ಮನುಕುಲದ ಉದ್ಧಾರಕ್ಕಾಗಿ ಮಹಾಯೋಗಿಯಾದ ವೇಮನರು-ಉಷಾ ದಾಸರ

| Published : Jan 20 2024, 02:00 AM IST

ಸಾರಾಂಶ

ಆಸೆ ಆಮಿಷಗಳಿಗೆ ಒಳಪಟ್ಟು ಭೋಗಿಯಾದಂತಹ ವೇಮನರು ತ್ಯಾಗ ಜೀವನದ ಸಾರ್ಥಕತೆಯೊಂದಿಗೆ ಮನುಕುಲದ ಉದ್ಧಾರಕ್ಕಾಗಿ ಮಹಾಯೋಗಿಯಾದರು ಎಂದು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಹೇಳಿದರು.

ಗದಗ: ಆಸೆ-ಆಮಿಷಗಳಿಗೆ ಒಳಪಟ್ಟು ಭೋಗಿಯಾದಂತಹ ವೇಮನರು ತ್ಯಾಗ ಜೀವನದ ಸಾರ್ಥಕತೆಯೊಂದಿಗೆ ಮನುಕುಲದ ಉದ್ಧಾರಕ್ಕಾಗಿ ಮಹಾಯೋಗಿಯಾದರು ಎಂದು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಹೇಳಿದರು.

ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾಯೋಗಿ ವೇಮನರು ಶ್ರೇಷ್ಠ ವಚನಕಾರ, ಕವಿ, ಸಮಾಜ ಚಿಂತಕರು, ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದ ಮಹಾಯೋಗಿಯಾಗಿದ್ದರು. ಅವರು ಸಾರ್ವಕಾಲಿಕ ದಾರ್ಶನಿಕರಾಗಿದ್ದು, ಅವರ ತತ್ವ-ಸಿದ್ಧಾಂತಗಳು ಇಂದಿಗೂ ಮಾದರಿಯಾಗಿವೆ. ಇಂದಿನ ಯುವ ಪೀಳಿಗೆಗೆ ಮಹಾಯೋಗಿ ವೇಮನರ ತತ್ವ-ಸಿದ್ಧಾಂತಗಳನ್ನು ತಿಳಿಸುವ ಕಾರ್ಯವಾಗಬೇಕಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ. ಮಾತನಾಡಿ, ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕಲು ಹಾಗೂ ಸಾಮಾಜಿಕ ಸಮಾನತೆ ತರಲು ಅನೇಕ ದಾರ್ಶನಿಕರು ಶ್ರಮಿಸಿದ್ದಾರೆ. ಅಂತಹವರಲ್ಲಿ ಮಹಾಯೋಗಿ ವೇಮನರು ಒಬ್ಬರಾಗಿದ್ದಾರೆ. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನರು ಮಹಾಯೋಗಿಯಾಗಿದ್ದಾರೆ. ವೇಮನರು ಪದ್ಯಗಳ ಮೂಲಕ ಜನ ಸಾಮಾನ್ಯರಿಗೆ ತಿಳಿವಳಿಕೆ ನೀಡಿದ್ದು, ಅವರ ತತ್ವಾದರ್ಶಗಳು ಸಾರ್ವಕಾಲಿಕವಾಗಿವೆ ಎಂದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕ ಡಾ. ರಮೇಶ ಕಲ್ಲನಗೌಡರ ವೇಮನರ ಜೀವನ ಮತ್ತು ಸಂದೇಶಗಳ ಕುರಿತು ಮಾತನಾಡಿ, ಮಹಾಯೋಗಿ ವೇಮನರು ಭೋಗ ಜೀವನದ ದಾಸರಾಗಿ, ವೈರಾಗ್ಯವನ್ನು ತಾಳಿ, ಇಡೀ ಮಾನವ ಸಂಕುಲಕ್ಕೆ ಬದುಕಿನ ನಶ್ವರತೆಯನ್ನು ತಿಳಿಸುತ್ತಾ ವಾಸ್ತವಿಕತೆಯ ಬೆಳಕನ್ನು ಪರಿಚಯಿಸಿದ್ದಾರೆ. ಮಹಾಯೋಗಿ ವೇಮನರ ತತ್ವ-ಸಿದ್ಧಾಂತಗಳು ಇಡೀ ಮಾನವ ಕಲ್ಯಾಣಕ್ಕೆ ಪೂರಕವಾದವು. ಮಹಾಯೋಗಿ ವೇಮನರ ಕಾವ್ಯ ಸೃಷ್ಟಿಯಲ್ಲಿ ಅಲೌಕಿಕ ಮಾರ್ಗದ ಸಾರ್ಥಕ ಹಾದಿಯನ್ನು ತೋರುತ್ತ, ಶರಣರ ತತ್ವ-ಚಿಂತನೆ ಪರಂಪರೆಯನ್ನು ನಾವೆಲ್ಲ ಕಾಣಬಹುದಾಗಿದೆ ಎಂದರು.ಬಸವಯ್ಯ ಶಾಸ್ತ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮುಖಂಡರಾದ ರವಿ ಮೂಲಿಮನಿ, ಪ್ರೇಮಾ ಮೇಟಿ, ಶೇಖಣ್ಣ ಗದ್ದಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು. ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ಪಂ. ವೆಂಕಟೇಶ ಅಲ್ಕೋಡ್ ಮತ್ತು ತಂಡದವರು ವಚನ ಗಾಯನ ಹಾಗೂ ನಾಡಗೀತೆ ಪ್ರಸ್ತುತ ಪಡಿಸಿದರು.