ರೈತರ ಮೊಗದಲ್ಲಿ ಹರ್ಷ ತಂದ ವರುಣ

| Published : May 14 2024, 01:02 AM IST

ಸಾರಾಂಶ

ಕಡೂರು, ತಾಲೂಕಿನಾದ್ಯಂತ ಬಿದ್ದ ಮಳೆಯಿಂದ ರೈತರ ಮೊಗದಲ್ಲಿ ಸಂತಸ ಇಮ್ಮಡಿಸಿದೆ.

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನಾದ್ಯಂತ ಬಿದ್ದ ಮಳೆಯಿಂದ ರೈತರ ಮೊಗದಲ್ಲಿ ಸಂತಸ ಇಮ್ಮಡಿಸಿದೆ.

ಬಿಸಿಲಿಗೆ ಕಾಲಿಡಲು ಆಗದಂತಾಗಿದ್ದ ಭೂಮಿ ವರುಣನ ಕೃಪೆಗೆ ತಂಪಾಗಿದೆ. ಭಾನುವಾರ ಸಂಜೆ ಕಾರ್ಮೋಡ ಕವಿದಿದ್ದರೂ ಮಳೆ ಬಾರದೆ ರೈತರು ನಿರಾಸೆಗೊಂಡಿದ್ದರು. ಕಡೂರು ಪಟ್ಟಣದಲ್ಲಿ ಭಾನುವಾರ ರಾತ್ರಿ 12ರಿಂದ ಸೋಮವಾರ ಬೆಳಗಿನ ಜಾವ 5ಗಂಟೆ ತನಕ ಗುಡುಗು, ಮಿಂಚು ಇಲ್ಲದೆ ಒಂದೇ ಸಮನೆ ಸುರಿದ ಮಳೆ ಭೂಮಿಗೆ ತಂಪೆರೆಯಿತು.

ಕಡೂರು ಪ್ರದೇಶದಲ್ಲಿ ಈ ತನಕ 88.4 ಮಿ.ಮೀ.ಮಳೆಯಾಗಬೇಕಿತ್ತು. ಸೋಮವಾರ ಒಂದೇ ದಿನ 85 .2 ಮಿ.ಮೀ. ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಸೋಮವಾರ 2.5 ಮಿ‌ಮೀ ಮಳೆಯಾಗಬೇಕಿತ್ತು. ಆದರೂ ಸೋಮವಾರ ಒಂದೇ ದಿನ ಒಟ್ಟಾರೆ 35.6 ಮಿ.ಮೀ.ಮಳೆಯಾಗಿದೆ.

ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ವಿಫಲವಾಗಿ ಬಹುತೇಕ ಬೆಳೆಗಳು ಹಾಳಾಗಿ ರೈತರು ನಷ್ಟ ಅನುಭವಿಸಿದ್ದ ರೈತರಿಗೆ ತೋಟಗಾರಿಕಾ ಬೆಳೆಗಳಾದ ತೆಂಗು ಮತ್ತು ಅಡಿಕೆ ಉಳಿಸಿಕೊಳ್ಳುವುದೇ ಸವಾಲಾಗಿತ್ತು. ಸುಮಾರು 3500 ಎಕರೆ ಪ್ರದೇಶದಲ್ಲಿ ಹಾಕಿದ್ದ ಅಡಕೆ ಸಸಿ ಬೆಳವಣಿಗೆ ಹಂತದಲ್ಲಿದ್ದು ಗಿಡಗಳಿಗೆ ನೀರು ಸಾಲದೆ ಒಣಗಿ. ರೈತರೂ ಹತಾಶರಾಗಿದ್ದರು.

ಇತ್ತೀಚಿನ ದಿನಗಳಿಂದ ದಿನನಿತ್ಯ 38 ಡಿಗ್ರಿ ಮುಟ್ಟಿದ ತಾಪಮಾನದಿಂದ ಇಡೀ ತಾಲೂಕು ಬಳಲಿ ಬೆಂಡಾಗಿ ರೈತರು ದೇವರಿಗೆ ಮೊರೆಹೋಗಿದ್ದರು. ಬಹಳಷ್ಟು ಜನರಿಗೆ ಮಳೆ ಬರುವ ನಂಬಿಕೆ ಹುಸಿಯಾಗಿತ್ತು. ಐದು ವರ್ಷಗಳ ಹಿಂದಿನ‌ ಕರಾಳ ನೆನಪು ಮರುಕಳಿಸುವ ಭೀತಿ ಕಾಡುತ್ತಿತ್ತು. ಈ ಹೊತ್ತಿಗೆ ಹತ್ತಿ ಮತ್ತು ಈರುಳ್ಳಿ ನಾಟಿ ಆಗಬೇಕಿತ್ತು. ಮಳೆಯಿಲ್ಲದೆ ಯಾವ ಬೆಳೆಯನ್ನೂ ಹಾಕಲಾಗದೆ ಆತಂಕದಲ್ಲಿದ್ದ ರೈತರಿಗೆ ಈ ಮಳೆ ಸುರಿದಿರುವುದು ಉತ್ಸಾಹ ಮೂಡಿಸಿದೆ. ಅಡಕೆ,ತೆಂಗು ತೋಟಗಳು ಉಳಿಯಬಹುದೆನ್ನುವ ಆಶಾಭಾವನೆ ಗರಿಗೆದರಿದೆ.--- ಬಾಕ್ಸ್ ---

ಸೋಮವಾರ ಬೆಳಗಿನ ಜಾವ ಬಿದ್ದ ಮಳೆಯಿಂದ ತಾಲೂಕಿನ ಅನೇಕ ಕಡೆ ರೈತರ ಕೃಷಿ ಹೊಂಡಗಳು ತುಂಬಿವೆ. ಇದು ಮೊದಲ ಮಳೆಯಾದ್ದರಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯದಿದ್ದರೂ ಭೂಮಿ ತಂಪಾಗಿದೆ. ಸೆಖೆಯ ವಾತಾವರಣವು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.

ಮಳೆ ಪ್ರಮಾಣ- ಮಿ.ಮೀ.ಗಳಲ್ಲಿಕಡೂರು(ಕಸಬಾ-61.5), ಬೀರೂರು(26), ಹಿರೇನಲ್ಲೂರು(16.5), ಸಖರಾಯಪಟ್ಟಣ(39.2), ಸಿಂಗಟಗೆರೆ(36.8), ಯಗಟಿ(24.7), ಪಂಚನಹಳ್ಳಿ(39.1), ಚೌಳಹಿರಿಯೂರು(17) ಮಿಮೀ13ಕೆಕೆೆೆಡಿಯು2. ಕಡೂರಿನ ಚೆನ್ನೇನಹಳ್ಳಿಯಲ್ಲಿ ಬಂದ ಮಳೆಗೆ ಕೃಷಿ ಹೊಂಡವೊಂದು ತುಂಬಿರುವುದು.