ಸಾರಾಂಶ
ಹೋಬಳಿ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪಗ್ರಾಮೀಣ ಪ್ರದೇಶಗಳೆ ಜಾನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಸಂರಕ್ಷಣಾ ಕೇಂದ್ರಗಳಾಗಿವೆ ಎಂದು ಗೌರಿಗದ್ದೆ ಅವಧೂತ ವಿನಯ ಗುರೂಜಿ ಹೇಳಿದರು. ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ, ಕೊಪ್ಪ ತಾಲೂಕು ಹರಿಹರಪುರ ಹೋಬಳಿ ನಿಲುವಾಗಿಲಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಹರಿಹರಪುರ ಹೋಬಳಿ ಘಟಕದಿಂದ ಹೋಬಳಿ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಜಾನಪದ ಕಲಾವಿದರು, ಹಾಡುಗಾರರನ್ನು ಪ್ರೋತ್ಸಾಹಿಸಲು ಕಜಾಪ ಅತ್ಯುತ್ತಮ ಬಹುಮಾನಗಳನ್ನು ನೀಡುವುದರೊಂದಿಗೆ ಉತ್ತಮ ವೇದಿಕೆ ದೊರಕಿಸಿಕೊಟ್ಟಿದೆ. ಎಲ್ಲಾ ಸಂಘ ಸಂಸ್ಥೆಯವರು, ಜಾನಪದ ಕಲೆ ಸಾಹಿತ್ಯ ಸಂಗೀತ ಪ್ರೋತ್ಸಾಹಿಸಲು ಇಂಥ ಸ್ಪರ್ಧೆಗಳನ್ನು ಆಗಾಗ ಏರ್ಪಡಿಸಬೇಕು. ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಶಾಲಾ ಕಾಲೇಜುಗಳು, ಜಾನಪದ ಹಾಡು ನೃತ್ಯಕ್ಕೆ ಹೆಚ್ಚು ಪ್ರೋತ್ಸಾಹ ಕೊಡಬೇಕು ಏಕೆಂದರೆ ಮೌಲ್ಯಧಾರಿತ ಹಾಗೂ ಸುಸಂಸ್ಕೃತ ಸಾಹಿತ್ಯಗಳು ಇವುಗಳಲ್ಲಿ ಅಡಗಿವೆ ಎಂದರು. ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ದೇಶದ ಎಲ್ಲಾ ಬುಡಕಟ್ಟು ಜನಾಂಗದವರ ಸಾಹಿತ್ಯ, ಸಂಗೀತ, ಸಂಸ್ಕೃತಿ ಉಡುಗೆ ತೊಡುಗೆ, ಆಚಾರ, ವಿಚಾರಗಳನ್ನು ಸಂರಕ್ಷಿಸಲು ಜಾನಪದಲೋಕ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಜಾನಪದ ಕಲಾವಿದರಿಗೆ, ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ, ವೇದಿಕೆಗಳಿಲ್ಲದೆ, ಮಾಶಾಸನ, ವೇತನ ಭತ್ಯಗಳಿಲ್ಲದೆ ಇಂದು ಸಂಕಷ್ಟದಲ್ಲಿದ್ದಾರೆ. ಜನಪ್ರತಿ ನಿಧಿಗಳು ಸರ್ಕಾರದ ಗಮನ ಸೆಳೆದು, ಅವರಿಗೆ ಅಗತ್ಯ ಪ್ರೋತ್ಸಾಹ ನೀಡಿದರೆ ಮುಂದಿನ ಪೀಳಿಗೆಯವರೆಗೂ ಜನಪದ ಕಲೆ ಸಾಹಿತ್ಯ ಸಂಸ್ಕೃತಿ ಗಳು ಅಡೆತಡೆ ಇಲ್ಲದೆ ಮುಂದುವರೆಯುತ್ತವೆ ಎಂದರು. ಕಜಾಪ ಕೊಪ್ಪ ತಾಲೂಕು ಅಧ್ಯಕ್ಷ ದಿವಾಕರ್ ಭಟ್ ಮಾತನಾಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಜನಪದ ಕಲೆ ಸಂಸ್ಕೃತಿ, ಸಾಹಿತ್ಯ ಅತ್ಯಗತ್ಯ ಎಂದರು. ಹರಿಹರಪುರ ಹೋಬಳಿ ಅಧ್ಯಕ್ಷೆ ತಮನ್ನ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಪಠ್ಯ ಪುಸ್ತಕಗಳಲ್ಲಿ ಹೆಚ್ಚು ಹೆಚ್ಚು ಜಾನಪದ ಕಲೆಗೆ ಸಂಗೀತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ವಿಚಾರಗಳನ್ನು ಪಾಠಗಳಲ್ಲಿ ಇಡಬೇಕಾಗಿದೆ ಎಂದರು. ಸುಮಾರು ೧೨ ನೃತ್ಯ ತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ೫,೦೦೦ ರು.ವನ್ನು ಅಬಾ ತಂಡ, ದ್ವಿತೀಯ ಬಹುಮಾನ ೩೦೦೦ ರು. ಅಶ್ವತ್ ಹಾಲ್ಮುತ್ತೂರು ತಂಡ, ತೃತೀಯ ಬಹುಮಾನ ೨೦೦೦ಗಳನ್ನು ವನದುರ್ಗಿ ಪರಮೇಶ್ವರಿ ಯಕ್ಷಗಾನ ತಂಡ ಪಡೆದರು. ಗ್ರಾಮೀಣ ಸೊಗಡಿನ ಉಡುಗೆ, ತೋಡಿಗೆಗಳನ್ನು, ವೇಷಭೂಷಣಗಳನ್ನು ಧರಿಸಿ ಮಹಿಳೆಯರು ಯುವತಿಯರು, ಬಹಳ ಉತ್ಸಾಹದಿಂದ ನೃತ್ಯ ಪ್ರದರ್ಶನ ನೀಡಿ ತಮ್ಮ ಪ್ರತಿಭೆ ತೋರಿಸಿ ಜನಪದ ಕಲೆ ಎತ್ತಿ ಹಿಡಿದರು. ಕಾರ್ಯಕ್ರಮದಲ್ಲಿ, ಕಜಾಪ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ನಿಲುವಾಗಿಲು ಗ್ರಾಪಂ ಅಧ್ಯಕ್ಷ ಪದ್ಮನಾಭ, ಸದಸ್ಯ ಮಿತ್ರ, ಕಜಾಪ ಪದಾಧಿಕಾರಿಗಳಾದ ನಂದಿನಿ ಶ್ರೀಕಂಠ, ಮಂಜುಳಾ, ಸುಮಾ, ನಾಗಪ್ಪ, ಮದನ, ನರೇಶ್, ಮುನಾವರ್ ಹಾಗೂ ಗ್ರಾಮಸ್ಥರು ಕಲಾವಿದರು ಉಪಸ್ಥಿತರಿದ್ದರು.