ಕನ್ನಡಪ್ರಭ ವಾರ್ತೆ ಮುಧೋಳವೀರಶೈವ, ಲಿಂಗಾಯತ ಪ್ರತ್ಯೇಕವಲ್ಲ, ಎರಡು ಒಂದೇ ಆಗಿದ್ದು, ವೀರಶೈವ ಲಿಂಗಾಯತ ಒಡೆಯುವ ಕೆಲಸ ನಡೆಯುತ್ತಿರುವುದು ವಿಷಾದನೀಯ, ಈಗಿರುವುದು ಒಂದೇ, ಅದುವೇ ವೀರಶೈವ ಲಿಂಗಾಯತ, ಇವರೆಡನ್ನು ಬೇರೆ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ವೀರಶೈವ, ಲಿಂಗಾಯತ ಪ್ರತ್ಯೇಕವಲ್ಲ, ಎರಡು ಒಂದೇ ಆಗಿದ್ದು, ವೀರಶೈವ ಲಿಂಗಾಯತ ಒಡೆಯುವ ಕೆಲಸ ನಡೆಯುತ್ತಿರುವುದು ವಿಷಾದನೀಯ, ಈಗಿರುವುದು ಒಂದೇ, ಅದುವೇ ವೀರಶೈವ ಲಿಂಗಾಯತ, ಇವರೆಡನ್ನು ಬೇರೆ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಮುಧೋಳ ತಾಲೂಕು ಘಟಕದ ಆಶ್ರಯದಲ್ಲಿ ಭಾನುವಾರ ನಗರದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಳೆದ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಮತ್ತು ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಒಡೆದ ಮನೆಯಾಗಿದೆ, ಸ್ವಾಮೀಜಿಗಳಲ್ಲಿ ಒಕ್ಕಟ್ಟು ಇಲ್ಲದ ಕಾರಣಕ್ಕೆ ಸಾಮಾನ್ಯ ಜನರು ಸಮಸ್ಯೆ ಎದುರಿಸುವಂತಾಗಿದೆ. ಸ್ವತಂತ್ರ ಧರ್ಮ ಹೆಸರಿನಲ್ಲಿ ಸಮಾಜ ಒಡೆಯುವ ಬಹುದೊಡ್ಡ ಹುನ್ನಾರ ನಡೆಯುತ್ತಿದೆ. ಒಡೆದಾಳುವ ನೀತಿ ಮೂಲಕ ಬೇರೆಯವರು ಲಾಭ ಮಾಡಿಕೊಳ್ಳುತ್ತಿದ್ದಾರೆ.ಮಾಜಿ ಸಚಿವ ಮುರಗೇಶ ನಿರಾಣಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ. ಸಾಧಕ ವಿದ್ಯಾರ್ಥಿಗಳು ತಾವು ಉನ್ನತ ಸ್ಥಾನಕ್ಕೆ ಹೋಗಿ ದೇಶ, ವಿದೇಶದಲ್ಲಿ ಹೆಸರು ತರಬೇಕು. ರಾಜ್ಯದಲ್ಲಿ ಬಣಜಿಗ ಸಮುದಾಯದ 7 ಜನ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ.
ಈ ಅವಕಾಶ ಬೇರಾವ ಸಮುದಾಯಕ್ಕೆ ಸಿಕ್ಕಿಲ್ಲ, ಇದಕ್ಕೆ ಬಣಜಿಗರು ಎಲ್ಲ ಸಮುದಾಯದವರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನೋಭಾವವೇ ಪ್ರಮುಖ ಕಾರಣ, ಬಣಜಿಗ ಸಮಾಜದ ಕುಟುಂಬದ ಯಜಮಾನಿಗೆ ಟ್ರೇಜರಿ ಚಾವಿ ಕೊಟ್ಟಿದ್ದಾದರೆ ಸಮಾಜ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ, ಕನ್ನೇರಿ ಸಿದ್ಧಗಿರಿ ಮಠದಿಂದ ಆರಂಭಿಸಲಾದ ಕೆ.ಎ.ಎಸ್ ಮತ್ತು ಐ.ಎ.ಎಸ್ ಕೋಚಿಂಗ್ ಸೆಂಟರ್ ತಾವು ವೈಯಕ್ತಿಕವಾಗಿ ₹ 5 ಲಕ್ಷ ನೆರವು ನೀಡುವುದಾಗಿ ತಿಳಿಸಿದರು.ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಹಾದೇವ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನೇರಿ ಸಿದ್ದಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ, ಶಿರೋಳ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ರಾಚಪ್ಪಣ್ಣ ಕರೆಹೊನ್ನ, ಶಂಕರ ಬಾ. ತಿಮ್ಮಾಪೂರ, ಅರುಣ ಗೋ. ಕಾರಜೋಳ, ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ಜಿಲ್ಲಾಧ್ಯಕ್ಷ ಹೊಳಬಸು ಬಾಳಶೆಟ್ಟಿ, ಗುರುಲಿಂಗಪ್ಪ ಅಂಗಡಿ, ಸೀಮಾ ರಾಮತೀರ್ಥ, ರವೀಂದ್ರ ಕೋಲ್ಹಾರ, ವೀರೇಶ ಕಲಾದಗಿ, ಬಸವರಾಜ ಅಂಗಡಿ ಇತರರು ವೇದಿಕೆ ಮೇಲಿದ್ದರು.ವಿವಿಧ ಕ್ಷೇತ್ರದ ಸಾಧಕರಾದ ಅನೀಲಕುಮಾರ ಜಿಗಜಿನ್ನಿ, ಡಾ.ಹರ್ಷವರ್ಧನ ಹುದ್ದಾರ, ಮಿಲಿಂದ ಕೋಲ್ಹಾರ, ಬಸಪ್ಪ ಜಮಖಂಡಿ, ವಿರುಪಾಕ್ಷಿ ಅರಗಂಜಿ, ಅತಿಥಿ ಗಣ್ಯರನ್ನು, ದಾನಿಗಳನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜದಿಂದ ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷರ ಪದಗ್ರಹಣ: ಸಮಾಜದ ನೂತನ ತಾಲೂಕು ಅಧ್ಯಕ್ಷರಾಗಿ ಅಶೋಕ ಪಟ್ಟಣಶೆಟ್ಟಿ, ನಗರ ಅಧ್ಯಕ್ಷರಾಗಿ ಡಾ.ರವಿ ನಂದಗಾಂವ, ಮಹಿಳಾ ಅಧ್ಯಕ್ಷೆಯಾಗಿ ಲಾವಣ್ಯ ಉದಪುಡಿ, ಯುವ ಘಟಕದ ಅಧ್ಯಕ್ಷರಾಗಿ ಸುರೇಶ ಅಕ್ಕಿಮರಡಿ, ನೌಕರರ ಘಟಕದ ಅಧ್ಯಕ್ಷರಾಗಿ ನಿಂಗಪ್ಪ ಜಂಗಾಲಿ ಅಧಿಕಾರ ಸ್ವಿಕರಿಸಿದರು.ಗಂಗಾಧರ ಗಾಣಿಗೇರ ಪ್ರಾರ್ಥನೆ, ರೈತಗೀತೆ ಹಾಡಿದರು. ಈರಣ್ಣ ಪಟ್ಟಣಶೆಟ್ಟಿ ಸ್ವಾಗತಿಸಿದರು. ಸೂಗರಪ್ಪ ಅಕ್ಕಿಮರಡಿ ಮಾತನಾಡಿದರು. ಎಸ್.ಎಸ್.ತೆಗ್ಗಿ, ಬಸವರಾಜ ಬಳ್ಳಾರಿ, ಎ.ಬಿ.ಬಿಜಾಪೂರ ನಿರೂಪಿಸಿದರು. ಎಂ.ಬಿ.ಗೋಡಿ ವಂದಿಸಿದರು.
ಸಮಾಜದ ಎಲ್ಲ ಉಪ ಪಂಗಡಗಳು ಒಟ್ಟಾಗಿ ಸಾಗಿದರೆ ಇದನ್ನು ತಡೆಯುವ ಶಕ್ತಿ ಯಾವುದಕ್ಕೂ ಇಲ್ಲ ಪ್ರತ್ಯೇಕ ಧರ್ಮದಿಂದ ಯಾವುದೇ ಪ್ರಯೋಜನವಿಲ್ಲ, ಬದಲಾಗಿ ವೀರಶೈವ ಲಿಂಗಾಯತ ಎಲ್ಲ ಉಪ ಪಂಗಡಗಳಿಗೆ 2ಎ ಮೀಸಲಾತಿ ಸಲುವಾಗಿ ಹೋರಾಟ ಮಾಡಿದರೆ ಅದರಿಂದ ಬಹಳಷ್ಟು ಅನುಕೂಲಗಳಿವೆ, ಸದ್ಯ ನಾನು ಸಂಸದನಾಗಿರುವುದರಿಂದ ಕೇಂದ್ರದಲ್ಲಿ 2ಎ ಮೀಸಲಾತಿಗಾಗಿ ಪ್ರಯತ್ನಿಸುವೆ, ಸ್ವತಂತ್ರ ಧರ್ಮ ಎನ್ನುವವರು ಬೇಕಿದ್ದರೆ ನನ್ನ ಜತೆ ಚರ್ಚೆಗೆ ಬಂದರೆ ಅವರಿಗೆ ಉತ್ತರಿಸಲು ಸಿದ್ಧ. ದಾನ ಧರ್ಮಕ್ಕೆ ಬಣಜಿಗ ಸಮಾಜದವರೇ ಮುಂದಿರುತ್ತಾರೆ.
-ಜಗದೀಶ ಶೆಟ್ಟರ್, ಬೆಳಗಾವಿ ಸಂಸದ, ಮಾಜಿ ಮುಖ್ಯಮಂತ್ರಿ