ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇವಲ ಪಠ್ಯ ಪುಸ್ತಕಗಳಷ್ಟೇ ಅಲ್ಲದೆ, ನಮ್ಮ ಬದುಕನ್ನು ಬದಲಿಸಲು ಅಗತ್ಯವಾಗಿರುವುದು ಮೌಲ್ಯಾಧಾರಿತವಾದ ಶಿಕ್ಷಣವಾಗಿದೆ. ಮಹಾತ್ಮ ಗಾಂಧೀಜಿಯವರು ತಮ್ಮ ಬದುಕಿನಲ್ಲಿ ಇದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಪ್ರೊ.ಜಿ.ಶೋಭಾ ಅಭಿಪ್ರಾಯಪಟ್ಟರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಗಾಂಧೀ ವಿಚಾರ ಸಂಸ್ಕಾರ ಪರೀಕ್ಷೆಯ 10 ನೇ ವರ್ಷದ ಘಟಿಕೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಬದುಕನ್ನು ಬದಲಿಸಲು ಮುಖ್ಯವಾಗಿ ಬೇಕಾಗಿರುವುದು ಕೇವಲ ಪಠ್ಯಪುಸ್ತಕಗಳಷ್ಟೇ ಅಲ್ಲ, ಮೌಲ್ಯಾಧಾರಿತ ಶಿಕ್ಷಣವೂ ಅಗತ್ಯವಾಗಿದೆ. ಮೌಲ್ಯಾಧಾರಿತ ಶಿಕ್ಷಣವೇ ನಿಜವಾದ ಶಿಕ್ಷಣ ಎಂಬುದನ್ನು ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಸಾಬೀತುಪಡಿಸಿದ್ದಾರೆ. ಅವರ ತತ್ವ, ಆದರ್ಶಗಳು ನಮಗೆ ದಾರಿದೀಪವಾಗಿವೆ ಎಂದು ತಿಳಿಸಿದರು.ಮಾರ್ಗದರ್ಶನದ ಕೊರತೆ:
ಇಂದಿನ ಮಾಹಿತಿ ಯುಗದಲ್ಲಿ ಅಂಗೈನಲ್ಲಿರುವ ಮೊಬೈಲ್ನಲ್ಲೇ ನಮಗೆ ಅಗಾಧವಾದ ಮಾಹಿತಿ ದೊರೆಯುತ್ತದೆ ಎಂಬುದು ವಿದ್ಯಾರ್ಥಿಗಳಿಗೆ ತಿಳಿದಿರುವ ಸಂಗತಿಯಾಗಿದೆ. ಆದರೆ ಮೌಲ್ಯದ ಕೊರತೆ ಇಂದು ಬಹಳಷ್ಟು ಕಾಡುತ್ತಿದೆ. ಯುವ ಪೀಳಿಗೆಯಲ್ಲಿ ಅಪಾರವಾದ ಶಕ್ತಿ ಇದೆ. ಏನನ್ನಾದರೂ ಸಾಧಿಸಬಹುದು ಎಂಬ ಛಲ ಇದೆ. ಯುವ ಮನಸ್ಸುಗಳಿಗೆ ಇಂದು ಸೂಕ್ತ ಮಾರ್ಗದರ್ಶನ ಬೇಕಿದೆ ಎಂದು ಪ್ರತಿಪಾದಿಸಿದರು.
ಗಾಂಧೀಜಿ ಬಗ್ಗೆ ಓದುವುದು ಜ್ಞಾನ, ಅರ್ಥೈಸಿಕೊಳ್ಳುವುದು ಪ್ರಜ್ಞೆ ಹಾಗೂ ಅವರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಾವು ಅವರಿಗೆ ನೀಡುವ ಗೌರವವಾಗಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ಸಮಾಜ. ದೇಶಕ್ಕೆ ಕೊಡುಗೆ ನೀಡಬೇಕು. ಪೋಷಕರಿಗೆ ಒಳ್ಳೆಯ ಹೆಸರು ತರಬೇಕು ಎಂದು ಕರೆ ನೀಡಿದರು.
ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಕೋಶಾಧ್ಯಕ್ಷ ಎಚ್.ಬಿ.ದಿನೇಶ್, ರಂಗಕರ್ಮಿ ಡಾ.ರಮೇಶಚಂದ್ರದತ್ತ ಉಪಸ್ಥಿತರಿದ್ದರು.