ಅಧಿಕ ರಾಸುಗಳಿಗೆ ಜ್ವರ, ಕೆಮ್ಮು, ಹರ್ನಿಯಾ, ರಕ್ತಪಿಂಜರಿ, ಹೊಟ್ಟೆ ಉಬ್ಬರ, ಥೈಲೇರಿಯಾ, ವಿಷಭಾದೆ, ಅಜೀರ್ಣ, ಪುನಾರವರ್ತಿತ ಸಂತಾನೋತ್ಪತ್ತಿ, ಚರ್ಮದ ಸೋಂಕು, ಗಾಯ, ಕೆಚ್ಚಲು ಬಾವು, ಜಂತು ಹುಳು ಬಾಧೆ ಮತ್ತು ಉಣ್ಣೆ ಹುಳುವಿನ ಬಾಧೆ ಇತ್ಯಾದಿ ಸಮಸ್ಯೆಗಳ ಕುರಿತು
ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.ಕರ್ನಾಟಕ ಹಾಲು ಒಕ್ಕೂಟದ ಪಶು ವೈದ್ಯ ಡಾ. ಜನ್ನಪ್ಪ, ವಿವಿಧ ಕಾಯಿಲೆಗಳಿಗೆ ನಾಟಿ ಔಷಧಿ ಬಳಕೆ, ಗರ್ಭಾವಸ್ಥೆ ರಾಸುಗಳ ಆರೈಕೆ, ಪಶು ಆಹಾರ, ವಿವಿಧ ಲಸಿಕೆಗಳ ಬಗ್ಗೆ ತಿಳುವಳಿಕೆ ನೀಡಿದರು.
ಕೇಂದ್ರದ ಕೃಷಿ ವಿಸ್ತರಣಾ ವಿಜ್ಞಾನಿ ಡಾ. ವೈ.ಎಂ. ಗೋಪಾಲ್ ಮಾತನಾಡಿ, ರಾಸುಗಳಿಗೆ ಖನಿಜಾಂಶಗಳ ಮಿಶ್ರಣವನ್ನು ನೀಡುವುದರಿಂದ ಕರುಗಳ ಬೆಳವಣಿಗೆಯನ್ನು ಸುಧಾರಿಸುತ್ತದೆ, ಮೇವಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ, ಹಾಲಿನ ಉತ್ಪಾದತೆಯನ್ನು ಹೆಚ್ಚಿಸುತ್ತದೆಯೆಂದು ತಿಳಿಸಿದರು. ಖನಿಜಾಂಶಗಳ ಮಿಶ್ರಣವನ್ನು ಪ್ರಾತ್ಯಕ್ಷಿಕೆಯನ್ನು ಕೈಗೊಂಡಿರುವ ರೈತರಿಗೆ ನೀಡಿದರು.ಪಶುವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ವೈಷ್ಣವಿ, ಕೆ.ಆರ್, ಡಾ. ಚೇತನ್ ರಾಸುಗಳಿಗೆ ಚಿಕಿತ್ಸೆ ನೀಡಿ ಔಷಧೋಪಚಾರಗಳನ್ನು ನೀಡಿದರು.
ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್ ಮತ್ತು ಇಂಟಾಸ್ ಅನಿಮಲ್ ಹೆಲ್ತ್ ಕಂಪೆನಿಯ ವತಿಯಿಂದ ಕ್ಯಾಲ್ಸಿಯಂ ಪೂರಕಗಳು, ಮಲ್ಟಿವಿಟಮಿನ್ಗಳನ್ನು ಜಾನುವಾರುಗಳಿಗೆ ಉಚಿತವಾಗಿ ನೀಡಲಾಯಿತು.ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಲಕ್ಷ್ಮೀಪತಿ, ಹಾಲು ಪರೀಕ್ಷಕ ಚೇತನ್, ಮುಖಂಡರಾದ ನಾಗರಾಜು, ಕೃಷ್ಣಪ್ಪ, ಬೈಲಪ್ಪ, ಪುನೀತ್ ಮತ್ತಿತರರು ಭಾಗವಹಿಸಿದ್ದರು.
4ಕೆಡಿಬಿಪಿ1-ದೊಡ್ಡಬಳ್ಳಾಪುರ ತಾಲೂಕಿನ ಕೊಟ್ಟಿಗೆ ಮಾಚೇನಹಳ್ಳಿಯಲ್ಲಿ ಪಶುವೈದ್ಯಕೀಯ ಶಿಬಿರ ನಡೆಯಿತು.