ಉಡುಪಿ: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆಯ ಪ್ರತಿಭಾವಂತೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಜನಿ (ಎಸ್ಎಸ್ಎಲ್ಸಿಯಲ್ಲಿ ಶೇ 98, ಪ್ರಥಮ ಪಿಯಸಿಯಲ್ಲಿ ಶೇ 97) ಸರಸ್ವತಿ ಮತ್ತು ಬಸವ ಪೂಜಾರಿ ಇವರ ಪುತ್ರಿ, ಇವಳಿಗೆ ಬ್ರಹ್ಮಾವರ ತಾಲೂಕಿನ ವಡ್ಡರ್ಸೆಯಲ್ಲಿ ದಯಾಶಂಕರ ಶೆಟ್ಟಿ ಮತ್ತು ಪ್ರತಿಭಾ ಶೆಟ್ಟಿ ಅವರ ಹೆಸರಿನಲ್ಲಿ ಮುಂಬೈಯ ವಿಂಡ್ಸರ್ ರೆಫ್ರೆಕ್ಟರೀಸ್ ಪ್ರೈ.ಲಿ. ಸಂಸ್ಥೆಯ ಸಿಇಒ ಪ್ರಜ್ಞಾ ಶೆಟ್ಟಿ ಅವರು ಸಂಸ್ಥೆಯ ವತಿಯಿಂದ ನಿರ್ಮಿಸಿದ ನೂತನ ಮನೆ ‘ಪ್ರತಿಭಾ ನಿಲಯ’ವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಹಸ್ತಾಂತರಿಸಿದರು.
ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿಗಳ ಆಯ್ಕೆ, ಮನೆ ನಿರ್ಮಾಣಕ್ಕೆ ಅರ್ಹತೆಯ ಮಾನದಂಡ ಎಲ್ಲವೂ ಪಾರದರ್ಶಕ. ಅಲ್ಲಿ ಯಾರ ಪ್ರಭಾವವೂ ಕೆಲಸ ಮಾಡದು, ಅವರ ಶಿಸ್ತು, ಸಮಯಪ್ರಜ್ಞೆಯಿಂದ ಕೂಡಿದ ಕಾರ್ಯಕ್ರಮ ಹೇಗಿದೆಯೆಂದರೆ ಬರಲು ಅನಿವಾರ್ಯ ಕಾರಣದಿಂದ ಸ್ವಲ್ಪ ವಿಳಂಬವಾದರೂ ನಮ್ಮನ್ನು ಅಪರಾಧಿ ಪ್ರಜ್ಞೆಗೆ ಒಳಗಾಗುವಂತೆ ಮಾಡುತ್ತದೆ ಎಂದು ಹೇಳಿದರು.ನಿವೃತ್ತ ಪ್ರಾಧ್ಯಾಪಕ ಉಪೇಂದ್ರ ಸೋಮಯಾಜಿ ಅವರು ಯಕ್ಷಗಾನ ಕಲಾರಂಗ ಸುಮನಸ್ಕರ ಕೂಟ. ಅವರ ಸಮಾಜಪರ ಕಾಳಜಿ ಅನನ್ಯ. ಈ ಕಾಲದಲ್ಲಿ ಇಂತಹ ಒಂದು ಸಂಘಟನೆ ಇದೆ ಎಂಬುದೇ ನಾಡಿನ ಹೆಮ್ಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ಉಡುಪಿಯ ಮಾಜಿ ಲಯನ್ಸ್ ಗವರ್ನರ್, ಯಕ್ಷಗಾನ ಕಲಾರಂಗದ ಸದಸ್ಯ ವಿ. ಜಿ. ಶೆಟ್ಟಿ ವಹಿಸಿದ್ದರು. ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಚನ್ನರಾಯಪಟ್ಟಣದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಅರುಣಾ ಸೋಮನಾಥ ಹೆಗ್ಡೆ ಅಭ್ಯಾಗತರಾಗಿ ಮತ್ತು ಕಲಾರಂಗದ ಸದಸ್ಯರು ಭಾಗವಹಿಸಿದ್ದರು. ಪ್ರಾಂಶುಪಾಲ ಜಗದೀಶ ನಾವುಡ, ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಬಿ. ಜಗದೀಶ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ, ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ವಿಷ್ಣುಮೂರ್ತಿ ಭಟ್ ಉಪಸ್ಥಿತರಿದ್ದರು.ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.