ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮದ ಜಾಗೃತಿ ಮೂಡಿಸಲು ನಶಾ ಮುಕ್ತ ಭಾರತ ಅಭಿಯಾನ ಜಾರಿಗೆ ತರಲಾಗಿದೆ. ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಕಬ್ಲ್ ರಚನೆ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಶಾ ಮುಕ್ತ ಭಾರತ ಅಭಿಯಾನ ಯೋಜನೆ ಕುರಿತ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿ, ಶಾಲಾ ಕಾಲೇಜುಗಳ ಬಳಿ ಮಾದಕ ವಸ್ತು ಮಾರಾಟ ಮಾಡುವ ಡ್ರಗ್ ಪೆಡ್ಲರ್ಗಳ ಹೆಡೆಮುರಿ ಕಟ್ಟಿ, ಮಾದಕ ವಸ್ತುಗಳ ಸರಬರಾಜಿಗೆ ಕಡಿವಾಣ ಹಾಕುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಶಾಲಾ ಕಾಲೇಜುಗಳ ಕ್ಯಾಂಪಸ್ನಲ್ಲಿ ಮಾದಕ ವಸ್ತುಗಳ ಸರಬರಾಜು ಆಗುತ್ತಿದೆ. ವಿದ್ಯಾರ್ಥಿಗಳು ಈ ದುಶ್ಟಟದ ದಾಸರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ, ಶಿಕ್ಷಕರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು. ಹೊಳಲ್ಕೆರೆ, ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಗಳಲ್ಲಿ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸುವಂತೆ ಹೇಳಿದರು.ವಿದ್ಯಾರ್ಥಿ ಕ್ಲಬ್ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಚರ್ಚೆ, ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಕಾನೂನು ಸೇವಾ ಪ್ರಾಧಿಕಾರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಿ, ಮಾದಕ ವಸ್ತು ಸೇವನೆ ಅಪರಾಧ ಕೃತ್ಯಕ್ಕೆ ಎದುರಿಸಬೇಕಾದ ಕಾನೂನು ಶಿಕ್ಷೆ, ದೇಹದಲ್ಲಿ ಉಂಟಾಗುವ ಅನಾರೋಗ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಮಾದಕ ವ್ಯಸನಿಗಳನ್ನು ಗುರುತಿಸಿ ಆಪ್ತ ಸಮಾಲೋಚನೆ ನೀಡಿ, ಪುರ್ನವಸತಿಯೊಂದಿಗೆ ಚಿಕಿತ್ಸೆ ಮತ್ತು ಸೌಲಭ್ಯ ನೀಡಬೇಕು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಕಬ್ಲ್ ರಚನೆಗೆ ಶಿಕ್ಷಣ, ಪಿಯು ಹಾಗೂ ಕಾಲೇಜು ಶಿಕ್ಷಣ ಇಲಾಖೆಯಿಂದ ನಿರ್ದೇಶನ ನೀಡುವಂತೆ ಸೂಚಿಸಿದರು.
ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನದ ಕೂಪಕ್ಕೆ ಒಮ್ಮೆ ಬಿದ್ದರೆ, ಅವರ ಜೀವನವೇ ಹಾಳಾಗುತ್ತದೆ. ವಿದ್ಯಾಭ್ಯಾಸ ಮೊಟಕುಗೊಳಿಸಿ ನಾನಾ ಸಂಕಷ್ಟಕ್ಕೆ ಸಿಲುಕ ಬೇಕಾಗುತ್ತದೆ. ದೇಶದ ಉನ್ನತಿ ವಿಚಾರಗಳು ಶಾಲಾ ಕಾಲೇಜುಗಳಿಂದಲೇ ಮೊದಲಾಗುತ್ತವೆ. ಇಂತಹ ವಿದ್ಯಾರ್ಥಿಗಳೇ ಮಾದಕ ವ್ಯಸನಿಗಳಾದರೆ ದೇಶದ ಭವಿಷ್ಯಕ್ಕೆ ಮಂಕು ಕವಿಯುತ್ತದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.ಮಾದಕ ವ್ಯಸನದ ಪಿಡುಗನ್ನು ನಿರ್ಮೂಲನೆ ಮಾಡಲು ಜಿಲ್ಲೆ ಸರ್ಕಾರೇತರ ಸಂಸ್ಥೆಗಳು ಸಹ ಕೈ ಜೋಡಿಸಬೇಕು. ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡುವುದರ ಮೂಲಕ ಮಾದಕ ವ್ಯಸನದ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿ ಕಬ್ಲ್ ಮೂಲಕ ಹಮ್ಮಿಕೊಳ್ಳುಬೇಕು. ಈ ಕಾರ್ಯಗಳಿಗೆ ಜಿಲ್ಲಾ ಮಟ್ಟದ ನಶಾ ಮುಕ್ತ ಭಾರತ ಅಭಿಯಾನ ಸಮಿತಿ ಕ್ರಿಯಾ ಯೋಜನೆ ರೂಪಿಸಿ, ಲಭ್ಯ ಇರುವ ₹10 ಲಕ್ಷ ಅನುದಾನ ವಿನಿಯೋಗಿಸುವಂತೆ ವಿನಂತಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಮಾತನಾಡಿ ಎನ್ಡಿಪಿಎಸ್(ದಿ ನಾರ್ಕೋಟಿಕ್ಸ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ) ಹಾಗೂ ಕೋಪ್ಟಾ ಕಾಯ್ದೆ ಪಾಲನೆಯಾದರೆ ಮಾದಕ ವ್ಯಸನ ತಡೆಗಟ್ಟಬಹದು. ಜಿಲ್ಲೆಯಲ್ಲಿ ಮಾದಕ ವ್ಯಸನದ ಪ್ರಭಾವ ಹೆಚ್ಚಿರುವ ಸ್ಥಳ ಗುರುತಿಸಿ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.ನಿವೃತ್ತ ಸರ್ಕಾರಿ ಅಧಿಕಾರಿಗಳಾದ ಬಿ.ಪಿ.ಪ್ರೇಮನಾಥ್ ಹಾಗೂ ತಿಮ್ಮಪ್ಪ.ಟಿ ಇವರನ್ನು ನಶಾಮುಕ್ತ ಭಾರತ ಅಭಿಯಾನ ಸಮಿತಿಯಡಿ ಸದಸ್ಯರನ್ನಾಗಿ ಶಿಫಾರಸ್ಸು ಮಾಡಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್, ಜಿಲ್ಲಾ ವಿಕಲಚೇತನ ಕಲ್ಯಾಣಧಿಕಾರಿ ಸೋಮಶೇಖರ್, ಡೇಟ್ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಡಾ.ಶಿವಣ್ಣ, ಧರ್ಮಸ್ಥಳ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಯೋಜನಾಧಿಕಾರಿ ನಾಗರಾಜ.ಪಿ ಸೇರಿದಂತೆ ಇತರು ಉಪಸ್ಥಿತರಿದ್ದರು.----------
ಜಿಲ್ಲಾಧಿಕಾರಿ ಕಚೇರಿ ಸಭಾಂಗಯಣದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಕುರಿತ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.