ಸಾರಾಂಶ
ಉಡುಪಿ : ಸುರಕ್ಷತಾ ದೃಷ್ಟಿಯಿಂದ ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟಿ ಮಾರ್ಗ ವ್ಯಾಪ್ತಿಯಲ್ಲಿ (ಮಾಸ್ತಿಕಟ್ಟೆಯಿಂದ ಹೊಸಂಗಡಿಯ ವರೆಗೆ) ಮಳೆಗಾಲ ಮುಗಿಯುವ ವರೆಗೆ ತಾತ್ಕಾಲಿಕವಾಗಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರೆ ಘಾಟ್ ಸರಪಳಿ 42.10ರಿಂದ 42.20 ರಲ್ಲಿನ ಹೇರ್ ಪಿನ್ ತಿರುವಿನಲ್ಲಿ ಮೇ ಅಂತ್ಯದಲ್ಲಿ ಬಿದ್ದಂತಹ ಮಳೆಯಿಂದ ಕಾಂಕ್ರಿಟ್ ರಸ್ತೆಯ ಕೆಳಭಾಗದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಪ್ರಸ್ತುತ ಮಣ್ಣು ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಮತ್ತೆ ಮಳೆ ಚುರುಕುಗೊಂಡಿರುವುದರಿಂದ ಮಣ್ಣು ಕುಸಿಯುವ ಸಂಭವವಿರುವುದರಿಂದ, ಸುರಕ್ಷತಾ ದೃಷ್ಟಿಯಿಂದ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಬುಧವಾರದಿಂದಲೇ ಜಾರಿ ಬರುವಂತೆ ನಿರ್ಬಂಧಿಸಲಾಗಿದೆ.ವಾಹನಗಳು ಈ ಕೆಳಗಿನ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ:
ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಬರುವ ವಾಹನಗಳು ತೀರ್ಥಹಳ್ಳಿ - ರಾವೆ - ಕಾನುಗೋಡು - ನಗರ - ಕೊಲ್ಲೂರು ಮೂಲಕ ಕುಂದಾಪುರ ಅಥವಾ ತೀರ್ಥಹಳ್ಳಿ - ಯಡೂರು - ಮಾಸ್ತಿಕಟ್ಟೆ - ಕಾನುಗೋಡು - ನಗರ - ಕೊಲ್ಲೂರೂ ಮೂಲಕ ಕುಂದಾಪುರ ತಲುಪಬಹುದು. ಅಥವಾ ತೀರ್ಥಹಳ್ಳಿಯಿಂದ ಶಿವಮೊಗ್ಗ - ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಭಟ್ಕಳ - ಬೈಂದೂರು ಮಾರ್ಗವಾಗಿಯೂ ಕುಂದಾಪುರ ತಲುಪಬಹುದು ಎಂದು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.