ಕೋಟ: ಇಲ್ಲಿನ ಸ್ನೇಹಕೂಟ ಸಂಘದ ಆಶ್ರಯದಲ್ಲಿ ‘ಆಷಾಢದ ಘಮಘಮ’ ಎಂಬ ಕಾರ್ಯಕ್ರಮ ವಿಶಿಷ್ಟ ಹಾಗೂ ವಿಭಿನ್ನವಾಗಿ ಸಂಪನ್ನಗೊಂಡಿತು. ಮಣೂರಿನ ‘ಬೆಳ್ಳಿ ಚುಕ್ಕಿ ಮನೆಯಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ನೇಹಕೂಟದ ಸದಸ್ಯೆಯರು ಗ್ರಾಮೀಣ ಸೊಗಡನ್ನು ಪಸರಿಸಿದರು. ಹೊಸ್ತಿಲ ಪೂಜೆ, ದೇವರಿಗೆ ವಿಶೇಷ ಪ್ರಾರ್ಥನೆಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸ್ನೇಹಕೂಟದ ಪೋಷಕರಾದ ವಿಷ್ಣುಮೂರ್ತಿ ಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ನೇಹಕೂಟದ ಅಧ್ಯಕ್ಷೆ ಭಾರತಿ ಮಯ್ಯ, ಗೌರವ ಸಲಹೆಗಾರ ಸುವರ್ಣಲತಾ, ಸಾವಿತ್ರಿ ಮಯ್ಯ, ಕಾರ್ಯದರ್ಶಿ ಸ್ಮಿತಾರಾಣಿ, ಕೋಶಾಧಿಕಾರಿ ವಿಜಯಲಕ್ಷ್ಮೀ ಭಟ್, ಉಪಾಧ್ಯಕ್ಷೆ ಗುಣವತಿ ಶೆಟ್ಟಿ, ವಿನಯ ಉಡುಪ ಭಾಗವಹಿಸಿದ್ದರು. ಸುಜಾತ ಬಾಯರಿ ವರದಿ ವಾಚಿಸಿದರು. ವನಿತಾ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಮೂಕಾಂಬಿಕಾ ಮಯ್ಯ ಆಷಾಢದ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ಶ್ವೇತಾ ಎಸ್. ಉಪಾಧ್ಯಾ ವಂದಿಸಿದರು.

ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ ಮತ್ತು ತಿಂಡಿ ತಿನಿಸುಗಳು ಗಮನ ಸೆಳೆದವು. ಕೊಚ್ಚಿಕ್ಕಿ ಉಂಡೆ, ಪತ್ರೊಡೆ, ಕೆಸುವಿನ ಗೊಜ್ಜು, ಚಟ್ಟೆ ಸೊಪ್ಪಿನ ಗೊಜ್ಜು, ಕೊಚ್ಚಿಕ್ಕಿ ಅನ್ನ, ಹುರಳಿ ಸಾರು, ಪಟ್ಟು ಉಂಡೆ, ಮಾವಿನ ಹಣ್ಣಿನ ಹಲ್ವ, ಹಲಸಿನ ಕಡಬು, ಕೊಡು ಬಳೆ, ಅತ್ರಾಸ, ಜಿಲೇಬಿ ಮುಂತಾದ ತಿಂಡಿಗಳ ಜೊತೆಗೆ ರಸ ಪ್ರಶ್ನೆ, ಮೋಜಿನ ಆಟಗಳು ಭಾಗವಹಿಸಿದವರನ್ನು ಮನರಂಜಿಸಿದವು.