ಸಾರಾಂಶ
ಕನ್ನಡಪ್ರಭ ವಾರ್ತೆ ಕೊಡ್ಲಿಪೇಟೆ
ಸಮಾಜದಲ್ಲಿ ಇಂದು ನಡೆಯುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕ್ರತಿಕ ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧಿಯಾಗಿದೆ. ನಾಡಿನ ಸಂಸ್ಕೃತಿಗಳ ಅಧಃಪತನಕ್ಕೆ ಅನಕ್ಷರಸ್ಥರಿಗಿಂತ ಅಕ್ಷರಸ್ಥರ ಬೇಜವಬ್ದಾರಿಯ ವರ್ತನೆಗಳೇ ಕಾರಣ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ವಿಷಾದಿಸಿದ್ದಾರೆ.ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಕೊಡ್ಲಿಪೇಟೆಯಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಗುರು ಪಂಚಾಕ್ಷರ ಶಿವಾಚಾರ್ಯರ ದತ್ತಿ ‘ಶರಣ ಸಂಸ್ಕೃತಿ ಪ್ರಸಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿಂದು ಘಟಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ 12ನೇ ಶತಮಾನದ ವಚನಕಾರರು ನೀಡಿದ ಸಾಮಾಜಿಕ ಸಂದೇಶಗಳು ಪರಿಹಾರವಾಗಿವೆ. ಬಸವೇಶ್ವರರಾದಿಯಾಗಿ ವಚನಕಾರರು ನಡೆ ನುಡಿಗಳೆರಡನ್ನು ಒಂದಾಗಿಸಿ ಕಾಯಕವೇ ಕೈಲಾಸ, ಎನಗಿಂತ ಕಿರಿಯರಿಲ್ಲ. ಶಿವ ಶರಶರಣರಿಗಿಂತ ಹಿರಿಯರಿಲ್ಲ... ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ? ನಿಮ್ಮನ್ನು ನೀವು ತಿದ್ದಿಕೊಂಡು ನೋಡಿ. ಸಮಾಜವೇ ಬದಲಾಗಿರುತ್ತದೆ ಎಂದು ಸಾರಿದರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಮತ್ತೊಂದು ವಚನವೊಂದರ ಸಾರ ಸಾಕು. ಮನುಷ್ಯ ಎಲ್ಲರೊಳಗೆ ಒಂದಾಗಿ ಶಾಂತಿ, ಸಮಧಾನ, ಸಹಬಾಳ್ವೆಯ ಬದುಕು ಕಟ್ಟಲು. ಆದರೆ ಆಗುತ್ತಿರುವುದೇನು ?
ಅಂತರಂಗವನ್ನು ಕೊಳಕು ಮಾಡಿಕೊಂಡು ಬಹಿರಂಗದ ನಾಟಕ ವಾಡುತ್ತಿದ್ದೇವೆ ಎಂದು ಜಮೀರ್ ಅಹಮದ್ ನುಡಿದರು.ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆಯ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ, ಸಮ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದಲ್ಲಿನ ಶರಣರ ಪರಂಪರೆ ನಾಡಿಗೆ ನೀಡಿರುವ ಕೊಡುಗೆ ಅಪಾರವಾದುದು. ಬಸವೇಶ್ವರರು 900 ವರ್ಷಗಳ ಹಿಂದೆಯೇ ಅನುಭವ ಮಂಟಪ ತೆರೆಯುವ ಮೂಲಕ ಎಲ್ಲಾ ಜಾತಿ ಹಾಗೂ ಧರ್ಮಗಳ ಶರಣರನ್ನು ಇವನಾರವ ಎನ್ನದೇ ಇವ ನಮ್ಮವನೆಂದು ಪುರಸ್ಕರಿಸಿ ಸಮಾನತೆ ತಂದರು ಎಂದರು.
ಮಾನವ ಹಕ್ಕುಗಳ ಆಯೋಗವನ್ನು ಸರ್ಕಾರಗಳು ಇತ್ತೀಚೆಗೆ ರಚಿಸಿವೆ. ಆದರೆ ಬಸವಣ್ಣ ಅವನ ಕಾಲಾವಧಿಯಲ್ಲಿಯೇ ಸಮಾಜದಲ್ಲಿನ ನೊಂದು, ಬೆಂದ ಕಡು ಬಡ ಜನರಿಗೆ ಸಮನಾದ ನ್ಯಾಯ ನೀಡುತ್ತಿದ್ದರು ಎಂದು ಶ್ರೀಗಳು ಹೇಳಿದರು.ಇಂದು ವಿದ್ಯಾರ್ಥಿ ಹಂತದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಹಾಗೂ ಶರಣರ ವಿಚಾರಧಾರೆಗಳ ಅರಿವು ಮೂಡಿಸಿದಲ್ಲಿ ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ಕಾಣಲು ಸಾಧ್ಯ ಎಂದರು.
ಸಂಸ್ಥೆಯ ಪ್ರಾಂಶುಪಾಲ ಮಹೇಶ್ ಇನ್ನು ಮುಂದೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ನಿತ್ಯವೂ ವಚನಗಳ ಅರಿವು ಮೂಡಿಸಿ ಕಲಿಸಲಾಗುವುದು ಎಂದರು.ಕೊಡ್ಲಿಪೇಟೆಯ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾಸಂಸ್ಥೆ ನಿರ್ದೇಶಕ ಎಚ್.ಎಂ.ದಿವಾಕರ್ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಉಪನ್ಯಾಸಕ ಡಿ.ಪಿ.ಸತೀಶ್ ಇದ್ದರು.
ಸಂಸ್ಥೆಯ ಅನುಷಾ ಹಾಗೂ ಅಮೀನಾ ತಂಡದಿಂದ ವಚನಗಾಯನ ನಡೆಯಿತು.ವಿದ್ಯಾರ್ಥಿನಿ ಅಲೀಮಾ ಸ್ವಾಗತಿಸಿದರು. ಯಶಸ್ವಿನಿ ವಂದಿಸಿದರು. ಸತೀಶ್ ನಿರೂಪಿಸಿದರು.