ವಾಲ್ಮೀಕಿ ನಿಗಮ: ಬಹುಕೋಟಿ ಹಗರಣದ ಕಿಡಿಯೀಗ ಭುಗಿಲು!

| Published : May 30 2024, 12:51 AM IST / Updated: May 30 2024, 05:08 AM IST

Vidhana Soudha

ಸಾರಾಂಶ

ಸಚಿವರ ಬಗ್ಗೆ ಡೆತ್‌ನೋಟ್‌ ಬರೆದಿದ್ದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ಘಟಿಸಿವೆ. 

  ಬೆಂಗಳೂರು :  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಾಗಿರುವ ಕೋಟ್ಯಂತರ ರು. ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ್‌ ಮತ್ತು ಲೆಕ್ಕಾಧಿಕಾರಿ ಪರಶುರಾಮ್‌ ಜಿ.ದುರ್ಗಣ್ಣ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮುಖ್ಯ ಖಾತೆಯಲ್ಲಿ 2023-24 ಹಾಗೂ 2024-25ನೇ ಸಾಲಿನ ಯೋಜನೆಗಳಿಗೆ ನಿಗಮದ ಮುಖ್ಯ ಖಾತೆಯಲ್ಲಿ ಮೀಸಲಿಟ್ಟ 187 ಕೋಟಿ ರು. ಮೊತ್ತದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ 88 ಕೋಟಿ ರು.ಗಳನ್ನು ಅನ್ಯ ಖಾತೆಗೆ ವರ್ಗಾಯಿಸುವ ಮೂಲಕ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಕಚೇರಿ ಅಧೀಕ್ಷಕ ಚಂದ್ರಶೇಖರ್‌ ಎಂಬುವವರು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಪ್ರಕರಣವೀಗ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದು, ವಿರೋಧ ಪಕ್ಷಗಳು ರಾಜ್ಯ ಸರ್ಕಾರ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ. ನಾಗೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದರ ನಡುವೆಯೇ ಇದೀಗ 88 ಕೋಟಿ ರು. ಹಣ ವರ್ಗಾವಣೆ ಕುರಿತಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ್‌ ಮತ್ತು ಲೆಕ್ಕಾಧಿಕಾರಿ ಪರಶುರಾಮ್‌ ಜಿ.ದುರ್ಗಣ್ಣ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಆದೇಶಿಸಿದೆ.

ವರ್ಗಾವಣೆಗೊಂಡ ಹಣ ಮುಖ್ಯ ಖಾತೆಗೆ ವಾಪಸ್‌: ಇಲಾಖಾ ಸಚಿವರು, ನಿಗಮದ ಅಧ್ಯಕ್ಷರು, ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ನಿಗಮದ ಮುಖ್ಯ ಖಾತೆಯಿಂದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕೃತ ಖಾತೆಗೆ ವರ್ಗಾಯಿಸಲಾದ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ನಿಗಮ ಆರಂಭಿಸಿದೆ. 88 ಕೋಟಿ ರು.ಗಳನ್ನು ಮುಖ್ಯ ಖಾತೆಗೆ ವಾಪಸ್‌ ವರ್ಗಾಯಿಸಲಾಗುತ್ತಿದೆ.