ಜಾತಿಗಣತಿ ಬಿಡುಗಡೆಗೆ ಆಗ್ರಹಿಸಿ ವಾಲ್ಮೀಕಿ ಮುಖಂಡರಿಂದ ಪ್ರತಿಭಟನೆ

| Published : Jan 28 2025, 12:50 AM IST

ಜಾತಿಗಣತಿ ಬಿಡುಗಡೆಗೆ ಆಗ್ರಹಿಸಿ ವಾಲ್ಮೀಕಿ ಮುಖಂಡರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ₹160 ಕೋಟಿ ವ್ಯಯಿಸಿ 2015ರಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿದರು

ಬಳ್ಳಾರಿ: ಜಾತಿಗಣತಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಏಕಲವ್ಯ ಪಡೆ ಜಿಲ್ಲಾ ಘಟಕ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸಿದ್ದರಾಮಯ್ಯ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಸುಮಾರು ₹160 ಕೋಟಿ ವ್ಯಯಿಸಿ 2015ರಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿದರು. ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 10 ವರ್ಷಗಳಾದರೂ ಈವರೆಗೆ ರಾಜ್ಯ ಸರ್ಕಾರ ಜಾತಿ ಜನಗಣತಿ ದತ್ತಾಂಶವನ್ನು ಬಿಡುಗಡೆ ಮಾಡದೇ ವಿಳಂಬ ಮಾಡುತ್ತಿದೆ. ಮುಖ್ಯಮಂತ್ರಿ ಈ ಧೋರಣೆಯಿಂದ ದಮನಿತ ಮತ್ತು ಶೋಷಿತ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿರುವ ಎರಡು ಸಮುದಾಯಗಳ ಮುಖಂಡರು ಜಾತಿ ಜನಗಣತಿಯ ದತ್ತಾಂಶವನ್ನು ಬಿಡುಗಡೆಗೆ ವಿರೋಧಿಸುತ್ತಿದ್ದು, ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಈವರೆಗೆ ಜನಗಣತಿ ದತ್ತಾಂಶ ಬಿಡುಗಡೆಗೊಳಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೇ ವೇಳೆ ಮಾತನಾಡಿದ ವಾಲ್ಮೀಕಿ ಸಮುದಾಯದ ಮುಖಂಡರು, ರಾಜ್ಯದ ಬಹುಸಂಖ್ಯಾತ ದಮನಿತ ಹಾಗೂ ಶೋಷಿತ ಸಮುದಾಯಗಳಿಗೆ ಜಾತಿ ಜನಗಣತಿಯ ದತ್ತಾಂಶ ಅವಶ್ಯಕ ಮತ್ತು ಅನಿವಾರ್ಯವಾಗಿದೆ. ಜಾತಿ ಆಧಾರಿತ ತಾರತಮ್ಯ ನಿಲುವುಗಳು ದೇಶದಲ್ಲಿ ಇನ್ನು ಜಾರಿಯಲ್ಲಿರುವುದರಿಂದ ಜಾತಿ ಗಣತಿಯ ದತ್ತಾಂಶ ಬಳಸಿಕೊಂಡು ಶೋಷಿತ ಸಮುದಾಯವನ್ನು ಗುರುತಿಸಲು ಹಾಗೂ ನೀತಿ ರೂಪಣೆಯಲ್ಲಿ ಅವರನ್ನು ಮುನ್ನಲೆಗೆ ತರಲು ಸಹಾಯಕವಾಗಲಿದೆ. ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಸಹ ಜಾತಿಗಣತಿ ದತ್ತಾಂಶ ಸಹಕಾರಿಯಾಗಲಿದೆ. ಸಾಮಾಜಿಕ ಸಂಬಂಧಗಳು, ಆರ್ಥಿಕ ಅವಕಾಶಗಳು ಮತ್ತು ರಾಜಕೀಯ ಚಲನಶೀಲತೆಗೆ ಪೂರಕವಾಗಲಿದೆ. ಈ ಎಲ್ಲ ಕಾರಣಗಳಿಂದ ಜಾತಿ ಜನಗಣತಿಯನ್ನು ಸರ್ಕಾರ ಬಿಡುಗಡೆ ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯದ ಎರಡು ಪ್ರಭಾವಿ ಸಮುದಾಯಗಳಕ್ಕೆ ವಿರೋಧವನ್ನು ಸಿಎಂ ಸಿದ್ದರಾಮಯ್ಯ ಹೆಚ್ಚು ಗಂಭೀರವಾಗಿ ಪರಿಗಣಿಸಬಾರದು. ಒಂದು ವೇಳೆ ಜಾತಿಜನಗಣತಿ ದತ್ತಾಂಶವನ್ನು ಬಿಡುಗಡೆಗೊಳಿಸದಿದ್ದರೆ ದಲಿತ, ದಮನಿತ, ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಸತ್ಯ ಇತಿಹಾಸದಲ್ಲಿ ದಾಖಲಾಗುತ್ತದೆ. ದಲಿತ ಹಾಗೂ ಹಿಂದುಳಿದ ಸಮುದಾಯಗಳ ಪರ ಎಂದು ಬಿಂಬಿತಗೊಂಡಿರುವ ಮುಖ್ಯಮಂತ್ರಿ ಕೂಡಲೇ ಜಾತಿ ಜನಗಣತಿ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಏಕಲವ್ಯ ಪಡೆಯ ಜಿಲ್ಲಾಧ್ಯಕ್ಷ ಬಾದಾಮಿ ಶಿವಲಿಂಗ ನಾಯಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮುಖಂಡರಾದ ವಿ.ಎಸ್.ಶಿವಶಂಕರ್, ಎನ್.ಸತ್ಯನಾರಾಯಣ, ತಿಮ್ಮಪ್ಪ ಜೋಳದರಾಶಿ, ಎಲ್.ಮಾರೆಣ್ಣ, ಜನಾರ್ದನ ನಾಯಕ, ಶಿಕಾಮಣಿ ನಾಯಕ, ಬಿ.ಜಯರಾಮ್, ವಿರುಪಣ್ಣ, ಭೋಗರಾಜ್, ಗಾದಿಲಿಂಗ ನಾಯಕ, ಹಮಾಲಿ ತಿಮ್ಮಪ್ಪ, ಬೆಣಕಲ್ ಸುರೇಶ್, ಹಡ್ಲಿಗಿ ಮಾರೆಪ್ಪ, ಸಂಗನಕಲ್ಲು ವಿಜಯಕುಮಾರ್, ಬಿ.ಗಿರಿಯಪ್ಪ, ಬಿ.ಈಶ್ವರಪ್ಪ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.