ಮಯೂರ ಯುವಸೇನೆ ಜಿಲ್ಲಾಧ್ಯಕ್ಷ ರಾಘವೇಂದ್ರ ಮತ್ತಾವರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಡವರು, ಶ್ರೀ ಸಾಮಾನ್ಯರ ಧ್ವನಿಯಾಗಿ ನಿರಂತರ ಹೋರಾಟ ಮಾಡುತ್ತಿರುವ ಸಾಮಾಜಿಕ ಕಳಕಳಿಯ ಯುವನಾಯಕ ಸಂತೋಷ್ ಕೋಟ್ಯಾನ್ ಅವರನ್ನು ಗಡಿಪಾರು ಮಾಡುವ ನಿರ್ಧಾರ ಕೈಬಿಡುವಂತೆ ಮಯೂರ ಯುವಸೇನೆ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರವೇ ಕನ್ನಡ ಸೇನೆ ಆಗ್ರಹಿಸಿವೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಯೂರ ಯುವಸೇನೆ ಜಿಲ್ಲಾಧ್ಯಕ್ಷ ರಾಘವೇಂದ್ರ ಮತ್ತಾವರ, ಚಿಕ್ಕಮಗಳೂರು ಜಿಲ್ಲೆ ಆರಂಭದಿಂದಲೂ ಸಾಮಾಜಿಕ, ರಾಜಕೀಯ ಹೋರಾಟಗಳ ನೆಲವಾಗಿದ್ದು, ಅನೇಕ ದಶಕಗಳಿಂದ ಹತ್ತಾರು ಹೋರಾಟಗಳನ್ನು ಕಂಡಿರುವ ಜಿಲ್ಲೆಯಾಗಿದೆ ಎಂದರು.ಇಂತಹ ನೆಲದಲ್ಲಿ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಂತೋಷ್ ಕೋಟ್ಯಾನ್ , ಜಿಲ್ಲೆಯಾದ್ಯಂತ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು, ಇಂತಹ ನಾಯಕನ ಗಡಿಪಾರು ಮಾಡಲು ಚಿಂತನೆ ನಡೆಸಿರುವುದು ಯುವಕರು ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಕ್ಕೆ ಮುಂದಾಗಲು ಭಯಪಡುತ್ತಿದ್ದಾರೆಂದು ಹೇಳಿದರು.ಎಬಿವಿಪಿ ಜಿಲ್ಲಾ ಸಂಚಾಲಕ, ಬಜರಂಗದಳ ಜಿಲ್ಲಾ ಸಹ ಸಂಯೋಜಕ, ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಇದೀಗ ಅಧ್ಯಕ್ಷರಾಗಿ ಕಳೆದ 15 ವರ್ಷಗಳಿಂದ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಕ್ರಿಯಾಶೀಲ ಚಟುವಟಿಕೆಯಿಂದ ಕೂಡಿರುವ ಇವರು, ಪ್ರತಿಫಲಾಪೇಕ್ಷೆ ಬಯಸದೆ ಸಮಾಜದಲ್ಲಿ ನೊಂದವರಿಗಾಗಿ ಹೋರಾಟ ಮಾಡುತ್ತಿದ್ದಾರೆಂದು ತಿಳಿಸಿದರು.ಕಳೆದ 2-3 ವರ್ಷಗಳ ಅವಧಿಯಲ್ಲಿ ಹತ್ತಾರು ಕೇಸುಗಳನ್ನು ದಾಖಲು ಮಾಡಲಾಗಿದೆ. ಇದನ್ನೇ ಆಧಾರವಾಗಿರಿಸಿ ಗಡಿಪಾರಿಗೆ ಸಂಬಂಧಿಸಿದ ನೋಟೀಸ್ ಜಾರಿಮಾಡಿರುವುದನ್ನು ಖಂಡಿಸುವ ಜೊತೆಗೆ, ಗಡಿಪಾರು ಮಾಡಬಾರದೆಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಯೂರ ಯುವಸೇನೆ ಜಿಲ್ಲಾ ಉಪಾಧ್ಯಕ್ಷ ಪುನೀತ್ ಬಿ.ಸಿ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಮಂತ್, ಕರವೇ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಸಚ್ಚಿದಾನಂದ ನಾಡಿಗ್, ಪ್ರಧಾನ ಕಾರ್ಯದರ್ಶಿ ನವೀನ್ ಬಟ್ರು, ಧನುಷ್ ರಾಂಪುರ ಉಪಸ್ಥಿತರಿದ್ದರು.23 ಸಿಕೆಎಂ 4ಸಂತೋಷ್ ಕೋಟ್ಯಾನ್ ಅವರನ್ನು ಗಡಿಪಾರು ಮಾಡುವ ನಿರ್ಧಾರ ಕೈಬಿಡುವಂತೆ ಮಯೂರ ಯುವಸೇನೆ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರವೇ ಕನ್ನಡ ಸೇನೆ ಆಗ್ರಹಿಸಿದರು.