ರೋಣ: ವೀರರಾಣಿ ಕಿತ್ತೂರು ಚೆನ್ನಮ್ಮನ ದತ್ತು ಪುತ್ರ ಸವಾಯಿ ಮಲ್ಲಸರ್ಜಾ ವಂಶಸ್ಥರಾದ (ಮರಿ ‌ಮೊಮ್ಮಗ) ವಿಜಯಕುಮಾರಸರ್ಜಾ ದೇಸಾಯಿ (78) ಭಾನುವಾರ ನಿಧನರಾದರು.

ಮೃತರಿಗೆ ಪತ್ನಿ ಸುಮಂಗಲಾ, ಪುತ್ರರಾದ ಅಭಿಯಂತರ ಮಲ್ಲಸರ್ಜಾ ದೇಸಾಯಿ, ಉಪನ್ಯಾಸಕ ಶಿವಲಿಂಗಸರ್ಜಾ ದೇಸಾಯಿ, ಪುತ್ರಿ ನಿರ್ಮಲಾ ಇದ್ದಾರೆ.

ವೈದ್ಯಕೀಯ ಅಧ್ಯಯನಕ್ಕೆ ಅನುಕೂಲವಾಗಲೆಂದು ವಿಜಯಕುಮಾರಸರ್ಜಾ ಬದುಕಿದ್ದಾಗಲೇ ದೇಹದಾನ ವಾಗ್ದಾನ ಮಾಡಿದ್ದರು. ಅದರಂತೆ ಕುಟುಂಬಸ್ಥರು ಹುಬ್ಬಳ್ಳಿ ಕೆಎಂಸಿಆರ್‌ಐಗೆ ಮೃತರ ದೇಹದಾನ ಮಾಡಿದರು. ಈ ಮೂಲಕ ಸಾವಿನಲ್ಲೂ ವಿಜಯಕುಮಾರಸರ್ಜಾ ದೇಸಾಯಿ ಸಾರ್ಥಕತೆ ಮೆರೆದಿದ್ದಾರೆ.

ವಿಜಯಕುಮಾರಸರ್ಜಾ ದೇಸಾಯಿ ಅವರು ದಲಿತ, ರೈತ, ಶೋಷಿತ ಸಮಾಜದ ಪರ ಬದುಕಿನುದ್ದಕ್ಕೂ ಹೋರಾಟ ಮಾಡಿ ನ್ಯಾಯ ಒದಗಿಸುವಲ್ಲಿ ಅಪಾರ ಶ್ರಮಿಸಿದ್ದಾರೆ.

ರೈತರ ನೀರಾವರಿ ಪಂಪ್‌ಸೆಟ್ ವಿದ್ಯುತ್ ಬಿಲ್ ಬಾಕಿ ಮನ್ನಾ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆ, ಪಶು ಆಸ್ಪತ್ರೆಗಳ ಸ್ಥಾಪನೆಗಾಗಿ ಹಾಗೂ ಚುನಾವಣೆಯಲ್ಲಿರುವ ಲೋಪ-ದೋಷಗಳನ್ನು ಸರಿಪಡಿಸುವುದು, ಅಂಚೆ ಕಚೇರಿಯಲ್ಲಿ ವಿತರಿಸಲಾಗುತ್ತಿದ್ದ ಒಂದು ರುಪಾಯಿ ರೆವಿನ್ಯೂ ಸ್ಟಾಂಪ್ ಸ್ಥಗಿತ ಮಾಡಿರುವುದನ್ನು ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಚಳವಳಿ ಹೋರಾಟ ನಡೆಸಿ ದೇಶದ ಗಮನ ಸೆಳೆದಿದ್ದರು. ಕಿತ್ತೂರು ರಾಣಿ ಚೆನ್ನಮ್ಮನ ದತ್ತು ಪುತ್ರ ಮಲ್ಲಸರ್ಜಾ ಅವರ ಜೀವನ ಚರಿತ್ರೆ ಕುರಿತು "ಸವಾಯಿ ಮಲ್ಲಸರ್ಜಾ " ಕೃತಿ ರಚಿಸಿದ್ದಾರೆ.


ಗಣ್ಯರಿಂದ ಸಂತಾಪ: ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಕೊತಬಾಳ ಗಂಗಾಧರ ಸ್ವಾಮೀಜಿ, ಶಾಸಕ ಜಿ.ಎಸ್. ಪಾಟೀಲ, ನರಗುಂದ ಶಾಸಕ ಸಿ.ಸಿ. ಪಾಟೀಲ, ಮಾಜಿ ಸಂಸದ ಆರ್.ಎಸ್. ಪಾಟೀಲ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ‌.ಎಸ್‌. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ಸಂಯುಕ್ತಾ ಬಂಡಿ, ಗಜೇಂದ್ರಗಡ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪ್ರಭು ಮೇಟಿ, ಸಿದ್ದು ಪಾಟೀಲ, ಮುತ್ತಣ್ಣ ಪಾಟೀಲ ಯಾವಗಲ್ಲ ಸೇರಿದಂತೆ ಅನೇಕ ಗಣ್ಯರು, ಮಠಾಧೀಶರು ಸಂತಾಪ‌ ಸೂಚಿಸಿದ್ದಾರೆ.