12ನೇ ಶತಮಾನ ಅವಿಸ್ಮರಣೀಯ ಕಾಲ.ಬಸವಾದಿ ಶರಣರು ತಮ್ಮ ಸಂದೇಶಗಳ ಮೂಲಕ ಅದ್ಭುತ ಕ್ರಾಂತಿ ಮಾಡಿದರು. ವಿಶ್ವಚರಿತ್ರೆಯಲ್ಲಿ ಫ್ರೆಂಚ್ ಕ್ರಾಂತಿ ದಾಖಲಾಗುತ್ತದೆ. ಆದರೆ ವಚನ ಕ್ರಾಂತಿ ದಾಖಲಾಗಲಿಲ್ಲ. ಅಲ್ಲಮಪ್ರಭು ಅವರನ್ನು ಜ್ಞಾನನಿಧಿ, ವೈರಾಗ್ಯನಿಧಿ ಎಂದು ಹೇಳಲಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವದ ಚರಿತ್ರೆ ನೋಡಿದಾಗ ಅದ್ಭುತವಾದ ಕ್ರಾಂತಿ ಮಾಡಿದವರು ಶರಣರು. ಆದರೆ ವಚನಕ್ರಾಂತಿ ದಾಖಲಾಗದಿದ್ದುದು ನಮ್ಮ ದೌರ್ಭಾಗ್ಯ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ. ತಳವಾರ ವಿಷಾದಿಸಿದರು.ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಅವರು ರಚಿಸಿರುವ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರಯ್ಯ ಇಂಗ್ಲಿಷ್ಗೆ ಅನುವಾದಿಸಿರುವ ‘ಅಲಮಪ್ರಭು’ ಸಚಿತ್ರ ಕಥಾಮಾಲಿಕೆ ಕೃತಿಯನ್ನು ನಗರದ ಶ್ರೀ ಹೊಸಮಠವು ಬುಧವಾರ ನಟರಾಜ ಸಭಾಭವನದಲ್ಲಿ ಏರ್ಪಡಿಸಿದ್ದ ಅಲ್ಲಮಪ್ರಭು ಜಯಂತಿ ಹಾಗೂ ಶ್ರೀ ಬಸವಲಿಂಗ ಸ್ವಾಮೀಜಿಯವರ 75ನೇ ಪುಣ್ಯಾರಾಧನಾ ಮಹೋತ್ಸವದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
12ನೇ ಶತಮಾನ ಅವಿಸ್ಮರಣೀಯ ಕಾಲ.ಬಸವಾದಿ ಶರಣರು ತಮ್ಮ ಸಂದೇಶಗಳ ಮೂಲಕ ಅದ್ಭುತ ಕ್ರಾಂತಿ ಮಾಡಿದರು. ವಿಶ್ವಚರಿತ್ರೆಯಲ್ಲಿ ಫ್ರೆಂಚ್ ಕ್ರಾಂತಿ ದಾಖಲಾಗುತ್ತದೆ. ಆದರೆ ವಚನ ಕ್ರಾಂತಿ ದಾಖಲಾಗಲಿಲ್ಲ ಎಂದರು.ಅಲ್ಲಮಪ್ರಭು ಅವರನ್ನು ಜ್ಞಾನನಿಧಿ, ವೈರಾಗ್ಯನಿಧಿ ಎಂದು ಹೇಳಲಾಗುತ್ತದೆ. ಅವರನ್ನು ಕೇಂದ್ರೀಕರಿಸಿ, ವೀರಶೈವ ಸಾಹಿತ್ಯದ ಹಲವಾರು ಕೃತಿಗಳು ಬಂದಿವೆ. ಅಲ್ಲಮಪ್ರಭು ಅವರು ಕನ್ನಡ ಸಾಹಿತ್ಯವನ್ನು ಸಾಕಷ್ಟು ಪ್ರಭಾವಿಸಿದ್ದಾರೆ, ವಿಚಾರ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆ ಅತ್ಯಮೂಲ್ಯವಾದುದು ಎಂದರು.
ಒಂದು ಚಿತ್ರ ನೂರು ಭಾವ ತಿಳಿಸುತ್ತದೆ. ಶಿವಲಿಂಗಪ್ಪವರು ಸಚಿತ್ರ ಸಮೇತ ರಚಿಸಿದ ಅಲ್ಲಮಪ್ರಭು ಕೃತಿಯನ್ನು ಪ್ರೊ.ಚಂದ್ರಶೇಖರಯ್ಯ ಅವರು ಅಷ್ಟೇ ಸಮರ್ಥವಾಗಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಆ ಮೂಲಕ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಶರಣರ ಸಂದೇಶವನ್ನು ತಲುಪಿಸುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಪ್ರೊ.ಚಂದ್ರಶೇಖರಯ್ಯ ಮಾತನಾಡಿ, ಕನ್ನಡದಲ್ಲಿ ನಾವು ಎಷ್ಟೇ ಬರೆದರೂ ಕರ್ನಾಟಕ ಗಡಿ ದಾಟಿ ಹೋಗದು. ಆದ್ದರಿಂದ ಆಂಗ್ಲ ಭಾಷೆಗೆ ಅನುವಾದಿಸಿದರೆ ವಿಶ್ವದೆಲ್ಲೆಡೆ ತಲುಪಬಹುದು. ಶರಣರ ಯಾವುದೇ ಕೃತಿಗಳಾದರೂ ಉಚಿತವಾಗಿ ಆಂಗ್ಲ ಭಾಷೆಗೆ ಅನುವಾದ ಮಾಡಿಕೊಡುವೆ ಎಂದರು.
ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಮಾತನಾಡಿ, ಎಲ್ಲರಿಗೂ ವಿದ್ಯೆ ನೀಡುವಲ್ಲಿ ವೀರಶೈವ ಮಠಮಾನ್ಯಗಳ ಕೊಡುಗೆ ಇದೆ. ಆದರೆ, ವಚನ ಸಾಹಿತ್ಯದಲ್ಲಿ ಎಲ್ಲವೂ ಇದೆ. ಆದರೆ ಈ ಬಗ್ಗೆ ಗಂಭೀರ ಚಿಂತನೆ ಆಗಿಲ್ಲ ಎಂದು ವಿಷಾದಿಸಿದರು.ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಅಲ್ಲಮ ಶೋಷಿತ ವರ್ಗದಿಂದ ಬಂದ ವ್ಯಕ್ತಿ. ಶೂನ್ಯಪೀಠದ ಅಧ್ಯಕ್ಷರಾಗಿ ಸಾಮಾಜಿಕ ಕ್ರಾಂತಿ ಮಾಡಿದವರು ಎಂದರು.
ಹೊಸಮಠದ ಶ್ರೀಬಸವಲಿಂಗ ಸ್ವಾಮೀಜಿ ರಾಜರಿಂದಲೇ ಆಸ್ಥಾನ ವಿದ್ವಾನ್ ಪದವಿ ಪಡೆದಿದ್ದರು. ಅದೇ ರೀತಿ ಗುರುಶಾಂತ ಸ್ವಾಮೀಜಿ ಕೂಡ ಅಪಾರ ಪಾಂಡಿತ್ಯ ಪಡೆದಿದ್ದರು. ಈ ಪರಂಪರೆಯನ್ನು ಈಗಿನ ಶ್ರೀ ಚಿದಾನಂದ ಸ್ವಾಮೀಜಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.ಟಿ.ನರಸೀಪುರ ತಾ. ಎಂ.ಎಲ್. ಹುಂಡಿ ಮಠಾಧ್ಯಕ್ಷ ಶ್ರೀ ಗೌರಿಶಂಕರ ಸ್ವಾಮೀಜಿ ಆಶೀರ್ವಚನ ನೀಡಿ, ಅಲ್ಲಮಪ್ರಭು ಅನುಭವ ಮಂಟಪದ ದೊಡ್ಡ ಶಕ್ತಿ. ಬಸವಾದಿ ಶರಣರು ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಯ ಮಹತ್ವ ಸಾರಿದರು ಎಂದ ಅವರು, ಪ್ರತಿಯೊಬ್ಬರಿಗೂ ವಿದ್ಯೆಯ ಜೊತೆಗೆ ಉದ್ಯೋಗ, ಮಾನವೀಯತೆ ಹಾಗೂ ಸಂಸ್ಕಾರ ಮುಖ್ಯ ಎಂದರು.
ಹೊಸಮಠದ ಕಿರಿಯ ಶ್ರೀಗಳಾದ ಸಿದ್ಧಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಮುಡುಕುತೊರೆ ಕಲ್ಮಠದ ಶ್ರೀ ನಂದಿಕೇಶ್ವರ ಸ್ವಾಮೀಜಿ, ಸೇತುವೆಮಠದ ಶ್ರೀ ಸಹಜಾನಂದ ಸ್ವಾಮೀಜಿ, ನೆರಗ್ಯಾತನಹಳ್ಳಿಯ ಶ್ರೀ ಇಮ್ಮಡಿ ಶಿವಕುಮಾರ ಸ್ವಾಮೀಜಿ, ಕಳ್ಳಿಪುರದ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಇದ್ದರು. ಅಲ್ಲಮಪ್ರಭುಗಳ ಜೀವನ- ಸಾಧನೆ ಕುರಿತ ಕಲಾ ಪ್ರದರ್ಶನವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು.ಎನ್.ಚುಡಾಮಣಿ ವಚನ ಗಾಯನ ನಡೆಸಿಕೊಟ್ಟರು. ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಿ.ಎನ್. ಸಂತೋಷ್ ಪಟೇಲ್ ಸ್ವಾಗತಿಸಿದರು. ಶ್ರೀನಟರಾಜ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ.ಡಿ. ಸುನೀತಾ ರಾಣಿ ವಂದಿಸಿದರು. ಶ್ರೀನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಂ.ಎಸ್. ಸಂಧ್ಯಾರಾಣಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬಿ.ಇಡಿ. ಪ್ರಶಿಕ್ಷಣಾರ್ಥಿಗಳು, ಮಠದ ಭಕ್ತರು ಇದ್ದರು.