ಮನೆಮನೆಯಲ್ಲಿ ಭಕ್ತಿಪೂರ್ಣ ವರಮಹಾಲಕ್ಷ್ಮಿ ವ್ರತ

| Published : Aug 17 2024, 12:49 AM IST

ಮನೆಮನೆಯಲ್ಲಿ ಭಕ್ತಿಪೂರ್ಣ ವರಮಹಾಲಕ್ಷ್ಮಿ ವ್ರತ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಕ್ಷ್ಮಿಗೆ ಮುಖವಾಡ ಹಾಕಿ ಶೃಂಗಾರ ಮಾಡಿ ದೇವಿಗೆ ಸೀರೆ ಹಾಕಿ, ಹೂವಿನಿಂದ ದೇವಿಯನ್ನು ಅಲಂಕಾರ ಮಾಡುತ್ತಾರೆ ಮತ್ತು ವಿವಿಧ ಸಿಹಿ ತಿನಿಸುಗಳನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸುವ ವೇಳೆ ಐಶ್ವರ್ಯ ಕೊಡುವಂತೆ ಮಹಿಳೆಯರು ಬೇಡುವ ಪದ್ಧತಿಯನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಹಾಸನದ ನಗರದ ಲಕ್ಷ್ಮೀಪುರಂ ಬಡಾವಣೆ, ಜವೇನಹಳ್ಳಿ ಮಠದ ಬಳಿ ವಾಸವಾಗಿರುವ ಶಿಕ್ಷಕರು ಮತ್ತು ಪತಂಜಲಿ ಸಮಿತಿಯ ಪ್ರಭಾರಿ ಗಿರೀಶ್ ಮತ್ತು ಪಲ್ಲವಿ ಮನೆಯೊಲ್ಲಿ ಭಕ್ತಿಪೂರ್ಣವಾಗಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಹಿಂದೂಗಳ ಶ್ರೇಷ್ಠ ಹಬ್ಬದಲ್ಲಿ ಒಂದಾದ ವರಮಹಾಲಕ್ಷ್ಮಿ ವ್ರತವನ್ನು ಪ್ರತಿ ಮನೆ ಮನೆಗಳಲ್ಲೂ ವಿಜೃಂಭಣೆಯಿಂದ ಮಹಿಳೆಯರು ಆಚರಿಸುವುದು ಬೆಳೆದು ಬಂದ ಸಂಪ್ರದಾಯವಾಗಿದೆ.

ಮಹಾಲಕ್ಷ್ಮಿಗೆ ಮುಖವಾಡ ಹಾಕಿ ಶೃಂಗಾರ ಮಾಡಿ ದೇವಿಗೆ ಸೀರೆ ಹಾಕಿ, ಹೂವಿನಿಂದ ದೇವಿಯನ್ನು ಅಲಂಕಾರ ಮಾಡುತ್ತಾರೆ ಮತ್ತು ವಿವಿಧ ಸಿಹಿ ತಿನಿಸುಗಳನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸುವ ವೇಳೆ ಐಶ್ವರ್ಯ ಕೊಡುವಂತೆ ಮಹಿಳೆಯರು ಬೇಡುವ ಪದ್ಧತಿಯನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ನಗರದ ಲಕ್ಷ್ಮೀಪುರಂ ಬಡಾವಣೆ, ಜವೇನಹಳ್ಳಿ ಮಠದ ಬಳಿ ವಾಸವಾಗಿರುವ ಶಿಕ್ಷಕರು ಮತ್ತು ಪತಂಜಲಿ ಸಮಿತಿಯ ಪ್ರಭಾರಿ ಗಿರೀಶ್ ಮತ್ತು ಪಲ್ಲವಿ ಮನೆಯೊಲ್ಲಿ ಭಕ್ತಿಪೂರ್ಣವಾಗಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಯಿತು. ಶುಕ್ರವಾರ ಬೆಳಗಿನಿಂದಲೇ ವಿವಿಧ ರೀತಿಯ ಪೂಜೆ ಮತ್ತು ಭಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಲಕ್ಷ್ಮೀ ವ್ರತ, ಕಥೆಯನ್ನು ಓದಲಾಯಿತು. ಅಕ್ಕಪಕ್ಕದ ಹಾಗೂ ಸಂಬಂಧಿಕರನ್ನು ಕರೆದು ಕುಂಕುಮ ನೀಡಿ ಜೊತೆಗೆ ತಾಂಬೂಲ ಕೊಡಲಾಗುತ್ತದೆ. ಈ ವೇಳೆ ಮುತ್ತೈದೆಯರು ದೇವರ ಹಾಡನ್ನು ಭಕ್ತಿಯಿಂದ ಹಾಡುತ್ತಾರೆ. ಇದೇ ವೇಳೆ ಪ್ರಸಾದವನ್ನು ಬಂದವರಿಗೆಲ್ಲಾ ಕೊಡಲಾಗುತ್ತದೆ. ಹೆಚ್ಚಿನ ವ್ರತಗಳು ಚಾತುರ್ಮಾಸದ ನಾಲ್ಕು ತಿಂಗಳಿನಲ್ಲಿ ಹೆಚ್ಚಾಗಿ ಬರುತ್ತವೆ. ಅದರಲ್ಲಿ ಚಾತುರ್ಮಾಸದ ಶ್ರಾವಣ ಮಾಸ ಮಹತ್ವದ್ದಾಗಿದೆ. ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗಿನ ನಾಲ್ಕು ತಿಂಗಳ ಕಾಲಾವಧಿಯನ್ನು ಚಾತುರ್ಮಾಸ ಎನ್ನುತ್ತೇವೆ. ವ್ರತಗಳಲ್ಲಿ ವರಮಹಾಲಕ್ಷ್ಮಿ ವ್ರತವೂ ಮಹತ್ವಪೂರ್ಣವಾದ ವ್ರತವಾಗಿದೆ. ಇತ್ತೀಚೆಗೆ ಸಾಮೂಹಿಕ ’ವರಮಹಾಲಕ್ಷ್ಮಿ ವ್ರತ’ ಕಾರ್ಯಕ್ರಮಗಳನ್ನೂ ಆಯೋಜನೆ ಹೆಚ್ಚು ಮಾಡಲಾಗುತ್ತಿದೆ. ಯಾರು ಶ್ರದ್ಧಾ-ಭಕ್ತಿಯಿಂದ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಮಾಡುತ್ತಾರೆಯೋ ಅವರಿಗೆ ಶ್ರೀ ದೇವಿಯು ಖಂಡಿತವಾಗಿಯೂ ಕೃಪೆ ತೋರಲಿದೆ ಎಂಬ ನಂಬಿಕೆಯನ್ನು ಹಿಂದಿನಿಂದ ಇಂದಿನವರೆಗೂ ಇಟ್ಟುಕೊಂಡಿದ್ದಾರೆ ಎಂದು ಬೇಲೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಗುರುಪ್ರಸಾದ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ, ಮಂಜುನಾಥ್, ಪಲ್ಲವಿ, ಪತಂಜಲಿ ಯೋಗಾ ಸಮಿತಿ ಪ್ರಭಾರಿ ಗಿರೀಶ್ ಇತರರು ಉಪಸ್ಥಿತರಿದ್ದರು.