ಕನ್ನಡಪ್ರಭವಾರ್ತೆ ನೆಲಮಂಗಲ
ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ನೀಡಿದ ಸಂದೇಶದಂತೆ ವೀರಶೈವ ಲಿಂಗಾಯತರು ಒಂದೇ ಎಂಬುದನ್ನು ಎಂದಿಗೂ ಮರೆಯುವಂತಿಲ್ಲ. ಶ್ರೀಮಂತವಾದ ವೀರಶೈವ ಲಿಂಗಾಯತ ಪರಂಪರೆ ಕವಲು ದಾರಿಯಲಿದ್ದು, ಯಾವ ಶಕ್ತಿಗಳು ಪ್ರಯತ್ನ ಮಾಡಿದರೂ ವೀರಶೈವ ಹಾಗೂ ಲಿಂಗಾಯತರು ಒಂದೇ ವಿನಃ ಬೇರೆ ಮಾಡಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.ನಗರದ ಶ್ರೀ ಜಯದೇವ ವೀರಶೈವ ಭವನದಲ್ಲಿ ಶ್ರೀ ಬಸವೇಶ್ವರ ಯುವಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ, ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿ ಧರ್ಮ ಮಾರ್ಗದೊಂದಿಗೆ ನಡೆಯುವವರು ಕಡಿಮೆಯಾಗುತ್ತಿದ್ದಾರೆ. ಏನಾದರೂ ಮಾಡಿ ಅಲ್ಪಾವಧಿಯಲ್ಲಿ ಹಣ, ಅಧಿಕಾರ, ಕೀರ್ತಿ ಪಡೆಯಬೇಕು ಎಂಬ ಆತುರದಲ್ಲಿ ತಪ್ಪು ದಾರಿಯಲ್ಲಿ ಸಾಗುವುದು ಒಳ್ಳೆಯದಲ್ಲ. ಯುವ ಪೀಳಿಗೆ ನಶೆ ಪ್ರಪಂಚದಲ್ಲಿ ಬಿದ್ದಿದ್ದು, ಪೋಷಕರು ತಮ್ಮ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಜತೆಗೆ ಸಂಸ್ಕಾರಯುತವಾಗಿ ಬೆಳೆಸಬೇಕಾದ ಅನಿವಾರ್ಯತೆ ಪ್ರಸ್ತುತ ದಿನಗಳಲ್ಲಿ ಎದುರಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗುವ ರೀತಿ ಮಕ್ಕಳನ್ನು ಬೆಳೆಸಿ ಎಂದರು.ಶಾಸಕ ಎನ್. ಶ್ರೀನಿವಾಸ್ ಮಾತನಾಡಿ, ನೆಲಮಂಗಲದಲ್ಲಿ ಅದ್ಧೂರಿ ರೇಣುಕಾಚಾರ್ಯರ ಜಯಂತಿ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ, ಅವರ ಸಂದೇಶಗಳು ಸಮಾಜವನ್ನು ಎಚ್ಚರಿಸುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಶಕ್ತಿಯಾಗಿದೆ. ನೆಲಮಂಗಲದಲ್ಲಿ ಉಜ್ಜಯಿನಿ ಶ್ರೀಗಳನ್ನು ಕರೆಸಿ ಅದ್ಧೂರಿ ಸಮಾರಂಭ ಮಾಡಿರುವುದು ಸಂತೋಷದ ಸಂಗತಿ. ನೆಲಮಂಗಲದಲ್ಲಿನ ಎಲ್ಲಾ ಮಠಗಳಿಗೆ ಸೇವೆ ಮಾಡುತ್ತಿದ್ದೇನೆ, ಮಠಗಳ ಅಭಿವೃದ್ಧಿಯಾದರೆ ಬಡವರು ಬದುಕು ಕಟ್ಟಿಕೊಳ್ಳುತ್ತಾರೆ. ಸಮಾಜ ಸಂಸ್ಕಾರಯುತವಾಗಿ ನಡೆಯುತ್ತದೆ. ವೀರಶೈವ ಲಿಂಗಾಯತ ಸಮಾಜದ ಕೊಡುಗೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಡಾ.ಕರಿವೃಷಭದೇಶಿ ಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಆದ್ದೂರಿ ಮೆರವಣಿಗೆ:
ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಸಮ್ಮುಖದಲ್ಲಿ ಮಹಾ ಶಿವಪೂಜೆ, ಕ್ಷೇತ್ರನಾಥ ಶ್ರೀ ಬಸವೇಶ್ವರ ಶ್ರೀರೇಣುಕಾಚಾರ್ಯರ ಹಾಗೂ ಮಹಾಗಣಪತಿಗೆ ರುದ್ರಾಭಿಷೇಕದ ನಂತರ ವೀರಗಾಸೆ, ನಂದಿಧ್ವಜ, ಡೊಳ್ಳುಕುಣಿತ, ಪೂಜಾ ಕುಣಿತದ ಸಮೇತ ನಗರದ ರಾಜಬೀದಿಗಳಲ್ಲಿ ರೇಣುಕಾಚಾರ್ಯರ ಉತ್ಸವ ಮೂರ್ತಿಯನ್ನು ಸಾರೋಟಿನಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮುಕ್ತಾಂಬ, ರಾಜ್ಯ ನಿರ್ದೇಶಕ ವಿರೂಪಾಕ್ಷ, ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ, ಎನ್ಪಿಎ ಅಧ್ಯಕ್ಷ ಎಂ.ಕೆ ನಾಗರಾಜು, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಸದಸ್ಯರಾದ ಸಿ.ಪ್ರದೀಪ್, ಪೂರ್ಣಿಮಾ, ಸುಧಾಕೃಷ್ಣಪ್ಪ, ಹಿರಿಯ ಪತ್ರಕರ್ತ ರಾಜಣ್ಣ, ಪಂಚಾಚಾರ್ಯರ ಯುಗಮಾನೋತ್ಸವ ಸಮಿತಿ ಅಧ್ಯಕ್ಷ ಎನ್.ಎಸ್.ನಟರಾಜು, ಅಭಾವೀಮ ತಾಲೂಕು ಅಧ್ಯಕ್ಷ ಎನ್.ರಾಜಶೇಖರ್ ಕವಾಡಿಮಠ, ದತ್ತಿ ಸಮಿತಿ ಅಧ್ಯಕ್ಷ ಎನ್.ಆರ್.ಜಗದೀಶ್, ಶ್ರೀ ರುದ್ರೆಶ್ವರ ಸೊಸೈಟಿ ಅಧ್ಯಕ್ಷ ಎನ್.ಬಿ.ದಯಾ ಶಂಕರ್, ಟೌನ್ ಸೊಸೈಟಿ ಅಧ್ಯಕ್ಷ ಚನ್ನಬಸವರಾಜು. ಬಸವೇಶ್ವರ ಯುವಕ ಸಮಿತಿ ಅಧ್ಯಕ್ಷ ಎನ್.ಎಸ್.ಗಣೇಶ್, ಸದಸ್ಯರುಗಳಾದ ಎನ್.ಜಿ.ರುದ್ರಮೂರ್ತಿ, ಕಾರ್ತಿಕ್, ಚಂದ್ರಶೇಖರ್, ಕೆ.ಸಿ.ಅಣ್ಣಪ್ಪ, ಎನ್.ಜಿ.ಶಿವಶಂಕರ್, ಎನ್.ಜಿ.ದೀಪಕ್, ರಾಜಪ್ರಕಾಶ್, ಮಂಜುನಾಥ್., ಕೊಟ್ರೇಶ್.ಆರ್ ಮತ್ತಿತರರಿದ್ದರು.
------ಪೊಟೊ- 2 ಕೆಎನ್ಎಲ್ಎಮ್1- ನೆಲಮಂಗಲ ನಗರದ ಶ್ರೀ ಜಯದೇವ ವೀರಶೈವ ಭವನದಲ್ಲಿ ಶ್ರೀ ಬಸವೇಶ್ವರ ಯುವಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ, ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭವನ್ನು ಶಾಸಕ ಎನ್ ಶ್ರೀನಿವಾಸ್ ಉದ್ಘಾಟಿಸಿದರು.