ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ಹೇಮಾವತಿ ನೀರಿಗಾಗಿ ಮಾಗಡಿ ತಾಲೂಕಿನ ವೀರಶೈವ ಲಿಂಗಾಯತ ಮಠದ ಸ್ವಾಮೀಜಿಗಳು ನಮ್ಮ ಪಾಲಿನ ಹೇಮಾವತಿ ನೀರನ್ನು ಕೊಡಬೇಕೆಂದು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶರತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಕೆಂಪೇಗೌಡ ಪ್ರತಿಮೆ, ಬಸವೇಶ್ವರ ಸ್ವಾಮಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟ್ಟಣದ ಡೂಮ್ಲೈಟ್ ವೃತ್ತದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆಯನ್ನು ವಿವಿಧ ಮಠದ ಶ್ರೀಗಳು ನಡೆಸಿ ಹೇಮಾವತಿ ನೀರು ವಿರೋಧ ಮಾಡುತ್ತಿರುವ ತುಮಕೂರಿನ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಪಾಲಿನ ಮುಕ್ಕಾಲು ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಕೂಡಲೇ ಆರಂಭಿಸುವಂತೆ ಒತ್ತಾಯಿಸಿದರು.ಚಕ್ರಬಾವಿ ಮರಳು ಸಿದ್ದೇಶ್ವರ ಮಠ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಕೆಂಪೇಗೌಡರಂತಹ ಮೂರು ರತ್ನಗಳಿಗೆ ಜನ್ಮ ನೀಡಿದ ಮಾಗಡಿ ತಾಲೂಕಿಗೆ ನೀರು ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವುದು ಮೂರ್ಖತನವಾಗಿದೆ. ಇದನ್ನು ಯಾರು ಕೂಡ ತಡೆಯುವ ಕೆಲಸ ಮಾಡುವಂತಿಲ್ಲ. ಪ್ರಕೃತಿ ಕೊಟ್ಟಿರುವ ನೀರನ್ನು ಇನ್ನೊಬ್ಬರಿಗೆ ಹಂಚಿಕೊಂಡು ಸ್ನೇಹ ಭಾವ ಬೆಳೆಸಿಕೊಳ್ಳಬೇಕು. ನಾವೇನು ಪಾಕಿಸ್ತಾನದಲ್ಲಿ ಇದ್ದೇವೆ ಪಕ್ಕದ ಜಿಲ್ಲೆಯವರಾಗಿ ಹೇಮಾವತಿ ನೀರು ನಮಗೂ ಹಕ್ಕಿದ್ದು ಈ ನೀರನ್ನು ಕೊಡುವುದಿಲ್ಲ ಎಂದು ಹೊರಟ ಮಾಡುತ್ತಿರುವುದು ಸರಿಯಲ್ಲ.ಸಿದ್ದಗಂಗಾ ಮಠ ಅಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮಿಜಿಗಳೇ ನೀರು ಎಲ್ಲರ ಸ್ವತ್ತು. ಹೆಚ್ಚುವರಿ ನೀರು ಕೊಡುವುದರಿಂದ ಯಾವುದೇ ಅನ್ಯಾಯ ಆಗುವುದಿಲ್ಲ ಎಂದು ಹೇಳಿಕೆ ಕೊಟ್ಟರೂ ಕೂಡ ಈ ರೀತಿ ನಮ್ಮ ವಿರುದ್ಧ ಹೋರಾಟ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಅಧಿಕಾರಿಗಳು ಸರ್ಕಾರ ಮಧ್ಯಪ್ರವೇಶ ಮಾಡಿ ನಿಂತಿರುವ ಎಕ್ಸ್ಪ್ರೆಸ್ ಕೆನಲ್ ಕಾಮಗಾರಿ ಪೂರ್ಣಗೊಳಿಸಿ ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಜಗಣ್ಣಯ್ಯ ಮಠ ಚನ್ನಬಸವರಾಜ ಸ್ವಾಮೀಜಿ ಮಾತನಾಡಿ, ಹೇಮಾವತಿ ನೀರು ತಾಲೂಕಿಗೆ ಬರಬೇಕು ಗುಡ್ಡಗಾಡು ಪ್ರದೇಶವಾಗಿದ್ದು, ಸಾಕಷ್ಟು ಹಿಂದುಳಿದ ತಾಲೂಕು ಆಗಿರುವುದರಿಂದ ಕುಡಿಯುವ ನೀರಿಗಾಗಿ ನಾವು ಹೋರಾಟ ಮಾಡಲಾಗುತ್ತಿದೆ. ಹೇಮಾವತಿ ನೀರಿನ ನಮ್ಮ ಪಾಲನ್ನು ಮಾತ್ರ ಕೇಳುತ್ತಿದ್ದು, ತುಮಕೂರಿನ ಪಾಲನ್ನು ಕೇಳುತ್ತಿಲ್ಲ. ಕೂಡಲೇ ಸರ್ಕಾರ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸಿ 63 ಕೆರೆಗಳನ್ನು ತುಂಬಿಸುವ ಶ್ರೀರಂಗ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದರು.ಗದ್ದಿಗೆ ಮಠದ ಮಹಾಂತೇಶ್ವರ ಸ್ವಾಮೀಜಿ, ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಬಂಡೆಮಠದ ಮಹಾಲಿಂಗ ಸ್ವಾಮೀಜಿ, ಗುಮ್ಮಸಂದ್ರದ ಚಂದ್ರಶೇಖರ ಸ್ವಾಮೀಜಿ ಹೇಮಾವತಿ ಯೋಜನೆ ಅನುಷ್ಠಾನಕ್ಕಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಹೇಮಾವತಿ ನೀರಿಗಾಗಿ ಬೆಂಬಲ ವ್ಯಕ್ತಪಡಿಸಿದರು.