ಕಳೆದ 03 ವರ್ಷಗಳ ಹಿಂದೆ ಚನ್ನರಾಯಪಟ್ಟಣ - ತಿಪಟೂರು ಮುಖ್ಯ ರಸ್ತೆಯಿಂದ ಕಾರೇಹಳ್ಳಿ ಗ್ರಾಮದವರೆಗೆ ಸುಮಾರು 850 ಮೀಟರ್ ನಂಬರ್ ರಸ್ತೆ ನಿರ್ಮಾಣಕ್ಕೆ ಸುಮಾರು 80 ಲಕ್ಷ ಅನುದಾನ ಬಿಡುಗಡೆಯಾಗಿತ್ತು.

ಕನ್ನಡಪ್ರಭ ವಾರ್ತೆ ಬಾಗೂರು

ಚನ್ನರಾಯಪಟ್ಟಣ - ತಿಪಟೂರು ಮುಖ್ಯ ರಸ್ತೆಯಲ್ಲಿರುವ ಹೋಬಳಿಯ ಕಾರೇಹಳ್ಳಿ - ಅಣತಿ ಗ್ರಾಮದವರೆಗಿನ ಮುಖ್ಯ ರಸ್ತೆಗೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾರೇಹಳ್ಳಿ ಗ್ರಾಮಸ್ಥರು ಗುರುವಾರ ಪ್ರತಿಭಟಿಸಿದರು.ಕಳೆದ 03 ವರ್ಷಗಳ ಹಿಂದೆ ಚನ್ನರಾಯಪಟ್ಟಣ - ತಿಪಟೂರು ಮುಖ್ಯ ರಸ್ತೆಯಿಂದ ಕಾರೇಹಳ್ಳಿ ಗ್ರಾಮದವರೆಗೆ ಸುಮಾರು 850 ಮೀಟರ್ ನಂಬರ್ ರಸ್ತೆ ನಿರ್ಮಾಣಕ್ಕೆ ಸುಮಾರು 80 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ ಈ ರಸ್ತೆಯಲ್ಲಿ ಬರುವ ಸರ್ವೇ ನಂಬರ್ 49/1 47/1 47/4 ಜಮೀನಿನ ಮಾಲೀಕರಾದ ನಿಂಗೇಗೌಡ , ರಂಗಪ್ಪ, ಚೇತನ್ ಕುಮಾರ್ ಎಂಬ ರೈತರು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸಿ ರಸ್ತೆ ನಿರ್ಮಾಣವಾಗುತ್ತಿರುವ ಜಾಗಕ್ಕೆ ಪರಿಹಾರ ನೀಡುವಂತೆ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಲೋಕಪಯೋಗಿ ಇಲಾಖೆ ವತಿಯಿಂದ ಕೋರ್ಟ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ರಸ್ತೆ ನಿರ್ಮಾಣಕ್ಕೆ ಈ ಹಿಂದೆ ಭೂ ಮಾಲೀಕರು ತಂದಿದ್ದ ತಡೆಯಾಜ್ಞೆಯನ್ನು ಕೋರ್ಟ್ ರದ್ದುಗೊಳಿಸಿ ರಸ್ತೆ ನಿರ್ಮಾಣಕ್ಕೆ ತಡೆ ಮಾಡದಂತೆ ತೀರ್ಪಿನಲ್ಲಿ ತಿಳಿಸಿದೆ. ಕಳೆದ 50 ವರ್ಷಗಳಿಂದಲೂ ರಸ್ತೆ ಇದ್ದು ನಾಲ್ಕೈದು ಬಾರಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿಗೊಂಡಿದೆ. ಆದರೂ ಉದ್ದೇಶಪೂರ್ವಕವಾಗಿ ಕೆಲವರು ತೊಂದರೆ ಕೊಡುತ್ತಿದ್ದಾರೆ ಎಂದು ಕೃಷಿಪತ್ತಿನ ಮಾಜಿ ಅಧ್ಯಕ್ಷ ನಟೇಶ್ ಆರೋಪಿಸಿದರು.

ಕಳೆದ ಮೂರು ವರ್ಷಗಳಿಂದ ರಸ್ತೆ ಕಾಮಗಾರಿಗೆ ತಡೆ

ಹೊಸ ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಹಳೆಯ ಡಾಂಬರು ರಸ್ತೆಯನ್ನು ತೆರವುಗೊಳಿಸಿದ್ದರು. ಆದರೆ ಇತ್ತ ಹಳೆಯ ರಸ್ತೆಯು ಇಲ್ಲ ಹೊಸ ರಸ್ತೆಯು ಇಲ್ಲ ಎಂಬ ಪರಿಸ್ಥಿತಿಯಲ್ಲಿ ದಿನನಿತ್ಯ ಸಾರ್ವಜನಿಕರು ಶಾಲಾ ಮಕ್ಕಳು ರೈತರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಅನೇಕ ಅಪಘಾತಗಳು ನಡೆದು ವಾಹನ ಸವಾರರಿಗೆ ಪೆಟ್ಟುಗಳಾಗಿವೆ. ಈಗಲಾದರೂ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿ ರಸ್ತೆ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.ಮನವೊಲಿಸಿದರು ಕೇಳದ ಭೂ ಮಾಲೀಕರು

ಕ್ಷೇತ್ರದ ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು ಕೂಡ ರಸ್ತೆ ಅಭಿವೃದ್ಧಿಯಿಂದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ನೀವು ಯಾವುದೇ ಕಾರಣಕ್ಕೂ ಅಡ್ಡಿಪಡಿಸಬೇಡಿ ಎಂದು ಭೂ ಮಾಲೀಕರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಕೂಡ ಸ್ಪಂದಿಸಿರಲಿಲ್ಲ. ಆದರೆ ಕೋರ್ಟ್ ಆದೇಶದಿಂದ ಈಗ ನ್ಯಾಯ ಸಿಕ್ಕಿದೆ. ಈ ಹಿಂದೆಯೂ ಈ ಭೂಮಾಲೀಕರು ಪಾಪನ ಘಟ್ಟ ಹಾಗೂ ಜಾಬ್ ಘಟ್ಟ ಗ್ರಾಮದ ಹೊರಗಿನ ರಸ್ತೆ ಅಭಿವೃದ್ಧಿಗೂ ಅಡ್ಡಿಪಡಿಸಿದ್ದರು. ಜೊತೆಗೆ ಸಂತೇ ಶಿವರ ಏತ ನೀರಾವರಿ ಯೋಜನೆಯ ಪೈಪ್ ಲೈನ್ ಅಳವಡಿಕೆಗೂ ತಡೆ ಮಾಡಿದರು ಎಂದು ಗ್ರಾಮಸ್ಥರಾದ ಬ್ಯಾಂಕ್ ಚಂದ್ರಣ್ಣ ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಅಣತಿ ವೆಂಕಟೇಶ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಕೆ ಟಿ ನಟೇಶ್, ಗ್ರಾ ಪಂ ಉಪಾಧ್ಯಕ್ಷ ಕೆ ಸತೀಶ್, ಮಾಜಿ ಅಧ್ಯಕ್ಷ ಬಸವಣ್ಣ, ಕೆಬಿಎಂ ಮಂಜುನಾಥ್, ಉಮಾ ನ್, ನ್ಯಾಯಬೆಲೆ ಅಂಗಡಿ ಜಗದೀಶ್,ಸೈಯಾದ್ರಿ ಗೌಡ, ರಾಮೇಗೌಡ, ಪುನೀತ್, ಗೋಪಾಲ್, ಕೆ ವಿ ರಾಜಣ್ಣ, ಪುಟ್ಟಸ್ವಾಮಿ, ರಿಯಾನ್, ಬಾಳೆಕಾಯಿ ಕಾಂತರಾಜ್, ಬೈರೇಗೌಡ, ರಕ್ಷಿತ್, ದೇವರಾಜ್, ರತ್ನಮ್ಮ, ಸಣ್ಣ ತಾಯಮ್ಮ, ಶೀಲಾ, ಮಂಜುಳಮ್ಮ, ವೀಣಾ, ಪುಷ್ಪಲತಾ, ಗಿರಿಜ, ಸೇರಿದಂತೆ ಇತರರು ಹಾಜರಿದ್ದರು.