ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ: ಶಾಸಕ ಬಿ.ಆರ್.ಪಾಟೀಲ್

| Published : Jan 14 2024, 01:33 AM IST

ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ: ಶಾಸಕ ಬಿ.ಆರ್.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಸಮಾವೇಶದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊರತುಪಡಿಸಿ ವಿರೋಧ ಪಕ್ಷದ ಹಲವಾರು ವೀರಶೈವ ಲಿಂಗಾಯತ ಸಮುದಾಯದ ನಾಯಕರು ಪಾಲ್ಗೊಳ್ಳದೆ ದೂರ ಉಳಿದಿದ್ದು ಮುಂದಿನ ದಿನಗಳಲ್ಲಿ ಮಾರಕವಾಗಲಿದೆ.

ಕನ್ನಡಪ್ರಭ ವಾರ್ತೆ ಸುರಪುರ

ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು, ಜನಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂಬುದಾಗಿ ನೋಂದಾಯಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಸಮಾವೇಶದಲ್ಲಿ ಘೋಷಿಸಿರುವುದು ಉತ್ತಮ ಬೆಳವಣಿಗೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.

ನಗರದ ಸತ್ಯಂಪೇಟೆ ಗ್ರಾಮದಲ್ಲಿನ ಪತ್ರಕರ್ತ ಲಿಂ. ಲಿಂಗಣ್ಣ ಸಂತ್ಯಂಪೇಟೆ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿ, ದಾವಣಗೆರೆ ಸಮಾವೇಶದಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊರತುಪಡಿಸಿ ವಿರೋಧ ಪಕ್ಷದ ಹಲವಾರು ವೀರಶೈವ ಲಿಂಗಾಯತ ಸಮುದಾಯದ ನಾಯಕರು ಪಾಲ್ಗೊಳ್ಳದೆ ದೂರ ಉಳಿದಿದ್ದು ಮುಂದಿನ ದಿನಗಳಲ್ಲಿ ಮಾರಕವಾಗಲಿದೆ. ಇದನ್ನು ಹೊಡೆದೋಡಿಸಲು ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದರು.

ಸಮುದಾಯದ ವಿಷಯದಲ್ಲಿ ರಾಜಕೀಯ ನಾಯಕರು ರಾಜಕೀಯ ಬೆರೆಸಬಾರದು. ವೀರಶೈವ ಲಿಂಗಾಯತ ಸಮುದಾಯ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯಗಳನ್ನು ರೂಪಿಸಬೇಕು. ಅದಕ್ಕೆ ನನ್ನ ಬೆಂಬಲಿವಿದೆ ಎಂದರು.

ಎಡದಂಡೆ ಕಾಲುವೆಗೆ ನೀರು ಹರಿಸುವಂತೆ ಭೀಮರಾಯನಗುಡಿಯಲ್ಲಿ ರೈತರು ನಿರಂತರ ಪ್ರತಿಭಟಿಸಿದ್ದರ ಫಲವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ನಾವು ಮತ್ತು ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಂದು ಬೆಳೆಗಳನ್ನು ಉಳಿಸಲು ನೀರು ಬಿಡಿಸುವ ಕೆಲಸ ಮಾಡಿದ್ದೇವೆ. ಮುಂದೆಯೂ ರೈತರು ಬೇಡಿಕೆ ಈಡೇರಿಕೆಗಾಗಿ ಸರಕಾರಕ್ಕೆ ಮನವಿ ಸಲ್ಲಿಸಿದರೆ ಅದಕ್ಕೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು.

ಈ ಕಡೆಗೆ ಬಂದರೆ ನನಗೆ ಮೊದಲು ಹಿರಿಯ ಪತ್ರಕರ್ತ ಲಿಂ. ಲಿಂಗಣ್ಣ ಸತ್ಯಂಪೇಟೆಯವರು ಹಾಗೂ ಮಲ್ಲಿಕಾರ್ಜುನ ನೆನಪಾಗುತ್ತಾರೆ. ಅದಕ್ಕಾಗಿಯೇ ನಾನು ಸಿಂಧನೂರಿಗೆ ಹೋಗಬೇಕಾದರೆ ಮಾರ್ಗದಲ್ಲಿ ದಿ. ಲಿಂಗಣ್ಣನವರ ಮನೆ ಹಾಗೂ ಸಮಾಧಿಗೆ ಭೇಟಿ ನೀಡುವ ಮನಸ್ಸಾಯಿತು. ಹೀಗಾಗಿ ಸಮಾಧಿಗೆ ಭೇಟಿ ನೀಡಿರುವೆ ಎಂದರು.

ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಪಿಎಸ್‌ಐ ಸಿದ್ದಣ್ಣ ಯಡ್ರಾಮಿ, ಮುಖಂಡರಾದ ಶಿವರುದ್ರ ಉಳ್ಳಿ, ವೀರಭದ್ರ ಕೆಂಭಾವಿ, ಜಟ್ಟೆಪ್ಪ, ಮಂಜುನಾಥ ಹಿರೇಮಠ, ಶರಬಣ್ಣ ಹೊಸ್ಮನಿ, ವಿಜಯಕುಮಾರ ಗುಳಗಿ ಸೇರಿದಂತೆ ಇತರರಿದ್ದರು.