ವಾಲ್ಮೀಕಿ ಸಮಾಜದ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹೆಚ್ಚಿಸಿರುವ ಮೀಸಲಾತಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದು ಬಾಕಿ ಇದೆ. ಆದಷ್ಟು ಬೇಗ ಪ್ರಧಾನಿ ನರೇಂದ್ರ ಮೋದಿಜಿ ಅವರೊಂದಿಗೆ ಮಾತನಾಡಿ, 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ.

- ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ, ಶ್ರೀಮಠದ 28ನೇ ವಾರ್ಷಿಕೋತ್ಸವ

- - -

ಕನ್ನಡಪ್ರಭ ವಾರ್ತೆ ಹರಿಹರ

ವಾಲ್ಮೀಕಿ ಸಮಾಜದ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹೆಚ್ಚಿಸಿರುವ ಮೀಸಲಾತಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದು ಬಾಕಿ ಇದೆ. ಆದಷ್ಟು ಬೇಗ ಪ್ರಧಾನಿ ನರೇಂದ್ರ ಮೋದಿಜಿ ಅವರೊಂದಿಗೆ ಮಾತನಾಡಿ, 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.

ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ, ಶ್ರೀಮಠದ 28ನೇ ವಾರ್ಷಿಕೋತ್ಸವ, ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀ ಅವರ 19ನೇ ವರ್ಷದ ಪುಣ್ಯಾರಾಧನೆ ಹಾಗೂ ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ವಾಲ್ಮೀಕಿ, ಬೇಡ, ಬೇಡಜಂಗಮ, ತಳವಾರ, ಪರಿವಾರ ಜನಾಂಗದವರ ಬೇಡಿಕೆಯಾಗಿದ್ದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ, ಶ್ರೀ ಮಠದ ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀ ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸಿದ್ದರು. ಇದರ ಫಲವಾಗಿ ಮೀಸಲಾತಿಯಲ್ಲಿ ಶೇ.7ರಷ್ಟು ಹೆಚ್ಚಳವಾಗಿದೆ. ಮೀಸಲಾತಿಯ ಫಲ ಸಮಾಜದ ಸರ್ವರಿಗೂ ಸಿಗಬೇಕೆಂದರೆ ಕೇಂದ್ರ ಸರ್ಕಾರದ 9ನೇ ಶೆಡ್ಯೂಲ್‌ನಲ್ಲಿ ಸೇರ್ಪಡೆ ಆಗಬೇಕು ಎಂದರು.

ಮಠದ ಶ್ರೀ ರಾಜ್ಯ ವಾಲ್ಮೀಕಿ ಜನಾಂಗದವರ ಕಲ್ಯಾಣಕ್ಕಾಗಿ 18 ವರ್ಷದಲ್ಲಿ 100 ವರ್ಷದಷ್ಟು ಕೆಲಸ ಮಾಡಿದ್ದಾರೆ. ಸಮಸ್ತ ಮನುಕುಲ ಕಲ್ಯಾಣಕ್ಕಾಗಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ರಚಿಸಿದ್ದಾರೆ. ಸೂರ್ಯ- ಚಂದ್ರ ಎಲ್ಲಿವರೆಗೂ ಇರುತ್ತಾರೋ ಅಲ್ಲಿವರೆಗೂ ವಾಲ್ಮೀಕಿ ಅವರ ಹೆಸರು ಇರುತ್ತದೆ ಎಂದರು.

ದೇಶದ ಚತ್ತಿಸ್‌ಗಡ್ ಸೇರಿದಂತೆ ಹಲವಾರು ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನಾಂಗವು ಬಹುತೇಕ ಹಿಂದುಳಿದಿರುವುದು ಕಂಡುಬಂದಿದೆ. ಬುಡಕಟ್ಟು ಜನಾಂಗವು ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯವಶ್ಯ. ಕೇಂದ್ರ ಸರ್ಕಾರ ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಜಾರಿಗೆ ತಂದಿರುವ ಯೋಜನೆ ಲಾಭ ಪಡೆಯಲು ಸರ್ವರೂ ಮುಂದಾಗಬೇಕೆಂದು ತಿಳಿಸಿದರು.

ಗುರುಪೀಠದ ಡಾ. ಪ್ರಸನ್ನಾನಂದ ಶ್ರೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಿ.ಪಿ. ಹರೀಶ್, ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಬಸವನಗೌಡ ದದ್ದಲ್, ಸಂಚಾಲಕ ಎಂ.ಜಿ ಪಂಪಾಪತಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ, ಶ್ರೀಮಠದ ಧರ್ಮದರ್ಶಿ ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಸಂಡೂರು ಶಾಸಕಿ ಅನ್ನಪೂರ್ಣ ಈ ತುಕಾರಾಂ, ರಾಜ್ಯ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ರಾಜೇಶ್ವರಿ ಬಾಸೂರು, ಕೋಲಾರ ಸಹಾಯಕ ಕಮಿಷನರ್ ಡಾ. ಮೈತ್ರಿ, ಗದಗ ಅಬಕಾರಿ ಉಪ ಆಯುಕ್ತರಾದ ಲಕ್ಷ್ಮೀ ಮಾರುತಿ ತೋಟಗಂಟಿ ಉಪಸ್ಥಿತರಿದ್ದರು.

- - -

-08ಎಚ್.ಆರ್.ಆರ್01:

ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ, ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ನೂತನ ವಧು- ವರರಿಗೆ ಶುಭ ಹಾರೈಸಿದರು.