ಸಾರಾಂಶ
- ಅತ್ತಿವೇರಿ ಬಸವ ಧಾಮದ ಬಸವೇಶ್ವರಿ ಮಾತಾಜಿ ವಿಶೇಷ ಉಪನ್ಯಾಸ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಸಮಾಜದಲ್ಲಿದ್ದ ಕಂದಾಚಾರ, ಮೂಢನಂಬಿಕೆ ಮತ್ತು ಮೇಲು-ಕೀಳು ಎಂಬಿತರೆ ಪಿಡುಗುಗಳನ್ನು ಶೋಧಿಸಿ, ಶ್ರೇಷ್ಠ ಲಿಂಗಾಯತ ಧರ್ಮ ರಚನೆಯಾಗಿದೆ. ವಿಶ್ವಗುರು ಬಸವಣ್ಣನವರು ಚಿಕ್ಕವರಿದ್ದಾಗ ಅಸಮಾನತೆ ಪ್ರಶ್ನಿಸುತ್ತಿದ್ದರು. ಇಂತಹ ಮನೋಭಾವ ಪ್ರಸಕ್ತ ದಿನಗಳಲ್ಲಿ ಯುವಕರಲ್ಲಿ ಕಾಣುತ್ತಿಲ್ಲ ಎಂದು ಅತ್ತಿವೇರಿ ಬಸವ ಧಾಮದ ಬಸವೇಶ್ವರಿ ಮಾತಾಜಿ ಬೇಸರ ವ್ಯಕ್ತಪಡಿಸಿದರು.
ನಗರದ ಎಂಸಿಸಿ ಎ ಬ್ಲಾಕ್ನಲ್ಲಿರುವ ಬಸವ ಮಂಟಪದಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ ಮೀನಾಕ್ಷಮ್ಮ, ಲಿಂ. ವೀರಭದ್ರಪ್ಪ ದತ್ತಿ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ ಸಭೆಯಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.ವಚನ ಸಾಹಿತ್ಯ ಹುಟ್ಟಿದ್ದು ಜನರನ್ನು ಹೊಗಳಲು ಅಲ್ಲ. ಸಮಾಜದಲ್ಲಿನ ಓರೆ-ಕೋರೆಗಳನ್ನು ತಿದ್ದುವುದು ಹಾಗೂ ಜನರನ್ನು ಜಾಗೃತರನ್ನಾಗಿಸಲು ವಚನ ಸಾಹಿತ್ಯ ಜನಿಸಿತು. ಹಾಗಾಗಿ, ನೈಜವಾಸ್ತವ ಅರಿಯಲು ಎಲ್ಲರೂ ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಬೇಕು. ಜನಗಣತಿಯಲ್ಲಿ ಮೊದಲು 21 ಪರ್ಸೆಂಟ್ ಇದ್ದವರು 18 ಪರ್ಸೆಂಟ್ ಆದರು, ನಂತರ ಶೇ.14 ಪರ್ಸೆಂಟಿಗೆ ಬಂದೆವು. ಈಗ 7-8 ಪರ್ಸೆಂಟ್ ಇದ್ದಾರೆ ಎಂಬ ವರದಿ ಇವೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಗುರು ಬಸವ ಮಂಟಪದ ಎಂ.ಹನುಮಂತಪ್ಪ ಐಗೂರು, ಬಸವ ಬಳಗದ ಎ.ಎಚ್. ಹುಚ್ಚಪ್ಪ ಮಾಸ್ತರ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಎನ್.ಎಸ್.ರಾಜು, ಗೌರವ ಸಲಹೆಗಾರ ಎಚ್.ಕೆ.ಲಿಂಗರಾಜು, ಎಂ.ಪರಮೇಶ್ವರಪ್ಪ, ಗಾಯತ್ರಿ ವಸ್ತ್ರದ್ ಹಾಗೂ ದತ್ತಿ ದಾನಿಗಳಾದ ಮಧುಮತಿ, ಗಿರೀಶ ದೇವಿಗೆರೆ ಮತ್ತಿತರರಿದ್ದರು.- - -
ಕೋಟ್ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡ ಲಿಂಗಾಯತವು ಜಾತಿಯಲ್ಲ, ಇದೊಂದು ಶ್ರೇಷ್ಠ ಧರ್ಮ. ಲಿಂಗಾಯತ ಧರ್ಮದಲ್ಲಿ ಪುರುಷರಿಗೆ ಇರುವ ಹಕ್ಕು ಬಾಧ್ಯತೆಗಳಷ್ಟೇ ಸಮಾನ ಹಕ್ಕು ಮಹಿಳೆಯರಿಗೂ ಇದೆ. ಆದ್ದರಿಂದ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೂ ಗುರು ಬಸವರನ್ನು ಗೌರವಿಸಿ, ಪೂಜಿಸಬೇಕು- ಬಸವೇಶ್ವರಿ ಮಾತಾಜಿ, ಅತ್ತಿವೇರಿ ಬಸವ ಧಾಮ
- - --1ಕೆಡಿವಿಜಿ36:
ದಾವಣಗೆರೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅತ್ತಿವೇರಿ ಬಸವ ಧಾಮದ ಬಸವೇಶ್ವರಿ ಮಾತಾಜಿ ಉಪನ್ಯಾಸ ನೀಡಿದರು.