ಸಾರಾಂಶ
ರಾಜ್ಯ ಬಿಜೆಪಿಗೆ ವಿಜಯೇಂದ್ರ ಸಾರಥ್ಯ ಸ್ವಾಗತಾರ್ಹ: ಗುರುನಾಥ ಕೊಳ್ಳುರ್
ಕನ್ನಡಪ್ರಭ ವಾರ್ತೆ ಬೀದರ್ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರು ಆಯ್ಕೆಯಾಗಿರುವುದು ಅತ್ಯಂತ ಸ್ವಾಗತಾರ್ಹ ಹಾಗೂ ಹರ್ಷವನ್ನು ತಂದಿದೆ ಎಂದು ಬಿಜೆಪಿ ಹಿರಿಯ ಮುಖಂಡ ಗುರುನಾಥ ಕೊಳ್ಳೂರ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಬಿ.ವೈ. ವಿಜಯೇಂದ್ರ ಪಕ್ಷದ ದೊಡ್ಡ ಶಕ್ತಿಯಾಗಿದ್ದಾರೆ. ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ ಹಾಗೂ ಗರಡಿಯಲ್ಲಿ ಬೆಳೆದಿರುವ ವಿಜಯೇಂದ್ರ ಸಂಘಟನಾ ಚತುರತೆ ಹೊಂದಿದ್ದಾರೆ. ತಮಗೆ ವಹಿಸಿರುವ ಎಲ್ಲ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ, ಅಚ್ಚುಕಟ್ಟಾಗಿ ನಿಭಾಯಿಸಿ ಎಲ್ಲರ ಅಚ್ಚುಮೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರ ಸೇವೆಯನ್ನು ಗುರುತಿಸಿ ವರಿಷ್ಠರು ರಾಜ್ಯ ಅಧ್ಯಕ್ಷ ಹೊಣೆ ವಹಿಸಿರುವುದು ಸಮಯೋಚಿತ ನಿರ್ಧಾರವಾಗಿದೆ. ಹೈಕಮಾಂಡ್ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದರು.ವಿಜಯೇಂದ್ರ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದಾರೆ. ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವ ವಾಣಿಯಂತೆ ಸರಳಾತಿ ಸರಳ ವ್ಯಕ್ತಿತ್ವದೊಂದಿಗೆ ಜನಸೇವೆಯಲ್ಲಿ ತೊಡಗಿದ್ದಾರೆ. ಜನಪರ, ಜೀವಪರ ಕಾಳಜಿ ಹೊಂದಿದ್ದಾರೆ. ಸರ್ವರ ಹಿತದಿಂದ ದುಡಿಯುತ್ತಿದ್ದು, ಚಲುವ ಕನ್ನಡ ನಾಡು ಕಟ್ಟುವ ಸಂಕಲ್ಪ ಹೊಂದಿ ರಾಜ್ಯಾದ್ಯಂತ ಸಂಚಾರ ಮಾಡುತ್ತಿದ್ದಾರೆ. ಇವರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಡಿರುವುದರಿಂದ ರಾಜ್ಯದಲ್ಲಿ ಬಿಜೆಪಿಗೆ ಹೊಸ ಶಕ್ತಿ, ಸ್ಫೂರ್ತಿ, ಚೈತನ್ಯ ತುಂಬಿದಂತಾಗಿದೆ. ವಿಶೇಷವಾಗಿ ಯುವ ಸಮೂಹಕ್ಕೆ ದೊಡ್ಡ ಬಲ ನೀಡಿದಂತಾಗಿದೆ ಎಂದಿದ್ದಾರೆ.
ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಮುಂಬರುವ ಲೋಕಸಭೆ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಿ ದಾಖಲೆ ಮಾಡುವ ವಿಶ್ವಾಸವಿದೆ. ವಿಜಯೇಂದ್ರ ಎಲ್ಲ ಮುಖಂಡರೊಂದಿಗೆ ಬೆರೆತು, ಎಲ್ಲರಿಗೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಸಹಕಾರದೊಂದಿಗೆ ತಮ್ಮ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸವಿದೆ. ಬಿಜೆಪಿ ರಾಷ್ಟ್ರೀಯ ನಾಯಕರು ಕೈಗೊಂಡ ನಿರ್ಣಯ ಮತ್ತೊಮ್ಮೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಗುರುನಾಥ ಕೊಳ್ಳುರ್ ತಿಳಿಸಿದ್ದಾರೆ.