ಸಾರಾಂಶ
ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಬಿದ್ದಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಟ್ಕಳ: ಪಟ್ಟಣದ ಮುಗ್ದುಮ್ ಕಾಲನಿಯ ಗುಡ್ಡದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಹಲವು ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಬಿದ್ದಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹಿಂದೂ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ ಮುಗ್ದೂಮ್ ಕಾಲನಿಯ ಗುಡ್ಡ ಪ್ರದೇಶದಲ್ಲಿ ನೂರಾರು ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಹಾಗೂ ರಕ್ತದ ಕಲೆಗಳು ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ದಿನಗಳಿಂದ ಇಲ್ಲೇ ಜಾನುವಾರು ಹತ್ಯೆ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹಿಂದೂ ಸಂಘಟನೆಯ ಯುವಕರು ಮೂಳೆಗಳ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಆಕ್ರೋಶ ಹೊರಹಾಕಿದ್ದಾರೆ.ಗುಡ್ಡದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಹತ್ಯೆ ನಡೆದರೂ ಪೊಲೀಸ್ ಇಲಾಖೆ ಗಮನಿಸಿಲ್ಲವೇ? ಎಂದು ಪ್ರಶ್ನಿಸಿರುವ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಯಂತ ನಾಯ್ಕ ಬೆಣಂದೂರು, ಘಟನೆ ಮುಚ್ಚಿ ಹೋಗುವ ಮುನ್ನ ಸೂಕ್ತ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.
ಗುಡ್ಡದಲ್ಲಿ ಜಾನುವಾರುಗಳ ಮೂಳೆಗಳು ಮತ್ತು ಅಸ್ಥಿಪಂಜರದ ವಿಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಸ್ಥಳದಲ್ಲಿ ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಿ ಘಟನೆಯನ್ನು ಸಂಪೂರ್ಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ನಿವೃತ್ತ ಸೈನಿಕ ಮತ್ತು ಬಿಜೆಪಿ ಮುಖಂಡ ಶ್ರೀಕಾಂತ ನಾಯ್ಕ ಆಸರಕೇರಿ ಆರೋಪಿಸಿದ್ದಾರೆ. ಈ ಪ್ರಕರಣವನ್ನು ಗಂಭೀವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.ಪಶ್ಚಿಮ ಘಟ್ಟಗಳ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಪ್ರತಿಕ್ರಿಯಿಸಿ, ಅರಣ್ಯ ಇಲಾಖೆಯ ಪ್ರದೇಶದಲ್ಲಿ ಮೂಳೆಗಳು ಪತ್ತೆಯಾದರೂ ಕ್ರಮಕೈಗೊಳ್ಳದಿರುವುದು ಅನುಮಾನಾಸ್ಪದವಾಗಿದೆ. ಇದರ ತ್ಯಾಜ್ಯ ಬಾವಿ ಸೇರಿ ಜಲಮೂಲ ಕಲುಷಿತಗೊಳ್ಳುತ್ತಿದೆ. ಉಸ್ತುವಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಚಿವರು ಗೋ ಹಂತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮುಗ್ದುಮ್ ಕಾಲನಿಯ ಸಿಮೆಂಟ್ ಟ್ಯಾಂಕೊಂದರಲ್ಲಿ ಜಾನುವಾರುಗಳ ರಕ್ತಸಿಕ್ತ ಮೂಳೆಗಳು ಪತ್ತೆಯಾಗಿದ್ದವು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪುರಸಭೆಯ ಮುಖ್ಯಾಧಿಕಾರಿ ಬಳಿ ಘಟನೆಗೆ ಸಂಬಂಧಿಸಿ ಮಾತನಾಡಿಸಿದಾಗ ಅವರು, ನಾವು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಸ್ವಚ್ಛಗೊಳಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಗುರುವಾರ ನಗರ ಠಾಣೆಯ ಪೊಲೀಸರು ಮತ್ತು ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ಪರಿಶೀಲಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.