ನಗರದ ವಾಸವಿ ವಿದ್ಯಾಸಂಸ್ಥೆಯು ಭವಿಷ್ಯದಲ್ಲಿ ಇಡೀ ರಾಷ್ಟ್ರಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ವಾಸವಿ ವಿದ್ಯಾಸಂಸ್ಥೆಯು ಭವಿಷ್ಯದಲ್ಲಿ ಇಡೀ ರಾಷ್ಟ್ರಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.ನಗರದ ಕೋಟೆ ರಸ್ತೆಯಲ್ಲಿ ಶುಕ್ರವಾರ ಪ್ರತಿಷ್ಠಿತ ವಾಸವಿ ವಿದ್ಯಾಲಯದ ನೂತನ ಶೈಕ್ಷಣಿಕ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮಧ್ಯಮ ವರ್ಗದವರು, ಬಡವರು ಹಾಗೂ ಶ್ರೀಮಂತರೂ ಇದ್ದಾರೆ. ಅವರೆಲ್ಲರ ನೆರವಿನಿಂದಲೇ ಭವ್ಯವಾದ ಶೈಕ್ಷಣಿಕ ಸಂಕೀರ್ಣ ವಾಸವಿ ಆವರಣದಲ್ಲಿ ತಲೆ ಎತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ರಾಷ್ಟ್ರಮಟ್ಟದ ಬನ್ಸಾಲ್ ವಿದ್ಯಾಸಂಸ್ಥೆಯು ವಾಸವಿ ಸಂಸ್ಥೆಯೊಂದಿಗೆ ಕೈಜೋಡಿಸಿ ಪಿಯು ವಿಜ್ಞಾನ ಕಾಲೇಜು ಆರಂಭಿಸಿದೆ. ವಾಸವಿ ಜನಾಂಗವೇ ಶಿವಮೊಗ್ಗಕ್ಕೆ ದೊಡ್ಡ ಆಸ್ತಿಯಾಗಿದ್ದು, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ದೊಡ್ಡ ಕೆಲಸ ಮಾಡುತ್ತಿದೆ. ವಾಸವಿ ಸಂಸ್ಥೆಯ ಎಲ್ಲ ಕೆಲಸಗಳಿಗೂ ಶುಭವಾಗಲಿ ಎಂದು ಹಾರೈಸಿದರು.ವಾಸವಿ ಮಹಾವಿದ್ಯಾಲಯದ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಪ್ರಾಸ್ತಾವಿಕ ಮಾತನಾಡಿ, ವಾಸವಿ ಶಿಕ್ಷಣ ಸಂಸ್ಥೆಗೆ 45ವರ್ಷ ಪೂರ್ಣಗೊಂಡಿದೆ. ಕಳೆದ ಫೆಬ್ರವರಿಯಲ್ಲಿ ವಾಸವಿ ವಿದ್ಯಾಲಯದ ಶೈಕ್ಷಣಿಕ ಸಂಕೀರ್ಣದ ಭೂಮಿಪೂಜೆ ಮಾಡಲಾಗಿತ್ತು. ಮಳೆ ಕಾರಣದಿಂದ ಜೂನ್ ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಶುರುವಾಗಿತ್ತು. ಒಂದು ವರ್ಷದಲ್ಲಿ ಕಟ್ಟಡ ಪುರ್ಣಗೊಂಡಿದೆ ಎಂದರು.
6 ಕೋಟಿ ರು. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ. 80 ಠೇವಣಿದಾರರಲ್ಲಿ 50 ಠೇವಣಿದಾರರು ಮಧ್ಯಮ ವರ್ಗದವರು. 28 ಟ್ರಸ್ಟಿಗಳು ಇದುವರೆಗೆ ಒಮ್ಮತದ ನಿರ್ಧಾರ ತೆಗೆದುಕೊಂಡ ಪರಿಣಾಮ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದೆ ಎಂದು ಹೇಳಿದರು.ಕಾಲೇಜಿನ ಹಳೇ ವಿದ್ಯಾರ್ಥಿ, ಆಚಾರ್ಯ ಶಾಮಶಂಕರ ಭಟ್ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ವಾಸವಿ ಶಾಲೆ ಸಂಸ್ಥಾಪಕ ಅಧ್ಯಕ್ಷರಾದ ಭೂಪಾಳಂ ಶಶಿಧರ್ ಮತ್ತು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಗೌರವ ಸಮರ್ಪಿಸಲಾಯಿತು. ವಾಸವಿ ವಿದ್ಯಾಲಯದ ಅಧ್ಯಕ್ಷ ಬಿ.ಎಲ್.ಶಾಮಸುಂದರ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್ಸಿ ಡಿ.ಎಸ್.ಅರುಣ್, ಮಂಗಳೂರಿನ ತ್ರಿವಿಕ್ ಫೌಂಡೇಶನ್ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಶಿವಮೊಗ್ಗದ ಡಿಇಸಿಟಿ ಕಾರ್ಯದರ್ಶಿ ಎಂ.ಎಸ್.ಪ್ರಶಾಂತ್, ಪ್ರಮುಖರಾದ ಎಚ್.ಮಂಜುನಾಥ, ಎಸ್.ಎನ್.ಹಾಲಪ್ಪ, ನಾಗರಾಜ್ ಉಪಸ್ಥಿತರಿದ್ದರು.ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಮಶಂಕರ ಭಟ್ ನೇತೃತ್ವದಲ್ಲಿ ನೂತನ ಕಟ್ಟಡದ ವಾಸ್ತು ಶಾಂತಿ ಮತ್ತು ಪೂಜಾ ಕಾರ್ಯಕ್ರಮ ನೆರವೇರಿತು. ಬೆಳಗ್ಗೆ ನಗರದ ಗಾಂಧಿ ಬಜಾರ್ ಕನ್ನಿಕಾ ಪರಮೇಶ್ವರಿ ಹಾಗೂ ಕೋಟೆ ಸೀತಾ ರಾಮಾಂಜನೇಯ ದೇವರ ಪರಿವಾರ ದೇವತೆಗಳ ಮೆರವಣಿಗೆಯು ಮಂಗಳ ವಾದ್ಯಗಳ ಜತೆಗೆ ಗಾಂಧಿ ಬಜಾರ್ನಿಂದ ಆರಂಭವಾಗಿ ವಾಸವಿ ಶಾಲೆಯ ಆವರಣದಲ್ಲಿರುವ ನೂತನ ಕಟ್ಟಡವನ್ನು ಪ್ರವೇಶಿಸಿತು. ನಂತರ ಮಂಗಳ ನಿಧಿ ಕಾರ್ಯಕ್ರಮ ನೆರವೇರಿತು. ಸಂಜೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಗಾಯಕ ಪ್ರಹ್ಲಾದ್ ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.-------
ಶಿವಮೊಗ್ಗ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಭವಿಷ್ಯದಲ್ಲಿ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗುವುದನ್ನು ತಡೆಯಬೇಕಿದೆ. ವಾಸವಿ ವಿದ್ಯಾಸಂಸ್ಥೆ ಬಹಳ ವರ್ಷಗಳಿಂದ ಅನೇಕ ವಿದ್ಯಾರ್ಥಿಗಳಿಗೆ ಶ್ರಮಿಸುತ್ತಿದೆ. ವಿದ್ಯೆಗೆ ಬಹಳ ಬೇಡಿಕೆ ಇದ್ದು ವಿದ್ಯೆಯನ್ನು ಯಾರೂ ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ.-ಎಚ್.ಎಸ್.ಸುಂದರೇಶ್, ಸೂಡಾ ಅಧ್ಯಕ್ಷ.