ಸಾರಾಂಶ
ಗಂಗಾವತಿ:
ಸಂಡೂರು ವಿಧಾನಸಭೆ ಉಪ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಕೆ ಮಾಡಲಾಗಿದೆ ಎಂದು ಈ ಮೊದಲೇ ಹೇಳಿದ್ದೇ. ಇದೀಗ ಇಡಿ ದಾಳಿಯಿಂದ ಸಾಬೀತಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸೋಮವಾರ ಕ್ಷೇತ್ರಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗೋವಾ ಹಾಗೂ ತೆಲಂಗಾಣದ ಚುನಾವಣೆಗೂ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ. ವಾಲ್ಮೀಕಿ ನಿಗಮದ ಹಣ ಬಳ್ಳಾರಿ, ರಾಯಚೂರ, ಕೊಪ್ಪಳಕ್ಕೂ ಹರಿದು ಬಂದಿದೆ ಎಂದ ಅವರು, ಬಾರ್, ಕಿರಾಣಿ ಅಂಗಡಿಗಳಿಗೂ ಹಣ ಹೋಗಿದೆ. ಕೆಲ ರೈತರ ಅಕೌಂಟ್ಗೆ ಹಣ ಬಂದಿದೆ ಎಂದು ರೈತರು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ಕಾಂಗ್ರೆಸ್ ಶಾಸಕರು, ಸಂಸದರ ಮನೆ ಮೇಲೆ ದಾಳಿ ನಡೆಸಿದೆ ಎಂದರು.ವಾಲ್ಮೀಕಿ ಹಗರಣದಲ್ಲಿ ಐವರು ಶಾಸಕರು, ಸಂಸದರು ಸಿಕ್ಕಿ ಹಾಕಿಕೊಂಡಿದ್ದಾರೆ. ಮುಡಾ ಹಗರಣದಲ್ಲಿ ₹ 400 ಕೋಟಿ ಮೌಲ್ಯದ ಸೈಟ್ಗಳು ಅಟ್ಯಾಚ್ ಮೆಂಟ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣ ಮಾಡಿದ್ದಾರೆಂದು ಎಲ್ಲರೂ ಮಾತಾಡಿದ್ದಾರೆ. ಇದರ ಸತ್ಯ ತಾನಾಗಿಯೇ ಹೊರ ಬರುತ್ತದೆ. ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ಇದೀಗ ಜನಗಣತಿ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದಾರೆ ಎಂದರು.
ಶತ್ರುಗೆ 30 ದಿನ ಖುಷಿ:ಭಗವಂತ ಶತ್ರುಗಳು 30 ದಿನ ಖುಷಿ ಇರಲೆಂದೇ ನನಗೆ ಶಾಕ್ ಕೊಟ್ಟಿರಬೇಕು ಅಂದುಕೊಂಡಿದ್ದೇನೆ. ನಾನು ಯಾವುದಕ್ಕೂ ಹೆದರುವವನಲ್ಲ. ನಾನು ಭಗವಂತನಲ್ಲಿ ನಂಬಿಕೆ ಇಟ್ಟುವನು. ನನ್ನ ಜೀವ ಇರುವವರಿಗೂ ಜನ ಸೇವೆ ಮಾಡುತ್ತೇನೆ ಎಂದ ಅವರು, ಆಕ್ರಮ ಗಣಿಗಾರಿಕೆಯಿಂದ ಮುಕ್ತನಾಗಿದ್ದೇನೆ. ಲೈಸನ್ಸ್ ವಿಚಾರದಲ್ಲಿ ವಿಚಾರಣೆ ನಡೆಯ ಬೇಕಾಗಿದೆ ಎಂದರು.
ನಾನು ಅಂಜನಾದ್ರಿ ಆಂಜನೇಯಸ್ವಾಮಿಯ ಮೇಲೆ ನಂಬಿಕೆ ಇಟ್ಟವನು. ಅಂಜನಾದ್ರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.