ಸಾರಾಂಶ
ಹಾವೇರಿ: ಕೇಂದ್ರದ ಓಬಿಸಿ ಮೀಸಲಾತಿ ಸಿಗಬೇಕಾದರೆ ರಾಜ್ಯದಲ್ಲಿರುವ ಎಲ್ಲಾ ವೀರಶೈವ ಲಿಂಗಾಯತರು ಒಂದಾಗಬೇಕು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಕರೆ ನೀಡಿದರು.ನಗರದ ತುಳಸಿ ಐಕಾನ್ನಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮನ 201ನೇ ವಿಜಯೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಕೇವಲ ಪಂಚಮಸಾಲಿ ಲಿಂಗಾಯತರಷ್ಟೇಯಲ್ಲ, ವೀರಶೈವ ಲಿಂಗಾಯತರಿಗೆ ಕೇಂದ್ರದ ಓಬಿಸಿ ಮೀಸಲಾತಿ ಸಿಗಬೇಕಾದರೆ ರಾಜ್ಯದ ಎಲ್ಲ ವೀರಶೈವ ಲಿಂಗಾಯತರು ನಾವೆಲ್ಲಾ ಒಂದು ಎಂಬ ಸಂದೇಶ ಸಾರಬೇಕು. ಇಲ್ಲದಿದ್ದರೆ ನಮ್ಮ ಅಸ್ತಿತ್ವವೇ ಇರುವುದಿಲ್ಲ. ನಮ್ಮ ಮನೆ, ನಮ್ಮ ಸಮಾಜ ಎಲ್ಲವೂ ಇರಲಿ. ಆದರೆ ಒಟ್ಟು ಸಮಾಜ ಎಂದು ಬಂದಾಗ ಎಲ್ಲಾ ವೀರಶೈವ ಲಿಂಗಾಯತರು ಒಂದಾಗಬೇಕು. ಈಗಾಗಲೇ ಮೀಸಲಾತಿ ಸಲುವಾಗಿ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇವೆ. ಕೇಂದ್ರದ ಹಿಂದುಳಿದ ವರ್ಗಗಳ ಆಯೋಗದ ಪತ್ರ ರಾಜ್ಯದ ಕ್ಯಾಬಿನೆಟ್ಗೆ ಬಂದಿದೆ. ಸರ್ಕಾರ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಸಮಾಜಕ್ಕೆ ಓಬಿಸಿ ಮೀಸಲಾತಿ ಸಿಗುತ್ತದೆ. ಕೇಂದ್ರದ ಓಬಿಸಿ ನಮ್ಮ ಸಮಾಜಕ್ಕೆ ಸಿಕ್ಕರೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ನೌಕರರಾಗುತ್ತಾರೆ. ಶೇ.27ರಷ್ಟು ಮೀಸಲು ಸಿಗುತ್ತದೆ. ಕರ್ನಾಟಕದಲ್ಲಿ ಬಹುಸಂಖ್ಯಾತರಿರುವ ಜನಕ್ಕೆ ಓಬಿಸಿ ಮೀಸಲು ಬೇಕು ಎಂದರು.ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಪಿ.ಡಿ. ಶಿರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿದರು. ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ಗೌರವ ಆಡಳಿತಾಧಿಕಾರಿ ಡಾ. ರಾಜಕುಮಾರ, ಸಂಜೀವಕುಮಾರ ನೀರಲಗಿ, ಮಂಜುನಾಥ ಕುನ್ನೂರ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ನೆಹರು ಓಲೇಕಾರ, ಎಸ್.ಎಫ್.ಎನ್ ಗಾಜಿಗೌಡ್ರ, ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಸಂತೋಷಕುಮಾರ ಪಾಟೀಲ, ಐ.ಎಸ್.ಬಳ್ಳಾರಿ, ಮಲ್ಲಿಕಾರ್ಜುನ ಹಾವೇರಿ, ವಸಂತಮ್ಮ ಹುಲ್ಲತ್ತಿ, ಸಂಗಮೇಶ ಸುಳ್ಳಳ್ಳಿ, ಎಂ.ಎಸ್ ಪಾಟೀಲ, ಶೋಭಾ ನಿಸ್ಸೀಮಗೌಡ್ರ, ನಾಗೇಂದ್ರ ಮಾಳಿ, ಶಿವಬಸಪ್ಪ ಹಲಗಣ್ಣನವರ, ಪ್ರೇಮಾ ಪಾಟೀಲ, ರಾಜೇಶ್ವರಿ ಬಿಷ್ಟನಗೌಡ್ರ, ದಾನೇಶಪ್ಪ ಕೆಂಗೊಂಡ, ಗವಿಸಿದ್ದಪ್ಪ ದ್ಯಾಮಣ್ಣವರ, ಪರಮೇಶಪ್ಪ ಮೇಗಳಮನಿ, ಭುವನೇಶ್ವರ ಶಿಡ್ಲಾಪುರ, ವಿಜಯ ಪಾರಸ್, ಮಲ್ಲಿಕಾರ್ಜುನ ಸಾತೆನಹಳ್ಳಿ, ಮಾಲತೇಶ ಸೊಪ್ಪಿನ, ಭಾರತಿ ಜಂಬಗಿ, ನಂಜುಂಡೇಶ ಕಳ್ಳೆರ ಸೇರಿದಂತೆ ಇತರರು ಇದ್ದರು. ಡಾ.ಬಸವರಾಜ ವೀರಾಪುರ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹಾಗೂ ಪ್ರತಿಮೆ ಪ್ರತಿಷ್ಠಾಪನೆ ಬಹಳ ದಿನದ ಬೇಡಿಕೆಯಾಗಿದೆ. ವೃತ್ತದ ಅಭಿವೃದ್ಧಿಗೆ 50 ಲಕ್ಷ ರು. ಮೀಸಲಿಟ್ಟಿದ್ದೇನೆ. ಅಕ್ಕಮಹಾದೇವಿ ಹೊಂಡದ ಅಭಿವೃದ್ಧಿಗೆ ಹಾಗೂ ಪ್ರತಿಮೆ ನಿರ್ಮಾಣಕ್ಕೆ 6.50 ಕೋಟಿ ಮೀಸಲಿಟ್ಟಿದೆ. ಬಸವೇಶ್ವರರ ಅಶ್ವರೂಢ ಪ್ರತಿಮೆ ನಿರ್ಮಾಣಕ್ಕೆ ಬದ್ಧನಾಗಿದ್ದೇನೆ ಎಂದು ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಅಭಿವೃದ್ಧಿ ಚಾಲನೆ..ನಗರದ ಶಹರ ಪೊಲೀಸ್ ಠಾಣೆ ಎದುರು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಅಭಿವೃದ್ಧಿ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ, ನಂತರ ತುಳಸಿ ಐಕಾನ್ನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಇದಕ್ಕೂ ಪೂರ್ವದಲ್ಲಿ ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ವಿವಿಧ ಕಲಾ ತಂಡಗಳು, ಸಕಲ ವಾದ್ಯ ವೈಭವಗಳೊಂದಿಗೆ ಚೆನ್ನಮ್ಮನ ಭಾವಚಿತ್ರ ಮೆರವಣಿಗೆ ನಡೆಯಿತು. ವೇದಿಕೆಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
;Resize=(128,128))
;Resize=(128,128))
;Resize=(128,128))