ಕನ್ನಡಪ್ರಭ ವಾರ್ತೆ ಮದ್ದೂರು

ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರ ಹಾಗೂ ತಾಲೂಕು ವ್ಯಾಪ್ತಿಯ ವಿವಿಧ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ ಗಳಿಗೆ ಜಾಗೃತ ದಳ ಧಿಡೀರ್ ಭೇಟಿ ದಾಖಲೆಗಳನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಹೆಣ್ಣು ಭ್ರೂಣ ಹತ್ಯೆ ತಡೆ ಜಾಗೃತ ದಳ ತಂಡ ತಾಲೂಕಿನ ಐದು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ ಗಳಿಗೆ ತಹಸೀಲ್ದಾರ್ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿ ಹಲವು ಕಡತಗಳನ್ನು ಪರಿಶೀಲಿಸಿ ಮಹಿಳೆಯರ ಪ್ರಸವಕ್ಕೆ ಯಾವ ದಾಖಲೆಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಪಡೆದಕೊಂಡರು.

ಖಾಸಗಿ ಡಯಾಗ್ನೋಸ್ಟಿಕ್ ಕ್ಲಿನಿಕ್ ಗಳಿಗೆ ಭೇಟಿ ನೀಡಿದಾಗ 18 ವರ್ಷದೊಳಗಿನ ಗರ್ಭಿಣಿಯರು ಚಿಕಿತ್ಸೆ ಪಡೆದಿರುವ ಬಗ್ಗೆ ಹಾಗೂ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಿದರು. ಕಳೆದ ಆರು ತಿಂಗಳ ವಿವಿಧ ದಾಖಲೆಗಳನ್ನು ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆಯಡಿ ಪರಿಶೀಲನೆ ಮಾಡಿದರು.

ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಹಾಗೂ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಕ್ಕೆ ಪಡೆದರು. ಕಳೆದ ಬಾರಿ ಮೂರು ಬಾಲ್ಯ ವಿವಾಹ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಎಲ್ಲಾ ದಾಖಲೆಗಳನ್ನು ಪಡೆದು ನ್ಯೂನ್ಯತೆ ಕಂಡು ಬಂದರೆ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ತಂಡ ಮಾಹಿತಿ ನೀಡಿದರು.


ಬಾಲ್ಯ ವಿವಾಹ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಡೆದರೆ ಕಾನೂನು ಕ್ರಮ, ಶಾಲಾ, ಕಾಲೇಜುಗಳು, ಗ್ರಾಮಮಟ್ಟದಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಿ ಜೊತೆಗೆ ಅರಿವು ಮೂಡಿಸಬೇಕು. ಭ್ರೂಣ ಲಿಂಗಪತ್ತೆ ಮತ್ತು ಹತ್ಯೆ ಮಾಡಬಾರದು ಹಾಗೂ ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರು ಕೂಡ ತಾಲೂಕು ಆಡಳಿತದೊಟ್ಟಿಗೆ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್ ಮಾತನಾಡಿ, ತಾಲೂಕಿನ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಗರ್ಭಿಣಿಯರಿಗೆ ಇರುವ ಸೌಕರ್ಯಗಳು ಹಾಗೂ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆಯಡಿ ದಾಖಲೆಗಳ ನಿರ್ವಹಣೆ ಬಗ್ಗೆ ಪರಿಶೀಲಿಸಿದ್ದೇವೆ ಎಂದರು.

ತಾಲೂಕಿನಲ್ಲಿ ಎರಡು ಮತ್ತು ಮೂರು ಹೆಣ್ಣು ಮಕ್ಕಳಿದ್ದು, ಮತ್ತೆ ಗರ್ಭಿಣಿಯಾಗಿರುವ ಮಹಿಳೆಯರ ಮಾಹಿತಿಗಳನ್ನು ಸ್ಕ್ಯಾನಿಂಗ್ ಸೆಂಟರ್ ಗಳಿಂದ ಪಡೆದುಕೊಂಡು ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರ ಒಳಗೊಂಡಂತೆ ತಂಡ ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದರು.

ಪದೇ ಪದೇ ಸ್ಕ್ಯಾನಿಂಗ್ ಮಾಡಿಸುವುದು, ಜಿಲ್ಲೆ, ತಾಲೂಕುಗಳಿಂದ ಮದ್ದೂರಿಗೆ ಬಂದು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ ಗಳಲ್ಲಿ 18 ವರ್ಷದೊಳಗಿನ ಪ್ರಸವ ಚಿಕಿತ್ಸೆ ನಡೆಸುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದರು.

ಜಾಗೃತ ತಂಡ ಮದ್ದೂರು ಮೆಡಿಕಲ್ ಲ್ಯಾಬ್ , ಡಿಟು ಡಯಾಗ್ನೋಸ್ಟಿಕ್ ಸೆಂಟರ್ , ಸರೋವರ ಡಯಾಗ್ನೋಸ್ಟಿಕ್ ಸೆಂಟರ್ , ಕೆಎಂ.ದೊಡ್ಡಿಯ ಅಸ್ಟರ್ ಜಿ.ಮಾದೇಗೌಡ , ಮಂಡ್ಯ ಸಿಟಿ ಲ್ಯಾಬೋರೆಟರಿ ಸೆಂಟರ್ ಗಳಿಗೆ ಆಗಮಿಸಿ ದಾಖಲೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.

ಈ ವೇಳೆ ಜಾಗೃತದಳದ ಸದಸ್ಯರಾದ ಜಿಲ್ಲಾ ತಪಾಸಣೆ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷ ಡಾ.ಬೆಟ್ಟಸ್ವಾಮಿ, ಸದಸ್ಯರಾದ ಡಾ.ಬಾಲಕೃಷ್ಣ,ಅರುಣ್ ಕುಮಾರ್, ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಜನಾರ್ಧನ್ ಹೂತಗೆರೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ ಪ್ರವೀಣ್ ಮತ್ತು ಹರ್ಷ ಉಪಸ್ಥಿತರಿದ್ದರು.