70 ದಿನದಲ್ಲಿ 10000 ಕಿ.ಮೀ. ಸುತ್ತಿದ ವಿಜಯೇಂದ್ರ!

| Published : Feb 04 2024, 01:31 AM IST

ಸಾರಾಂಶ

ಅತಿ ಕಡಿಮೆ ಅವಧಿಯಲ್ಲಿ 27 ಜಿಲ್ಲೆಗೆ ಭೇಟಿ ನೀಡಿದ ರಾಜ್ಯ ಬಿಜೆಪಿಯ ಮೊದಲ ಅಧ್ಯಕ್ಷ ಎಂಬ ದಾಖಲೆಗೆ ವಿಜಯೇಂದ್ರ ಪಾತ್ರರಾಗಿದ್ದಾರೆ. ಇದರ ಜೊತೆಗೆ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟಿಸಲು ಮತ್ತೊಂದು ಸುತ್ತಿನ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೇವಲ 70 ದಿನಗಳ ಕಡಿಮೆ ಅವಧಿಯಲ್ಲಿ ಪಕ್ಷ ಸಂಘಟನೆಗಾಗಿ ರಾಜ್ಯದಾದ್ಯಂತ ಬರೋಬ್ಬರಿ‌ ಹತ್ತು ಸಾವಿರ ಕಿ.ಮೀ. ಸಂಚರಿಸಿದ್ದಾರೆ.ಪಕ್ಷದ ಈ ಹಿಂದಿನ ಇತರೆ ರಾಜ್ಯಾಧ್ಯಕ್ಷರಿಗೆ ಹೋಲಿಸಿದರೆ ಇಷ್ಟು ಕಡಿಮೆ ಅವಧಿಯಲ್ಲಿ 10 ಸಾವಿರ ಕಿ.ಮೀ. ಪ್ರವಾಸ ಮಾಡಿದ್ದು ದಾಖಲೆಯೇ ಸರಿ. ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೊಸದಾಗಿ ಮಹತ್ವದ ಜವಾಬ್ದಾರಿ ವಹಿಸಿಕೊಂಡ ಹಿನ್ನೆಲೆ ರಾಜಕೀಯ ಅನುಭವಕ್ಕಾಗಿ ರಾಜ್ಯ ಸುತ್ತಿ ಬರಲು ಸಲಹೆ ನೀಡಿದ್ದರು. ಅದರ ಅನುಸಾರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ಪ್ರವಾಸ ಆರಂಭಿಸಿದರು.

ತಂದೆಯ ಮಾತಿನಂತೆ ಇಡೀ ರಾಜ್ಯ ಸುತ್ತಾಡಿ ಜನರ ನಾಡಿ ಮಿಡಿತ, ‌ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡುವಲ್ಲಿ ವಿಜಯೇಂದ್ರ ಬಹುತೇಕ ಯಶಸ್ವಿಯಾಗಿದ್ದಾರೆ.

ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ತುಮಕೂರಿನ ಸಿದ್ಧಗಂಗಾ ಕ್ಷೇತ್ರ ಹಾಗೂ ಮನೆ ದೇವರು ಯಡಿಯೂರು ಸಿದ್ದಲಿಂಗೇಶ್ವರ ದರ್ಶನದಿಂದ ಆರಂಭವಾಗಿದ್ದ ಪ್ರವಾಸ ಶಿವಮೊಗ್ಗ, ಬೀದರ್, ಕಲಬುರ್ಗಿ, ಮಂಗಳೂರು, ‌ಕೊಪ್ಪಳ, ಚಿತ್ರದುರ್ಗ, ರಾಯಚೂರು ಸೇರಿದಂತೆ 27 ಜಿಲ್ಲೆಗಳಲ್ಲಿ ಸಂಚರಿಸುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನ ಮಾಡಿದ್ದಾರೆ.ರಾಜ್ಯಾಧ್ಯಕ್ಷರಾದ ಬಳಿಕ ಅತಿ ಕಡಿಮೆ ಅವಧಿಯಲ್ಲಿ ಒಂದು ಸುತ್ತು ರಾಜ್ಯ ಪ್ರವಾಸ ಮುಗಿಸುತ್ತಿರುವ ವಿಜಯೇಂದ್ರ‌ ಅವರು ಲೋಕಸಭಾ ಸಮರದ ಪ್ರಚಾರದ ಭಾಗವಾಗಿ ಮತ್ತೊಂದು ಸುತ್ತಿನ ಪ್ರವಾಸಕ್ಕೂ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.ಕಾಲಿಗೆ‌ ಚಕ್ರ ಕಟ್ಟಿಕೊಂಡವರಂತೆ ಬಿಡುವಿಲ್ಲದ‌ ವಿಜಯೇಂದ್ರ ಪ್ರವಾಸಕ್ಕೆ ಪಕ್ಷದ ಅನೇಕ ಹಿರಿಯ ನಾಯಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಕ್ಣ ಸಂಘಟನೆಯ ಕಾರ್ಯವೈಖರಿಗೆ ಸಂಘ ಪರಿವಾರದ ಮುಖಂಡರೂ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.