ವಿಭಿನ್ನ ಸೇವೆಗೆ ವಿಜಯಪುರ ಡಿಸಿಸಿ ಬ್ಯಾಂಕ್‌ ಮಾದರಿ

| Published : Oct 09 2024, 01:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಜನಸ್ನೇಹಿ ಸೇವೆ ನೀಡುವಲ್ಲಿ ಬ್ಯಾಂಕ್‌ಗಳು ಇಂದು ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮೀಣ ಮತ್ತು ಕೃಷಿಕರಿಗೆ ಸೇವೆ ನೀಡುವಲ್ಲಿ ಸಹಕಾರಿ ರಂಗ ಅಗ್ರಗಣ್ಯ. ವಿಜಯಪುರ ಡಿಸಿಸಿ ಬ್ಯಾಂಕ್‌ ಇಂತಹ ಸೇವೆ ನೀಡುವಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಭಿವೃದ್ಧಿ ಅಧಿಕಾರಿ ಎಂ.ಜಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಜನಸ್ನೇಹಿ ಸೇವೆ ನೀಡುವಲ್ಲಿ ಬ್ಯಾಂಕ್‌ಗಳು ಇಂದು ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮೀಣ ಮತ್ತು ಕೃಷಿಕರಿಗೆ ಸೇವೆ ನೀಡುವಲ್ಲಿ ಸಹಕಾರಿ ರಂಗ ಅಗ್ರಗಣ್ಯ. ವಿಜಯಪುರ ಡಿಸಿಸಿ ಬ್ಯಾಂಕ್‌ ಇಂತಹ ಸೇವೆ ನೀಡುವಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಭಿವೃದ್ಧಿ ಅಧಿಕಾರಿ ಎಂ.ಜಿ.ಪಾಟೀಲ ಹೇಳಿದರು.

ಪಟ್ಟಣದ ತಂಗಡಗಿ ರಸ್ತೆಯಲ್ಲಿನ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ಗ್ರಾಹಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ಡಿಸಿಸಿ ಬ್ಯಾಂಕ್‌ ಗ್ರಾಹಕರ ಅನುಕೂಲಕ್ಕೆ ವಿಶ್ವಾರ್ಹ ಸರಳ ಸೇವೆ ನೀಡುತ್ತಿದೆ. ಇದಕ್ಕೆ ಗ್ರಾಹಕರ ಸಹಕಾರ ಹಾಗೂ ನುರಿತ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗವೇ ಮುಖ್ಯ ಕಾರಣ ಎಂದರು.

ಬ್ಯಾಂಕ್ ರೈತರಿಗೆ, ಯುವಜನತೆಗೆ, ಮಹಿಳೆಯರಿಗಾಗಿ ವೈವಿಧ್ಯಮಯ ಸೇವೆಗಳನ್ನು ನೀಡುತ್ತಿದ್ದು, ಕೇವಲ ಸಾಲ ನೀಡುವುದಲ್ಲದೇ ತರಬೇತಿ ನೀಡುತ್ತಿದೆ. ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆಗಳಾಗುತ್ತಿದ್ದು, ಸಿಬ್ಬಂದಿ ಹೆಚ್ಚು ಕಾರ್ಯಶೀಲವಾಗಬೇಕಿದೆ ಎಂದು ತಿಳಿಸಿದರು.

ಬ್ಯಾಂಕ್ ಸಿಬ್ಬಂದಿ ಸಂಸ್ಥೆಯ ಲಾಭದ ಆಧಾರದ ಮೇಲೆ ವೇತನ ಸೌಲಭ್ಯ ಪಡೆದುಕೊಳ್ಳುವುದರಿಂದ ಸಂಸ್ಥೆ ಚೆನ್ನಾಗಿ ನಡೆಯುವ ವಾತಾವರಣ ನಿರ್ಮಿಸುವ ಜವಾಬ್ದಾರಿಯೂ ಹೊಂದಿರುತ್ತಾರೆ. ಪ್ರಾಮಾಣಿಕತೆ, ಕಳಕಳಿ ಮತ್ತು ಗ್ರಾಹಕರಿಗೆ ಸೂಕ್ತ ಸೇವೆ ನೀಡುವ ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತವೆ. ಆದ್ದರಿಂದ ಸಹಕಾರಿ ರಂಗದ ಸಿಬ್ಬಂದಿ ತಮ್ಮ ಸಂಸ್ಥೆಗಳಲ್ಲಿ ಉತ್ತಮ ಸೇವೆ ನೀಡುವ ಬಗ್ಗೆ ಗಮನಹರಿಸಬೇಕು. ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿಸಿ ಬ್ಯಾಂಕಿನ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಹೇಳಿದರು.

ವಿಜಯಪುರ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಆರ್.ಬಿ.ಗುಡದಿನ್ನಿ ಅಧ್ಯಕ್ಷತೆ ವಹಿಸಿದ್ದರು, ಡಿಸಿಸಿ ಬ್ಯಾಂಕಿನ ತರಬೇತಿ ಸಂಯೋಜಕ ಆರ್.ಎಂ.ಬಣಕಾರ, ವಿಜಯಪುರ ಡಿಸಿಸಿ ಬ್ಯಾಂಕ್‌ ಉಪ ಪ್ರಧಾನ ವ್ಯವಸ್ಥಾಪಕ ಜೆ.ಬಿ.ಪಾಟೀಲ, ತಾಲೂಕಾ ನೋಡಲ್ ಅಧಿಕಾರಿ ಎನ್.ಜಿ.ಜನಿವಾರ, ಗಣ್ಯರಾದ ಸೋಮನಗೌಡ ಬಿರಾದಾರ(ಕವಡಿಮಟ್ಟಿ) ಮುದ್ದೇಬಿಹಾಳ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಪಿ.ಎಸ್.ಪಾಟೀಲ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಎಂ.ಆರ್.ನಾಯಕ, ಮಹಾವೀರ ಸಗರಿ, ಕ್ಷೇತ್ರಾಧಿಕಾರಿಗಳಾದ ಎಲ್.ಎಚ್.ರಾಠೋಡ, ಬಸವರಾಜ ಪಡದಾನಿ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಪ್ರತಿಭಾ ಅಂಗಡಗೇರಿ, ಭಾರತಿ ಪಾಟೀಲ ಹಾಗೂ ಬ್ಯಾಂಕ್‌ ಸಿಬ್ಬಂದಿ ವರ್ಗದವರು, ಗ್ರಾಹಕರು ಇದ್ದರು.----------

ಕೋಟ್‌........

ಇತ್ತೀಚೆಗೆ ಎಲ್ಲ ಬ್ಯಾಂಕ್‌ಗಳು ಡಿಜಿಟಲೀಕರಣದಿಂದ ತ್ವರಿತ ಸೇವೆ ನೀಡುತ್ತಿದ್ದು, ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ ಡಿಸಿಸಿ ಬ್ಯಾಂಕ್‌ ಕೂಡ ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಕಾರಣ ಗ್ರಾಹಕರ ಎಲ್ಲ ಡಿಜಿಟಲ್ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳುವ ಆರ್ಥಿಕ ಸುಧಾರಣೆಗೆ ಮುಂದಾಗಬೇಕು.

ಎಂ.ಜಿ.ಪಾಟೀಲ, ಡಿಸಿಸಿ ಬ್ಯಾಂಕ್‌ ಅಭಿವೃದ್ಧಿ ಅಧಿಕಾರಿ