ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಹಕಾರ ಕ್ಷೇತ್ರದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಾಧನೆ ಹಿರಿದಾದದ್ದು ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ಮೂರ್ನಾಡಿನಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆಯನ್ನು ಭಾನುವಾರ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಕೋ ಆಪರೇಟಿವ್ ಸೊಸೈಟಿಗಳು ತುಂಬಾ ಪ್ರಾಮುಖ್ಯತೆ ನೀಡುತ್ತಿವೆ. ಅದೇ ರೀತಿ ಈ ವರ್ಗದ ಜನರಿಗೆ ಕಾರ್ಪೊರೇಟಿವ್ ಸೊಸೈಟಿಯಿಂದ ಹೆಚ್ಚಿನ ಅನುಕೂಲ ಆಗುತ್ತಿದೆ. ಆದ್ದರಿಂದ ಇಂತಹ ಸೊಸೈಟಿಗಳು ಜನಸಾಮಾನ್ಯರ ಒಳಿತನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಮ್ಮ ಸಂಸ್ಥೆಯ ಬೆಳವಣಿಗೆಗೆ ಪೂರಕವಾದಂತಹ ನೀತಿಗಳನ್ನು ರೂಪಿಸಿ ಜನಮನ್ನಣೆ ಗಳಿಸುವಂಥದ್ದು ತುಂಬಾ ಮುಖ್ಯ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಪ್ರಸ್ತುತ ಕೊಡಗಿನಲ್ಲಿ ಮಡಿಕೇರಿ, ಕುಶಾಲನಗರ, ನಾಪೋಕ್ಲು , ಸೋಮವಾರಪೇಟೆಯಲ್ಲಿ ಶಾಖೆಗಳಿದ್ದು 24ನೇ ಶಾಖೆ ಇದಾಗಿದ್ದು, ಮೂರ್ನಾಡು ಭಾಗದಲ್ಲಿ ಇದು ಮತ್ತಷ್ಟು ಯಶಸ್ಸು ಕಾಣಲಿ ಇನ್ನಷ್ಟು ಶಾಖೆಗಳು ಕೊಡಗಿನಲ್ಲಿ ತೆರೆಯುವಂತಾಗಲಿ ಎಂದು ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತವು ಬಹಳ ಶ್ರಮದಿಂದ ಜನಮನ ಗಳಿಸುತ್ತಿದ್ದು ಇದರ ಸದುಪಯೋಗ ಈ ಭಾಗದ ಜನರಿಗೆ ಒದಗುವಂತಾಗಲಿ ಎಂದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಭದ್ರತಾ ಕೊಠಡಿ ಉದ್ಘಾಟಿಸಿ, ಮಾತನಾಡಿ ಬ್ಯಾಂಕಿಂಗ್ ಮಾತ್ರವಲ್ಲದೆ ಶಿಕ್ಷಣ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ವೆಂಕಟರಮಣ ಸೊಸೈಟಿಯ ಬದ್ಧತೆ ಅಭಿನಂದನಾರ್ಹ ಎಂದರು.


ಗಣಕೀಕರಣವನ್ನು ಮೂರ್ನಾಡು ವರ್ತಕರ ಸಂಘದ ಅಧ್ಯಕ್ಷ ಅರುಣ್ ಅಪ್ಪಚ್ಚು ಬಡವಂಡ ಉದ್ಘಾಟಿಸಿದರು.ಶಾಖೆಯ ಪ್ರಥಮ ಠೇವಣಿ ಪತ್ರವನ್ನು ಕೊಡಗು ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ನವೀನ್ ಅಂಬೆಕಲ್ಲು ವಿತರಿಸಿ ಮಾತನಾಡಿ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಿದೆ ಎಂದರು.

ಪ್ರಥಮ ಪಾಲು ಪತ್ರವನ್ನು ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಟಿ ಹರೀಶ್ ವಿತರಿಸಿ ಸಂಸ್ಥೆಯು ಮೂರ್ನಾಡಿನಲ್ಲಿ ತಮ್ಮ ಶಾಖೆ ತೆರೆದಿರುವುದು ಸಂತಸ ತಂದಿದೆ ಎಂದರು.

ವೆಂಕಟೇಶ್ವರ ಕಾಂಪ್ಲೆಕ್ಸ್ನ ಮಾಲೀಕರಾದ ಕುಂತೋಡಿರ ದೇವಯ್ಯ ಹಾಗೂ ಉದ್ಯಮಿ ವಾಸುದೇವ ಪಟ್ರಕೋಡಿ ಅವರನ್ನು ಗೌರವಿಸಲಾಯಿತು.

ಸಂಘದ ನಿರ್ದೇಶಕ ಸದಾನಂದ ಮಾವಜಿ ಸ್ವಾಗತಿಸಿ, ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಸ್ತಾವಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ ವಂದಿಸಿದರು. ಸಿಬ್ಬಂದಿ ಗಿರೀಶ್‌ಕಾಂತ್ ಪರಪ್ಪು ಹಾಗೂ ಆದರ್ಶ ಪ್ರಾರ್ಥಿಸಿದರು. ಕೃಷ್ಣಪ್ರಸಾದ್ ನಿರೂಪಿಸಿದರು.

ಸೊಸೈಟಿಯ ಸದಸ್ಯರಾದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್ ಗಂಗಾಧರ, ಸೊಸೈಟಿಯ ಪೂರ್ವಾಧ್ಯಕ್ಷರಾದ ಪಿ.ಸಿ ಜಯರಾಮ, ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಚಂದ್ರ ಕೋಲ್ಚಾರ್, ದೊಡ್ಡಣ್ಣ ಬರೆಮೇಲು, ಪ್ರೇಮ ಲೋಕೇಶ್, ಡಾ. ಎನ್.ಎ. ಜ್ಞಾನೇಶ್, ಲಕ್ಷೀ ನಾರಾಯಣ ನಡ್ಕ, ಮೋಹನ್ ರಾಂ ಸುಳ್ಳಿ, ಧಾಮೋದರ ನಾರ್ಕೋಡು, ಪಿ.ಎಸ್. ಗಂಗಾಧರ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಕಾಂತೂರು-ಮೂರ್ನಾಡು ಪಂಚಾಯಿತಿ ಅಧ್ಯಕ್ಷರು ಕುಶನ್ ರೈ, ಮುಕ್ಕಾಟೀರ ಸಂದೀಪ್, ಅಪ್ರು ರವೀಂದ್ರ ಹಾಗೂ ಸೊಸೈಟಿಯ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು.